ಆರು ತಾಣಗಳಲ್ಲಿ ಸರಣಿ
ಫೆಬ್ರವರಿ 6 ರಿಂದ ಆರಂಭವಾಗಲಿರುವ ಏಕದಿನ ಸರಣಿಯ ಮೊದಲ ಪಂದ್ಯ ಅಹಮದಾಬಾದ್ನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಎರಡನೇ ಏಕದಿನ ಪಂದ್ಯ ಫೆಬ್ರವರಿ 9 ರಂದು ಜೈಪುರದಲ್ಲಿ ಮತ್ತು ಮೂರನೇ ಏಕದಿನ ಪಂದ್ಯ ಫೆಬ್ರವರಿ 12 ರಂದು ಕೋಲ್ಕತ್ತಾದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ, ಟಿ20 ಸರಣಿಯ ಪಂದ್ಯಗಳು ಕ್ರಮವಾಗಿ ಕಟಕ್, ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಲ್ಲಿ ನಡೆಸಲು ನಿರ್ಧಾರವನ್ನು ಮಾಡಲಾಗಿತ್ತು. ಈಗ ಈ ತಾಣಗಳು ಬದಲಾವಣೆಯಾಗುವ ಸಾಧ್ಯತೆಯಿದೆ.
ಸರಣಿಗೆ ಕೋವಿಡ್ ಕಂಟಕ
ಟೈಮ್ಸ್ ನೌ ವಾಹಿನಿ ಮೂಲಗಳನ್ನು ಉಲ್ಲೇಖಿಸಿ ಮಾಡಿರುವ ವರದಿಯ ಪ್ರಕಾರ ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ ಸೀಮಿತ ಓವರ್ಗಳ ಸರಣಿ ನಡೆಯುವುದು ಅನುಮಾನ ಎನ್ನಲಾಗಿದೆ. ಭಾರತದಲ್ಲಿ ಕೊರೊನಾವೈರಸ್ನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಈ ಸರಣಿಗೆ ಅಡ್ಡಿಯಾಗಬಹುದು ಎಂದು ವರದಿಯಲ್ಲಿ ಹೇಳಿದೆ.
ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತಾ ಬಿಸಿಸಿಐ
ಇನ್ನು ವೆಸ್ಟ್ ಇಮಡೀಸ್ ವಿರುದ್ಧದ ಸೀಮಿತ ಓವರ್ಗಳ ಸರಣಿಯನ್ನು ಮುಂದುವರಿಸಲು ಬಿಸಿಸಿಐ ಮತ್ತೊಂದು ಪ್ರಮುಖ ಆಯ್ಕೆಯನ್ನು ಮುಂದಿಟ್ಟುಕೊಂಡಿದೆ ಎನ್ನಲಾಗಿದೆ. ಈಗಾಗಲೇ ಸರಣಿಯ ಆರು ಪಂದ್ಯಗಳನ್ನು ಆಯೋಜಿಸಲು ನಿಗದಿಪಡಿಸಿರುವ ಆರು ತಾಣಗಳ ಬದಲಾಗಿ ಒಂದೇ ತಾಣದಲ್ಲಿ 6 ಪಂದ್ಯಗಳನ್ನು ನಡೆಸುವ ಚಿಂತನೆಯಲ್ಲಿ ಬಿಸಿಸಿಐ ಇದೆ ಎನ್ನಲಾಗಿದೆ. ಆದರೆ ಈ ಸರಣಿಯ ತಾಣಗಳ ಬದಲಾವಣೆ ಬಗ್ಗೆ ಬಿಸಿಸಿಐ ಈವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಆಗಮಿಸಲು ಇನ್ನು ಕೆಲ ದಿನಗಳ ಸಮಯವಿರುವ ಕಾರಣ ಕಾದು ನೋಡುವ ತಂತ್ರಕ್ಕೆ ಬಿಸಿಸಿಐ ಮೊರೆ ಹೋಗಿದೆ ಎನ್ನಲಾಗಿದೆ.
ವಿಂಡೀಸ್ ಸರಣಿಗೆ ಸಿದ್ಧವಾಗಲಿದ್ದಾರೆ ರೋಹಿತ್
ಇನ್ನು ಫಿಟ್ನೆಸ್ ಕಾರಣದಿಂದಾಗಿ ದಕ್ಷಿಣ ಆಪ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿರುವ ಭಾರತದ ಸೀಮಿತ ಓವರ್ಗಳ ತಂಡದ ನಾಯಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ವೇಳೆಗೆ ಆಡಲು ಸಂಪೂರ್ಣವಾಗಿ ಸಮರ್ಥರಾಗಲಿದ್ದಾರೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಪುನರಾಗಮನದ ನಿರೀಕ್ಷೆಯಿದೆ. ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು ರೋಹಿತ್ ಶರ್ಮಾ ಬೆಂಗಳೂರಿನ ಎನ್ಸಿಎನಲ್ಲಿ ಅದ್ಭುತವಾಗಿ ಚೇತರಿಕೆ ಕಾಣುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅವರು ಲಭ್ಯವಾಗುವ ಸಾಧ್ಯತೆಯಿದೆ. ಈ ಸರಣಿಗೆ ಕನಿಷ್ಠ ಮೂರು ವಾರಗಳ ಅಂತರವಿರುವುದರಿಂದ ಆ ವೇಳೆಗೆ ರೋಹಿತ್ ಸಂಪೂರ್ಣವಾಗಿ ಫಿಟ್ ಆಗಿರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.