ತಪ್ಪಿದ ಪಿಚ್ ಊಹೆ, ಕುಂಬ್ಳೆ ಎಚ್ಚರಿಕೆ, ಅಸಡ್ಡೆಯ ಆರಂಭ
ಟಾಸ್ ಗೆದ್ದು ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿತ್ತು. ಆದರೆ ನಾನೇನಾದರೂ ಟಾಸ್ ಗೆದ್ದಿದ್ದರೆ ಬ್ಯಾಟಿಂಗ್ಗೇ ಆರಿಸುತ್ತಿದ್ದೆ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಚೆನ್ನೈ ಪಿಚ್ ಆತಿಥೇಯರ ಪರವಾಗಲಿದೆ ಎಂಬ ಆಲೋಚನೆ ಕೊಹ್ಲಿಯಲ್ಲಿತ್ತು. ಆದರೆ ಪಿಚ್ ಬಹುತೇಕ ಪ್ರವಾಸಿಗರ ಪರವಾಗಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರ ವೇಳೆಯೂ ಪಿಚ್ ಭಾರತ ತಂಡಕ್ಕೆ ಫೇವರ್ ಆಗಿ ಕಂಡಂತಿರಲಿಲ್ಲ. ಬಲಿಷ್ಠ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ಗಳ ವಿರುದ್ಧ ಬೌಲರ್ಗಳ ಪ್ರದರ್ಶನ ಚೆನ್ನಾಗಿರಬೇಕು ಎಂದು ಕುಂಬ್ಳೆ ಎಚ್ಚರಿಸಿದ್ದು ಇದೇ ಕಾರಣಕ್ಕೆ. ಇದಲ್ಲದೆ ಭಾರತದ ಅಸಡ್ಡೆ ಆರಂಭವೂ ಸೋಲಿಗೆ ಕಾರಣವೆ. ಕೊಹ್ಲಿ, ರೋಹಿತ್ ಶರ್ಮಾ ಬೇಗನೆ ಔಟಾದರೆ ಶ್ರೇಯಸ್ ಐಯ್ಯರ್-ರಿಷಬ್ ಪಂತ್ ಕೂಡ ಸೆಟ್ಲ್ ಆಗೋಕೆ ಬಹಳಷ್ಟು ಸಮಯ ತೆಗೆದುಕೊಂಡರು. ಅಂತೂ ಆರಂಭಿಕ 10 ಓವರ್ಗಳ ನಿಧಾನಗತಿಯ ಆಟ ಭಾರತವನ್ನು ಬೆಲೆ ತೆರುವಂತೆ ಮಾಡಿತು.
ಚಾಹಲ್ ಅನುಪಸ್ಥಿತಿ, ಮಧ್ಯಮ ಕ್ರಮಾಂಕದ ವೈಫಲ್ಯ
ಆಲ್ ರೌಂಡರ್ ಆಗಿ ತಂಡಕ್ಕೆ ಬಲವಾಗಿ ನಿಲ್ಲಲಿದ್ದಾರೆ ಎಂದು ಭಾವಿಸಿ ಚಾಹಲ್ ಅವರನ್ನು ತಂಡದಿಂದ ಹೊರಗಿಟ್ಟು ಶಿವಂ ದೂಬೆಗೆ ಅವಕಾಶ ನೀಡಲಾಗಿತ್ತು. ಆದರೆ ದೂಬೆಯಿಂದ ಅಂಥ ಪ್ರದರ್ಶನ ಕಾಣಲಿಲ್ಲ. ಮುಖ್ಯವಾಗಿ ಚಾಹಲ್ ತಂಡದಲ್ಲಿ ಇದ್ದಿದ್ದರೆ ವಿಂಡೀಸ್ ಮಧ್ಯಮ ಕ್ರಮಾಂಕದ ವಿಕೆಟ್ಗಳನ್ನು ಪಡೆಯಬಹುದಿತ್ತೇನೊ. ಭಾರತದ ಮಧ್ಯಮ ಕ್ರಮಾಂಕದಲ್ಲಿ ಐಯ್ಯರ್-ಪಂತ್ 100+ ಜೊತೆಯಾಟ ನೀಡಿದ್ದು ನಿಜ. ಆದರೆ ಇಬ್ಬರ ಅನುಭವದ ಕೊರತೆ ರನ್ಗೆ ಕೊಂಚ ಕಡಿವಾಣ ಹಾಕಿದ್ದೂ ಅಷ್ಟೇ ನಿಜ.
ಕರಿಬಿಯನ್ನರ ಚತುರ ಆಟ
ಟಾಸ್ ನಿರ್ಧಾರದಿಂದ ಹಿಡಿದು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರರಲ್ಲೂ ವಿಂಡೀಸ್ ತಂಡ ಬುದ್ಧಿವಂತಿಕೆ ಪ್ರದರ್ಶಿಸಿದ್ದು ಕಂಡು ಬಂದಿತ್ತು. ಭಾರತದ ಇನ್ನಿಂಗ್ಸ್ ವೇಳೆ ಬೌಲಿಂಗ್ಗೆ ತಕ್ಕಹಾಗೆ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದ ನಾಯಕ ಕೀರನ್ ಪೊಲಾರ್ಡ್ ಭಾರತದ ಪ್ರಮುಖ ವಿಕೆಟ್ಗಳನ್ನು ಮುರಿಯಲು ಯೋಜನೆ ರೂಪಿಸುತ್ತಿದ್ದರದಲ್ಲದೆ, ರನ್ ಗುರಿ 300 ಮೀರದಂತೆ ಯಶಸ್ವಿಯಾಗಿ ನೋಡಿಕೊಂಡರು. ಗುರಿ ಬೆನ್ನತ್ತುವಾಗಲೂ ವಿಂಡೀಸ್ ತಂಡ, ಪವರ್ ಪ್ಲೇಯ ಎಲ್ಲ ಹಂತಗಳಲ್ಲೂ ಭಾರತಕ್ಕಿಂತ ರನ್ ಮುನ್ನಡೆ ಸಾಧಿಸಿತ್ತು. ಜೊತೆಗೆ ಬೌಲಿಂಗ್-ಬ್ಯಾಟಿಂಗ್ ಎರಡರಲ್ಲೂ ವಿಂಡೀಸ್ ಯುವ ಆಟಗಾರರ ದಿಟ್ಟ ಆಟ ಕೂಡ ಭಾರತಕ್ಕೆ ಸೋಲಿನ ಮುಖಭಂಗ ಅನುಭವಿಸುವಂತೆ ಮಾಡಿತು.
ಮರುಕಳಿಸಿದ ಮಿಸ್ ಫೀಲ್ಡಿಂಗ್
ಈಚಿನ ಕೆಲ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಮಿಸ್ ಫೀಲ್ಡಿಂಗ್ನಿಂದಾಗಿ ಫಲಿತಾಂಶವನ್ನು ದುಬಾರಿಯಾಗಿ ಪರಿವರ್ತಿಸಿಕೊಳ್ಳುತ್ತಿದೆ. ಭಾನುವಾರದ (ಡಿಸೆಂಬರ್ 15) ಪಂದ್ಯದಲ್ಲೂ ಕೊಹ್ಲಿ ಪಡೆ ಫೀಲ್ಡಿಂಗ್ ವಿಚಾರದಲ್ಲಿ ಹಲವೆಡೆ ಎಡವಿತ್ತು. ವಿಂಡೀಸ್ ಆರಂಭಿಕ ಬ್ಯಾಟ್ಸ್ಮನ್ ಶಾಯ್ ಹೋಪ್ ಅವರ ಕ್ಯಾಚನ್ನು ರೋಹಿತ್ ಶರ್ಮಾ ಕೈಚೆಲ್ಲಿದರು. ಹೋಪ್ ಆ ಬಳಿಕ ಭರ್ಜರಿ 102 ರನ್ಗಳ ಕೊಡುಗೆಯಿತ್ತರು. ಅದಾಗಿ ವಿಂಡೀಸ್ ಗೆಲುವಿನ ರುವಾರಿ ಶಿಮ್ರಾನ್ ಹೆಟ್ಮಾಯೆರ್ (139 ರನ್) ಕ್ಯಾಚ್ ಕೂಡ ಶ್ರೇಯಸ್ ಮಿಸ್ ಮಾಡಿದ್ದರು. ಇದಲ್ಲದೆ ಮಿಸ್ ಫೀಲ್ಡಿಂಗ್ನಿಂದ ಭಾರತ, ಎದುರಾಳಿಗೆ ಹೆಚ್ಚುವರಿ ರನ್ಗಳನ್ನು ನೀಡಿತ್ತುಕೂಡ.