ಸೆನ್ವೆಸ್ ಪಾರ್ಕ್, ಫೆಬ್ರವರಿ 13: ಸರಣಿ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ಮಹಿಳಾ ಕ್ರಿಕೆಟ್ ತಂಡ ಇಂದು ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮಹಿಳ ತಂಡದ ಎದುರಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮೂರು ಪಂದ್ಯದ ಏಕದಿನ ಸರಣಿಯನ್ನು 2-1 ರಿಂದ ಗೆದ್ದ ಭಾರತದ ವನಿತೆಯರು ಇತಿಹಾಸ ನಿರ್ಮಿಸಿದ್ದರು ಈಗ ಟಿ10 ಪಂದ್ಯದಲ್ಲೂ ಅತಿಥೇಯ ದಕ್ಷಿಣ ಆಫ್ರಿಕಾವನ್ನು ಮಣಿಸಲು ಮಹಿಳೆಯರು ಸರ್ವ ಸಜ್ಜಾಗಿದ್ದಾರೆ.
ಉತ್ಸಾಹದ ಅಲೆ ಮೇಲಿರುವ ಭಾರತದ ವನಿತೆಯರ ತಂಡಕ್ಕೆ ಭಾರತದ ವೇಗಿ ಜೂಲನ್ ಗೋಸ್ವಾಮಿ ಅವರ ಅನುಪಸ್ಥಿತಿ ಕಾಡಲಿದೆ. ಇತ್ತೀಚೆಗಷ್ಟೆ 200 ವಿಕೆಟ್ ಕಬಳಿಸಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಬಿರುದಾಂಕಿತರಾದ ಜೂಲನ್ ಗೋಸ್ವಾಮಿ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡು ಟಿ20 ಸರಣಿಗೆ ಅಲಭ್ಯರಾಗಿದ್ದಾರೆ.
ಏಕದಿನ ಸರಣಿಯನ್ನು ಹೀನಾಯವಾಗಿ ಸೋತಿರುವ ಅತಿಥೇಯ ದಕ್ಷಿಣ ಆಫ್ರಿಕಾ ಮಹಿಳೆಯರು ಟಿ20 ಸರಣಿಯನ್ನು ಜಯಿಸುವ ಮೂಲಕ ಹೋದ ಮಾನವನ್ನು ವಾಪಾಸು ಗಳಿಸುವ ಸರ್ವ ಪ್ರಯತ್ನ ಮಾಡಲು ಸಜ್ಜಾಗಿದ್ದು, ಉತ್ತಮ ಕಾದಾಟವನ್ನು ಇಂದಿನ ಪಂದ್ಯದಲ್ಲಿ ನಿರೀಕ್ಷಿಸಬಹುದಾಗಿದೆ.
ಭಾರತದ ವನಿತೆಯರ ತಂಡದ ಪ್ರಮುಖ ಬ್ಯಾಟ್ಸ್ವುಮನ್ ಸ್ಮೃತಿ ಮಂದಾನ ಅತ್ಯದ್ಬುತ ಫಾರ್ಮ್ನಲ್ಲಿದ್ದು ಅವರಿಗೆ ಜೊತೆಯಾಗಿ ಮಿಥಾಲಿ ರಾಜ್, ವೇದಾ ಕೃಷ್ಣಮೂರ್ತಿ ಅವರುಗಳು ಕೂಡಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ ಹಾಗಾಗಿ ಭಾರತ ಗೆಲ್ಲುವ ಫೇವರೇಟ್ ಎನಿಸಿಕೊಂಡಿದೆ.