ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭದ ಹೊರತಾಗಿಯೂ ದೊಡ್ಡ ಮೊತ್ತಗಳಿಸಲು ಭಾರತ ವಿಫಲವಾಯಿತು. ಮೊದಲ ಇನ್ನಿಂಗ್ಸ್ನಲ್ಲಿ 78 ರನ್ಗಳೀಗೆ ಆಲೌಟ್ ಆಗಿದ್ದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ 278 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಇನ್ನಿಂಗ್ಸ್ ಹಾಗೂ 76 ರನ್ಗಳಿಂದ ಭಾರತ ಸೋಲು ಕಂಡಿದೆ.
ಒಂದು ಹಂತದಲ್ಲಿ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಮೂಡಿಸುವ ಮೂಲಕ ನಾಲ್ಕನೇ ದಿನದಾಟದಲ್ಲಿ ಸಂಪೂರ್ಣ ಬ್ಯಾಟಿಂಗ್ ಪ್ರದರ್ಶಿಸುವ ಭರವಸೆ ಮೂಡಿಸಿತ್ತು. ಆದರೆ ಇಂಗ್ಲೆಂಡ್ ವೇಗಿ ರಾಬಿನ್ಸನ್ ದಾಳಿಗೆ ಕುಸಿದ ಟೀಮ್ ಇಂಡಿಯಾ ಕೊನೆಯ 8 ವಿಕೆಟ್ಗಳನ್ನು ಕೇವಲ 63 ರನ್ಗಳಿಗೆ ಕಳೆದುಕೊಂಡಿತ್ತು. ಟೀಮ್ ಇಂಡಿಯಾದ ಈ ಬೃಹತ್ ಸೋಲಿಗೆ ಅಭಿಮಾನಿಗಳು ಹಾಗೂ ವಿಶ್ಲೇಷಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ಗಳಿಗೆ ಸಲಹೆಯನ್ನು ನೀಡಿದ್ದಾರೆ.
ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳು ತಾಂತ್ರಿಕವಾಗಿ ಬದಲಾವಣೆ ಮಾಡಿಕೊಳ್ಳುವ ಬದಲಿಗೆ ಮಾನಸಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. "ತಾಂತ್ರಿಕ ಸಂಗತಿಗಳಿಂದ ಹೆಚ್ಚಿನದಾಗಿ ಮಾನಸಿಕ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯ ಹೆಚ್ಚಾಗಿದೆ. ಇಂತಾ ಕಠಿಣವಾದ ಪರಿಸ್ಥಿತಿಗಳಲ್ಲು ನೀವು ಹೇಗೆ ರನ್ಗಳಿಸಲು ಸಾಧ್ಯವಿದೆ? 20-25 ಓವರ್ಗಳನ್ನು ಎದುರಿಸಿದ ನಂತರ ಪರಿಸ್ಥಿತಿ ಸುಲಭವಾಗುತ್ತಾ ಸಾಗುತ್ತದೆ. ನಂತರ ಬ್ಯಾಟ್ಸ್ಮನ್ಗಳು ರನ್ಗಳನ್ನು ಸುಲಭವಾಗಿ ಗಳಿಸಲು ಸಾಧ್ಯವಾಗುತ್ತದೆ. ಹೀಗಾಗಿ ಇಂತಾ ಕಠಿಣ ಸ್ಥಿತಿಯನ್ನು ಅನುಕೂಲಕರವಾಗುವಂತೆ ಬದಲಾವಣೆ ಮಾಡಿಕೊಳ್ಳಲು ಮಾನಸಿಕವಾಗಿ ಸಿದ್ಧತೆ ಅಗತ್ಯವಿದೆ" ಎಂದು ಜಹೀರ್ ಖಾನ್ ಹೇಳಿದ್ದಾರೆ.
ನಾಲ್ಕನೇ ಟೆಸ್ಟ್ಗೂ ಮುನ್ನ ಭಾರತ ಕಳವಳಪಡಬೇಕಾದ ಸಂಗತಿ ಹೇಳಿದ ಆಕಾಶ್ ಚೋಪ್ರ
ಆ ಕಠಿಣ ಹಂತಗಳಲ್ಲಿ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುವಾದ ಸಾಕಷ್ಟು ಸವಾಲುಗಳು ಇರುತ್ತವೆ. ಹೀಗಾಗಿ ನಿಮ್ಮ ಯೋಜನೆಗಳು, ಹೊಂದಾಣಿಕೆಗಳು, ಯಾವ ಶಾಟ್ ನೀವು ಬಾರಿಸಲಿದ್ದೀರಿ ಎಂಬುದನ್ನು ನೀವು ಯೋಚಿಸಬೇಕು ಎಂದಿದ್ದಾರೆ ಜಹೀರ್ ಖಾನ್. ಇನ್ನು ಯಾವ ಸಂದರ್ಭದಲ್ಲಿ ಬ್ಯಾಟ್ಸ್ಮನ್ಗಳು ದಾಳಿಯನ್ನು ನಡೆಸಬೇಕು, ಯಾವಾಗ ರಕ್ಷಣಾತ್ಮಕವಾಗಿ ಆಡಬೇಕು ಎಂಬುದು ಆಟಗಾರರ ವೈಯಕ್ತಿಕ ವಿಷಯಗಳಾಗಿರುತ್ತದೆ ಎಂದಿದ್ದಾರೆ. ಇದರಲ್ಲಿ ಎಲ್ಲಾ ಆಟಗಾರರು ಕೂಡ ಒಂದೇ ನಿಯಮವನ್ನು ಆಳವಡಿಸಿಕೊಳ್ಳಬೇಕು ಎನ್ನಲು ಸಾಧ್ಯವಿಲ್ಲ ಎಂದಿದ್ದಾರೆ.
"ಕ್ರಿಕೆಟ್ ಎಂಬುದು ತಂಡದ ಆಟ. ತನ್ನದಲ್ಲಿರುವ ಪ್ರತಿ ಆಟಗಾರನೂ ಕೂಡ ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ. ಪ್ರತಿಯೊಬ್ಬರ ತಾಂತ್ರಿಕ ಶೈಲಿಯೂ ಕೂಡ ಒಬ್ಬರಿಗಿಂತ ವಿಭಿನ್ನವಾಗಿರುತ್ತದೆ. ಹೀಗಾಗಿ ನೀವು ನಿಮ್ಮ ಆಟಕ್ಕೆ ಬೇಕಾದ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಮೂಲಕ ಈ ಕಠಿಣ ಪರಿಸ್ಥಿತಿಯಿಂದ ಹೊರಬರುವ ಪ್ರಯತ್ನ ನಡೆಸಬೇಕಿದೆ" ಎಂದು ಜಹೀರ್ ಖಾನ್ ವಿವರಿಸಿದ್ದಾರೆ.
ಆರಂಭದಲ್ಲಿ 20-25 ಓವರ್ಗಳನ್ನು ಸಮರ್ಥವಾಗಿ ಎದುರಿಸಿದ ನಂತರ ಬ್ಯಾಟ್ಸ್ಮನ್ಗಳಿಗೆ ಸವಾಲನ್ನು ಎದುರಿಸಲು ಸುಲಭವಾಗುತ್ತದೆ. ಯಾವಾಗ ನೀವು ಕಠಿಣ ಸಂದರ್ಭವನ್ನು ಸಮರ್ಥವಾಗಿ ಎದುರಿಸುತ್ತೀರಿ ಅದನ್ನು ಸಮರ್ಥವಾಗಿ ಎದುರಿಸಿದರೆ ಬಳಿಕ ಪರಿಸ್ಥಿತಿ ಸುಲಭವಾಗುತ್ತಾ ಸಾಗುತ್ತದೆ. ಟೆಸ್ಟ್ ಕ್ರಿಕೆಟ್ನ ಕಾರ್ತನಿರ್ವಹಿಸುವುದೇ ಹೀಗೆ. ಅದಾದ ಬಳಿಕ ನೀವೆ ದಾಳಿಯನ್ನು ನಡೆಸಬಹುದಾದ ಹಂತವನ್ನು ಹಾಗೂ ರಕ್ಷಣಾತ್ಮಕವಾಗಿ ಆಡಬೇಕಾದ ಸಂದರ್ಭವನ್ನು ಕಂಡುಕೊಳ್ಳಬೇಕಿದೆ" ಎಂದು ಭಾರತ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.