ಮೈಖೇಲ್: ವೇದಾ ಅವರಿಗೆ ಕ್ರಿಕೆಟ್ ಬಗ್ಗೆ ಹೇಗೆ ಆಸಕ್ತಿ ಬಂತು ?
ವೇದಾ ಕೃಷ್ಣಮೂರ್ತಿ ತಾಯಿ: ಚಿಕ್ಕವಳಿದ್ದಾಗ ನಮ್ಮ ಮನೆಯ ಪಕ್ಕದಲ್ಲಿಯೇ ಕ್ರೀಡಾಂಗಣ ಇತ್ತು. ಆಕೆಯ ಅಣ್ಣ ಪ್ರತಿದಿನ ಕ್ರಿಕೆಟ್ ಆಡಲು ಹೋಗ್ತಾ ಇದ್ರು. ಅಣ್ಣನ ಜೊತೆ ಹೋಗ್ತಾ ಇದ್ದ ವೇದಾ ಮೊದಲಿಗೆ ಅವರು ಬೌಂಡರಿ ಹೊಡೆದಾಗ ಬಾಲ್ ಎತ್ತಿಕೊಡುತ್ತಿದ್ದಳು. ಹೀಗೆ ಮುಂದುವರೆದು ಅವರ ಜೊತೆಗೆ ಕ್ರಿಕೆಟ್ ಆಡಲು ಶುರು ಮಾಡಿದಳು. ನಂತರ ಹುಡುಗರ ಜೊತೆ ಕ್ರಿಕೆಟ್ ಆಡ್ತಾ ಆಡ್ತಾ ಅದರ ಆಕೆಗೆ ಆಸಕ್ತಿ ಹುಟ್ಟಿತು.ನಂತರ ಕರಾಟೆ ಸೇರಿಕೊಂಡು ಕರ್ನಾಟಕ ಚಾಂಪಿಯನ್ ಆದಳು. ನಂತರ ಆಕೆ ಏಳನೇ ತರಗತಿ ಓದುತ್ತಿರುವ ಸಂದರ್ಭದಲ್ಲಿ ಪತ್ರಿಕೆಯಲ್ಲಿ ಬಂದ ಒಂದು ಜಾಹಿರಾತು ನೋಡಿ ಬೆಂಗಳೂರಲ್ಲಿದ್ದ ಕ್ಯಾಂಪ್ ಅಪ್ಪನ ಬಳಿ ಹಟ ಹಿಡಿದು ಹೋದಳು. ಅಲ್ಲಿ ಆಕೆಯ ಆಟ ನೋಡಿ ಕೋಚ್ ಆಕೆಗೆ ಕ್ರಿಕೆಟ್ ಬಗ್ಗೆ ಕೋಚ್ ನೀಡಲು ನಿರ್ಧರಿಸಿದ್ರು. ನಂತರ ಕಷ್ಟದ ನಡುವೆಯೇ ಬೆಂಗಳೂರಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿಯೇ ಇರಲು ವ್ಯವಸ್ಥೆ ಮಾಡಿದೆವು.
ಮೈಖೇಲ್: ವೇದಾಗೆ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
ವೇದಾ ಕೃಷ್ಣಮೂರ್ತಿ ತಾಯಿ: ಆಕೆಗೆ ಮೊದಲಿನಿಂದಲೂ ಕ್ರೀಡೆಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ಈಗಾಗಿಯೇ ತರಗತಿಗಳಲ್ಲಿ ಓಟದ ಸ್ಪರ್ಧೆ. ಲಾಂಗ್ ಜಂಪ್, ಹೈ ಜಂಪ್, ಖೋ ಖೋ, ಕಬ್ಬಡ್ಡಿಗಳಲ್ಲಿ ವೇದಾ ಭಾಗವಹಿಸಿ ಪ್ರಶಸ್ತಿ ಗಿಟ್ಡಿಸಿಕೊಳ್ತಾ ಇದ್ದಳು. ಅವರ ಪ್ರಶಸ್ತಿ ಕೋಡುವುದೇ ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿತ್ತು.
ಮೈಖೇಲ್: ವೇದಾ ಫೆವರೇಟ್ ಫುಡ್ ಯಾವುದು ?
ವೇದಾ ಕೃಷ್ಣಮೂರ್ತಿ ತಾಯಿ: ಪಲವ್ ಹಾಗೂ ಬಿರಿಯಾನಿ ವೇದಾ ಫೆವರೇಟ್ ಫುಡ್ . ಬೆಳಿಗ್ಗೆ ಐದು ಗಂಟೆಗೆ ಎದ್ದು ಹಾಲು ಕುಡಿದು ಪ್ರಾಕ್ಟಿಸ್ ಗೆ ಹೋಗ್ತಾ ಇದ್ದಳು. ಪ್ರಾಕ್ಟಿಸ್ ನಿಂದ ಬಂದ ನಂತರ ಆಕೆಗೆ ಪಲಾವ್ ಬೇಕು. ಆಕೆ ಫ್ರೀ ಇದ್ದಾಗ ಆಕೆಯ ಬಿರಿಯಾನಿ ಮಾಡಿಕೊಳ್ತಾ ಇದ್ದಳು. ಆಕೆಯ ಮಾಡಿದ ಬಿರಿಯಾನಿ ತಿನ್ನುವುದೇ ಮಜಾ ಅಷ್ಟು ರುಚಿಕಟ್ಟಾಗಿ ಇರ್ತಿತ್ತು
ಮೈಖೇಲ್: ಕ್ರಿಕೆಟ್ ಹೊರತಾಗಿ ವೇದಾಗೆ ಬೇರೆ ಯಾವುದರ ಬಗ್ಗೆ ಆಸಕ್ತಿ ಇತ್ತು?
ವೇದಾ ಕೃಷ್ಣಮೂರ್ತಿ ತಾಯಿ: ನಮಗೆ ವೇದಾಳನ್ನು ಡಾಕ್ಟರ್ ಮಾಡಬೇಕು ಎಂಬ ಆಸೆ ಇತ್ತು. ಅದ್ರಲ್ಲೂ ಆಕೆಯನ್ನು ಜುಡೋ ಪಟು ಮಾಡಬೇಕು ಎಂಬ ಆಸೆ ಅವರ ತಂದೆಗೆ ಇತ್ತು. ಆದ್ರೆ ಕ್ರಿಕೆಟ್ ಆಕೆಯನ್ನು ಸೆಳೆದುಕೊಂಡಿದ್ದು ಅದಿಂದು ಬೇರೆಯೇ ಆದ ಕತೆ.
ಮೈಖೇಲ್: ವೇದಾ ಕ್ರಿಕೆಟ್ ಅನ್ನು ಆಯ್ಕೆ ಮಾಡ್ಕೊಂಡಾಗ ಏನಾದ್ರು ಅಪಸ್ವರಗಳು ಬಂದಿತ್ತಾ?
ವೇದಾ ಕೃಷ್ಣಮೂರ್ತಿ ತಾಯಿ: ಅದಕ್ಕೆ ಅವರ ತಂದೆ ಅವಕಾಶವನ್ನೇ ಮಾಡಿಕೊಟ್ಟಿರಲಿಲ್ಲ. ಅವರ ತಂದೆಯದ್ದು ಒಂದೇ ನಿರ್ಧಾರ ಆ ರೀತಿಯ ಮಾತುಗಳೇ ಬರಲಿಲ್ಲ ಅವರಪ್ಪನ ನಿರ್ಧಾರವೇ ಅಂತಿಮ ವಾಗಿದ್ದು ಅದೇ ರೀತಿ ಆಕರ ನಡೆದುಕೊಂಡಿದ್ದಾಳೆ.ಹಾಗೆಯೇ ಅವರಪ್ಪನಿಗೆ ಹಾಗೂ ಕುಟುಂಬಕ್ಕೆ ಗೌರವ ತಂದುಕೊಟ್ಟಿದ್ದಾಳೆ. ಹಾಗೂ ನಮ್ಮೂರಿಗೆ ಗೌರವ ತಂದುಕೊಟ್ಟಿದ್ದಾಳೆ ಎಂದು ಎಲ್ಲರೂ ಅಭಿಮಾನ ಪಡ್ತಾರೆ.ಅದು ನಮಗೆ ಹೆಮ್ಮೆ ಆಗುತ್ತದೆ.
ಮೈಖೇಲ್: ವೇದಾ ತಂಡದಿಂದ ಹೊರಗುಳಿದಾಗ ಹೇಗೆ ಮತ್ತೆ ಆಯ್ಕೆಯಾಗುವ ಛಲ ಆಕೆಗೆ ಹುಟ್ಟುತ್ತಿತ್ತು. ಆಗ ನಿಮಗೆ ಏನು ಅನಿಸುತ್ತಿತ್ತು?
ವೇದಾ ಕೃಷ್ಣಮೂರ್ತಿ ತಾಯಿ: ಆಕೆಗೆ ದೃಡ ಮನಸ್ಸಿದೆ. ಆಕೆ ಚಿಕ್ಕಂದಿನಿಂದಲೂ ಹೋರಾಟದ ಮನೋಭಾವನೆ ರೂಢಿಸಿಕೊಂಡಿದ್ದಳು. ಇಷ್ಟ ಪಟ್ಟು ಆ ದಾರಿಯಲ್ಲಿ ಹೋಗ್ತಾ ಇದ್ದಾಗ ಅಲ್ಲಿ ಎನೇ ತೊಂದರೆಗಳು ಬಂದ್ರು ಹಿಂದಿರುಗಲ್ಲ ಎಂಬ ಛಲ ಆಕೆಗೆ ಇದೆ. ಕಷ್ಟವನ್ನು ನಮ್ಮ ಬಳಿ ಆಕೆ ಹೇಳಿಕೊಳ್ಳಲ್ಲ ಆ ವೇಳೆ ನಾನೆ ಆಕೆಗೆ ಸಾಮಾಧಾನ ಮಾಡ್ತೇನೆ. ಹಾಗೂ ಆಕೆಗೆ ಒಳ್ಳೇದು ಮಾಡು ಅಂತಾ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ಹಾಗೂ ಕ್ರೀಡೆಯಲ್ಲಿ ಸೋಲಿ ಗೆಲುವು ಸಾಮಾನ್ಯ ದೃತಿಗೆಡದೇ ಮುಂದೆ ಹೋಗು ಅಂತಾ ಆಕೆಗೆ ಸಮಾಧಾನ ಹೇಳುತ್ತೇನೆ.
ಮೈಖೇಲ್: ಚಿಕ್ಕವಳಿದ್ದಾಗ ಮಗಳು ಹೀಗೆ ಸಾಧನೆ ಮಾಡ್ತಾಳೆ ಅಂತಾ ಅನಿಸಿಕೆ ಇತ್ತಾ ?
ವೇದಾ ಕೃಷ್ಣಮೂರ್ತಿ ತಾಯಿ: ಅವಳು ಹುಟ್ಟಿನಿಂದಲೂ ಏನೋ ಸಾಧನೆ ಮಾಡ್ತಾಳೆ ಅಂತಾ ಭರವಸೆ ಇತ್ತು. ಹಾಗಾಗಿಯೇ ಆಕೆಗೆ ನಮ್ಮನೆಯಲ್ಲಿ ವಿಶೇಷ ಪ್ರೀತಿ ಇತ್ತು.
ಮೈಖೇಲ್: ಮಗಳು ಕ್ರಿಕೆಟ್ ಆಡುವಾಗ ಹೇಗ ಎಂಜಾಯ್ ಮಾಡ್ತೀರಾ? ಮತ್ತೆ ಆಕೆ ಔಟ್ ಆದಾಗ ಅಥವಾ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ? ಯಾವುದಾದರೂ ಕಣ್ಣಲ್ಲಿ ನೀರು ತಂದ ಘಟನೆ ಇದೆಯಾ ?
ವೇದಾ ಕೃಷ್ಣಮೂರ್ತಿ ತಾಯಿ: ಮಗಳು ಆಡುವ ಪ್ರತಿ ಮ್ಯಾಚ್ ಅನ್ನು ನೋಡ್ತೇನೆ ಆಕೆ ಬೌಂಡರಿ ಹೊಡೆದಾಗ ಕುಟುಂಬದವರ ಜೊತೆ ಕೂಗಿ ಕೂಗಿ ಎಂಜಾಯ್ ಮಾಡ್ತೇನೆ.ಹಾಗೆಯೇ ಆಕೆ ಬೇಗ ವಿಕೇಟ್ ಒಪ್ಪಿಸಿದಾಗ ಕಣ್ಣೀರಾಕಿದ ಘಟನೆಗಳು ಇದೆ.2017 ವರ್ಲ್ ಕಪ್ ಮ್ಯಾಚ್ ಭಾರತ ತಂಡ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು ಆ ವೇಳೆ ತುಂಬಾ ಚೆನ್ನಾಗಿ ಮಗಳು ಆಡ್ತಾ ಇದ್ದಳು ಆದ್ರೆ ಆಕೆಯ ವಿಕೇಟ್ ಬಿದ್ದಾಗ ಇಡೀ ಕುಟುಂದವರು ಕಣ್ಣೀರು ಹಾಕಿದ್ದೇವು.
ಮೈಖೇಲ್: ನಾಳೆ ಫೈನಲ್ ಮ್ಯಾಚ್ ಮಗಳಿಗೆ ಈ ಮೂಲಕ ಏನು ಹೇಳ್ತೀರಾ ?
ವೇದಾ ಕೃಷ್ಣಮೂರ್ತಿ ತಾಯಿ: ಮಗಳಿಗೆ ಮಾತ್ರವಲ್ಲ ಇಡೀ ಟೀಂ ಇಂಡಿಯಾಗೆ ಆಲ್ ದ ಬೆಸ್ಟ್ ಹೇಳಬೇಕು. ಇಂಡಿಯಾ ತಂಡ ನಾಳೆ ಮ್ಯಾಚ್ ಗೆಲ್ಲುವ ವಿಶ್ವಾಸ ಇದೆ
ಮೈಖೇಲ್: ವಿಶ್ವ ಮಹಿಳಾ ದಿನಾಚರಣೆಯಂದೇ ನಾಳೆ ಮಹಿಳೆಯ ನಿರ್ಣಾಯಕ ಪಂದ್ಯ ಇದೆ...ಈ ಮೂಲಕ ಮಹಿಳೆಯರಿಗೆ ಏನು ಹೇಳುತ್ತಿರಾ?
ವೇದಾ ಕೃಷ್ಣಮೂರ್ತಿ ತಾಯಿ: ಮಹಿಳೆಯರು ನಮ್ಮ ಕಾಲದಲ್ಲಿ ಇದ್ದದ್ದಕ್ಕೂ ಈಗ ಇರುವುದಕ್ಕೂ ವ್ಯತ್ಯಾಸ ಇದೆ. ಕೆಲ ಬಂಧನಗಳಿಂದ ಮಹಿಳೆಯರು ಮುಕ್ತ ಆಗಬೇಕು ಆಗ ಮಾತ್ರ ಸಾಧಿಸಲು ಸಾಧ್ಯ. ಹೆಣ್ಣು ಮಕ್ಕಳು ಒಂದಕ್ಕೆ ಅಂಟಿಕೊಂಡು ಇರಬಾರದು. ನಿಮ್ಮ ಜೀವನದಲ್ಲಿಯೂ ಎಲ್ಲವೂ ಇದೆ ಒಳ್ಳೆ ಮಾರ್ಗದಿಂದ ನಡೆದು ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿತರಬೇಕು ಎಂದು ಹೇಳ ಬಯಸುತ್ತೇನೆ.