ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನ
ಅಂತಿಮ 11ರ ಬಳಗದಲ್ಲಿ ಸತತ ಬದಲಾವಣೆಗಳನ್ನು ಮಾಡಿದ್ದರ ಬಗ್ಗೆ ತಂಡದ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ನಿರ್ದಿಷ್ಟ ಕ್ರಮಾಂಕಕ್ಕೆಂದು ಆಟಗಾರರನ್ನು ಆಯ್ಕೆ ಮಾಡಿದಾಗ ಅವರಿಗೆ ತಮ್ಮನ್ನು ಸಾಬೀತುಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ನೀಡಬೇಕು. ಬಳಿಕ ನಾವು ಮುಂದುವರಿದು ಯುವ ಆಟಗಾರರನ್ನು ಪರಿಗಣಿಸಬಹುದು.
ಪೂಜಾರ, ರಹಾನೆ ಸಮರ್ಥನೆ
3 ಮತ್ತು 5ನೇ ಕ್ರಮಾಂಕಗಳಲ್ಲಿ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಹಲವು ವರ್ಷಗಳಿಂದ ಉತ್ತಮ ಕೊಡುಗೆ ನೀಡಿದ್ದಾರೆ. ಇಬ್ಬರಿಗೂ ತುಂಬಾ ಅನುಭವವಿದೆ. ಇಲ್ಲಿಯೂ ಉತ್ತಮ ಆಟ ಪ್ರದರ್ಶಿಸಿದರು. ಆದರೆ, ಅವರ ಆಟದಲ್ಲಿ ಇನ್ನಷ್ಟು ಸ್ಥಿರತೆ ಬೇಕಿತ್ತು ಎಂದು ಹೇಳಿದ್ದಾರೆ.
ನಮ್ಮ ಬೌಲಿಂಗ್ ಹೆಚ್ಚು ಶಕ್ತವಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆಯಾಗಬೇಕಿದೆ. ಮಹತ್ವದ ಸರಣಿಗೆ ಹೋಗುವ ಮುನ್ನ ನಾವು ಅಗತ್ಯ ತಯಾರಿ ನಡೆಸಿದ್ದೇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಕಿರಿಯರಿಗೆ ಅವಕಾಶ
ಸಾಕಷ್ಟು ಅವಕಾಶಗಳನ್ನು ನೀಡಿದರೂ ಆಟಗಾರರು ಉತ್ತಮ ಪ್ರದರ್ಶನ ನೀಡದೆ ಇದ್ದರೆ ದೇಶಿ ಕ್ರಿಕೆಟ್ ಮತ್ತು ಭಾರತ ಎ ತಂಡದಲ್ಲಿ ಉತ್ತಮವಾಗಿ ಆಡುತ್ತಿರುವ ಯುವ ಆಟಗಾರರಿಗೆ ಮನ್ನಣೆ ನೀಡಬೇಕಾಗುತ್ತದೆ ಎಂದು ಹಿರಿಯ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಯಾರೂ ವಿಫಲವಾಗುವುದಕ್ಕೆ ಆಡುವುದಿಲ್ಲ. ಒಬ್ಬ ಆಟಗಾರನಿಗೆ ಸಾಮರ್ಥ್ಯವಿದೆ ಎಂದು ನಾವು ಗುರುತಿಸಿದರೆ, ಆತನಿಗೆ ಸಾಕಷ್ಟು ಸಂಖ್ಯೆಯ ಅವಕಾಶ ನೀಡುತ್ತೇವೆ. ನಾವು ಆಟಗಾರನನ್ನು ಕೈಬಿಡುವ ಅವಕಾಶಕ್ಕೆ ಎದುರು ನೋಡುವುದಿಲ್ಲ. ಆದರೆ, ಕೊಟ್ಟ ಅವಕಾಶವನ್ನು ಬಳಸಿಕೊಳ್ಳುವುದು ಆ ಆಟಗಾರನಿಗೆ ಬಿಟ್ಟಿದ್ದು.
ಇನ್ನಷ್ಟು ಆಟಗಾರರಿಗೆ ವಿಶ್ರಾಂತಿ
ಏಷ್ಯಾ ಕಪ್ಗೆ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವಂತೆ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಯಲ್ಲಿ ಇನ್ನಷ್ಟು ಆಟಗಾರರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಉದ್ದೇಶಿಸಿದೆ.
ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಪಂದ್ಯದ ಒಳಗೆ ಭಾರತ 24 ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದ್ದು, ಆಯ್ಕೆ ಸಮಿತಿ ಈಗಾಗಲೇ ಒಂದು ನೀಲಿನಕ್ಷೆಯನ್ನು ಸಿದ್ಧಗೊಳಿಸಿದೆ. ಕೆಲವೇ ಸ್ಥಾನಗಳನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದು ಪ್ರಸಾದ್ ಹೇಳಿದ್ದಾರೆ.
ಬಿಸಿಸಿಐ-ಸ್ಟಾರ್ ವಾಹಿನಿ ಜಟಾಪಟಿಗೆ ಕಾರಣವಾದ ಕೊಹ್ಲಿ ಅನುಪಸ್ಥಿತಿ
ಅಗರ್ವಾಲ್ಗೆ ಸ್ಥಾನ ಸಿಗಲಿದೆ
ದೇಶಿ ಕ್ರಿಕೆಟ್ನಲ್ಲಿ ನೀಡುವ ಪ್ರದರ್ಶನಕ್ಕೆ ಆದ್ಯತೆ ಕೊಡಲು ನಮ್ಮ ಸಮಿತಿ ಬದ್ಧವಾಗಿದೆ. ಕಳೆದ ಹತ್ತು ತಿಂಗಳಿನಲ್ಲಿ ಮಯಂಕ್ ಅಗರ್ವಾಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರಲ್ಲಿ ಉತ್ತಮ ಸಾಮರ್ಥ್ಯ ಇರುವುದನ್ನು ಗಮನಿಸಿದ್ದೇವೆ. ಈ ಆವೃತ್ತಿಯ ರಣಜಿಯ ಆರಂಭದಲ್ಲಿ ಅವರಿಗೆ ಸೂಕ್ತ ಅವಕಾಶ ನೀಡುವಂತೆ ಕರ್ನಾಟಕದ ಮುಖ್ಯ ಕೋಚ್ ಮತ್ತು ಸಹಾಯಕ ಕೋಚ್ ಅವರಿಗೆ ಮನವಿ ಮಾಡಿದ್ದೇವೆ. ಅವರನ್ನು ಗಮನಿಸುತ್ತಿದ್ದೇವೆ. ಉತ್ತಮವಾಗಿ ಆಡಿದ್ದಾರೆ. ಶೀಘ್ರದಲ್ಲಿಯೇ ಅದಕ್ಕೆ ಪ್ರತಿಫಲ ಪಡೆದುಕೊಳ್ಳಲಿದ್ದಾರೆ ಎಂದು ಪ್ರಸಾದ್ ತಿಳಿಸಿದ್ದಾರೆ.