ಟೀಮ್ ಇಂಡಿಯಾ ಮಾಜಿ ನಾಯಕ
ಈ ಬಾರಿಯ ಐಪಿಎಲ್ನಲ್ಲಿ ಬಹಳಷ್ಟು ನಿರೀಕ್ಷೆಯಿದ್ದ ಆಟಗಾರನೆಂದರೆ ಅದು ಮಹೇಂದ್ರ ಸಿಂಗ್ ಧೋನಿ. ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಸೆಮಿಫೈನಲ್ನಿಂದ ಹೊರಬಿದ್ದ ಬಳಿಕ ಧೋನಿ ಟೀಮ್ ಇಂಡಿಯಾದಿಂದ ಸಂಪೂರ್ಣವಾಗಿ ದೂರವುಳಿದುಬಿಟ್ಟಿದ್ದರು. ಈ ಬಾರಿಯ ಐಪಿಎಲ್ನಲ್ಲಿ ಮತ್ತೆ ಅಂಗಳಕ್ಕಿಳಿಯಲು ಸಜ್ಜಾಗುದ್ದರೂ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಟೂರ್ನಿ ತೂಗುಯ್ಯಾಲೆಯಲ್ಲಿದೆ.
ಧೋನಿ ಫಾರ್ಮ್ ಫಿಟ್ನೆಸ್ ಸಾಬೀತಾಗಬೇಕು
ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿಗೆ ಈ ಐಪಿಎಲ್ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಲು ಒಂದು ಉತ್ತಮ ವೇದಿಕೆಯಾಗಿತ್ತು. ಏಳೆಂಟು ತಿಂಗಳು ಕ್ರಿಕೆಟ್ನಿಂದಲೇ ದೂರವಾಗಿರುವ ಧೋನಿ ಫಿಟ್ನೆಸ್ ಹೇಗಿದೆ, ಅವರ ಫಾರ್ಮ್ ಯಾವ ರೀತಿಯಿದೆ ಎಂದು ಈ ಐಪಿಎಲ್ನಿಂದ ತಿಳಿಯುತ್ತಿತ್ತು. ಆಯ್ಕೆಗಾರರಿಗೂ ಈ ಪ್ರದರ್ಶನ ಸಹಕಾರಿಯಾಗುತ್ತಿತ್ತು. ಆದರೆ ರದ್ದಾದರೆ ಧೋನಿಯನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಕಾರಣಗಳೇ ಇಲ್ಲದಂತಾಗುತ್ತದೆ.
ಮಿಸ್ಟರ್ ಐಪಿಎಲ್
ಸುರೇಶ್ ರೈನಾ ಅವರನ್ನು ಮಿಸ್ಟರ್ ಐಪಿಎಲ್ ಎಂದು ಕರೆಯಲಾಗುತ್ತದೆ. ಐಪಿಎಲ್ನ ಹಲವು ದಾಖಲೆಗಳು ಸುರೇಶ್ ರೈನಾ ಹೆಸರಿನಲ್ಲಿವೆ. ಆದರೆ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಕಳೆದುಕೊಂಡಿರುವ ಸುರೇಶ್ ರೈನಾ ಐಪಿಎಲ್ಗೂ ಮುನ್ನ ಹೇಳಿಕೆಯೊಂದನ್ನು ನೀಡಿದ್ದರು. ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಸಾಧನೆಯನ್ನು ಮಾಡಿ ಮುಂದಿನ ವಿಶ್ವಕಪ್ಗೆ ಸ್ಥಾನವನ್ನು ಸಂಪಾದಿಸುವುದು ತನ್ನ ಗುರಿ ಎಂದಿದ್ದರು. ಆದರೆ ಐಪಿಎಲ್ ರದ್ದಾದರೆ ಇದಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ. ರೈನಾ ಮತ್ತೆ ಟೀಮ್ ಇಂಡಿಯಾಗೆ ಮರಳುವುದೇ ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಸಂಜು ಸ್ಯಾಮ್ಸನ್
ಟೀಮ್ ಇಂಡಿಯಾ ಸ್ಕಾಡ್ನಲ್ಲಿ ಸ್ಥಾನವನ್ನು ನಿರಂತರವಾಗಿ ಪಡೆದುಕೊಂಡು ಬರುತ್ತಿದ್ದರೂ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ವಿಫಲರಾಗಿ ನಿರಾಸೆಗೊಳಗಾದ ಆಟಗಾರ. ಆದರೆ ಕಳೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ ದೊರೆತರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಸ್ಯಾಮ್ಸನ್ಗೆ ಸಾಧ್ಯವಾಗಲಿಲ್ಲ. ಸದ್ಯ ಐಪಿಎಲ್ ಸಂಜುಗೆ ಒಂದು ಉತ್ತಮ ವೇದಿಕೆಯಾಗಿತ್ತು. ಆದರೆ ಐಪಿಎಲ್ ರದ್ದಾದರೆ ಸಂಜು ಪಾಲಿಗೆ ಮುಂದಿನ ದಿನಗಳು ಬಹಳ ಕಠಿಣವಾಗಿರುವುದರಲ್ಲಿ ಅನುಮಾನವಿಲ್ಲ.
ಕೃಣಾಲ್ ಪಾಂಡ್ಯಾ
ಈ ಬಾರಿಯ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದರೆ ಕೃಣಾಲ್ ಪಾಂಡ್ಯಾಗೂ ಮುಂದಿನ ವಿಶ್ವಕಪ್ ತಂಡದಲ್ಲಿ ಪಾಲ್ಗೊಳ್ಳಲು ಅತ್ಯುತ್ತಮ ಅವಕಾಶವೊಂದು ಸಿಕ್ಕಂತಾಗುತ್ತಿತ್ತು. ಟೀಮ್ ಇಂಡಿಯಾದಲ್ಲಿ ಬಹಳ ಸಮಯಗಳಿಂದ ಕೃಣಾಲ್ ಅವಕಾಶವನ್ನು ಪಡೆಯಲು ವಿಫಲರಾಗಿದ್ದಾರೆ. ಐಪಿಎಲ್ ರದ್ದಾದರೆ ಕೃಣಾಲ್ ಮುಂದಿನ ವಿಶ್ವಕಪ್ನಲ್ಲಿ ಸ್ಥಾನವನ್ನು ಪಡೆಯುವ ಸಾಧ್ಯತೆ ಕಂಡಿತಾ ಇಲ್ಲ.