ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯನ್ನು ಭಾರತ ಗೆದ್ದು ಬೀಗಿದೆ. ಬ್ರಿಸ್ಬೇನ್ನ ಗಾಬಾ ಅಂಗಳದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭರ್ಜರಿ 3 ವಿಕೆಟ್ಗಳ ಗೆಲುವನ್ನು ಸಾಧಿಸುವ ಮೂಲಕ ಭಾರತ 2-1 ಅಂತರದಿಂದ ಸರಣಿಯನ್ನು ಗೆದ್ದು ಈ ಹಿಂದೆ 2018-19ರ ಸರಣಿಯಲ್ಲಿ ಮಾಡಿದ ಸಾಧನೆಯನ್ನು ಪುನರಾವರ್ತಿಸಿದೆ. ಈ ವಿಶೇಷ ಟೆಸ್ಟ್ ಸರಣಿಯ ಗೆಲುವಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀಮ್ ಇಂಡಿಯಾ ಸದಸ್ಯರನ್ನು ಪ್ರಶಂಸಿದ್ದಾರೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮೂಲಕ ಈ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. "ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಯಶಸ್ಸನ್ನು ತುಂಬಾ ಸಂಭ್ರಮಿಸಿದ್ದೇವೆ. ಅದ್ಭುತವಾದ ಸಾಮರ್ಥ್ಯ ಮತ್ತು ಬದ್ಧತೆ ಸರಣಿಯುದ್ದಕ್ಕೂ ಕಂಡು ಬಂತು. ಅವರ ಗಮನಾರ್ಹವಾದ ಗುರಿ, ದೃಢ ನಿಶ್ಚಯವೂ ಕೂಡ. ಇಡೀ ತಂಡಕ್ಕೆ ಅಭಿನಂದನೆಗಳು. ನಿಮ್ಮ ಭವಿಷ್ಯಕ್ಕೆ ಶುಭಾಶಯಗಳು" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ನಲ್ಲಿ ಶುಭ ಹಾರೈಸಿದ್ದಾರೆ.
ಗಾಬಾ ಕೋಟೆ ಬೇಧಿಸಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಟೀಮ್ ಇಂಡಿಯಾ
ಗಾಬಾದಲ್ಲಿ ಕಳೆದ 32ವರ್ಷಗಳಿಂದ ಆಸ್ಟ್ರೇಲಿಯಾ ಅಜೇಯವಾಗಿ ಉಳಿದುಕೊಂಡಿತ್ತು. ಬ್ರಿಸ್ಬೇನ್ನ ಗಾಬಾ ಅಂಗಳದಲ್ಲಿ ಆಸಿಸ್ ಮಣಿಸುವುದು ಅಸಾಧ್ಯ ಎಂಬಂತಾ ಪರಿಸ್ಥಿತಿಯಿತ್ತು. ಅದೇ ಆತ್ಮವಿಶ್ವಾಸದಲ್ಲಿ ಆಸ್ಟ್ರೇಲಿಯಾ ತಂಡವೂ ಇತ್ತು. ಆದರೆ ಈ ಎಲ್ಲಾ ಆತ್ಮ ವಿಶ್ವಾಸಕ್ಕೆ ಭಾರತ ದೊಡ್ಡ ಪೆಟ್ಟು ನೀಡಿದೆ.
ಭಾರತ ತಂಡದ ಈ ಸಾಧನೆಗೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಪ್ರಶಂಸೆಯ ಸುರಿಮಳೆಗರೆಯುತ್ತಿದ್ದಾರೆ. ಪ್ರಮುಖ ಎಲ್ಲಾ ಆಟಗಾರರ ಅಲಭ್ಯತೆಯ ಮಧ್ಯೆ ಟೀಮ್ ಇಂಡಿಯಾ ಗೆಲುವು ಸಾಧಿಸಿದ ರೀತಿಗೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.