ಟಾಸ್ ಸೋತ ವಿರಾಟ್ ಕೊಹ್ಲಿ
ಚೇಸಿಂಗ್ ಗೆ ಅನುಕೂಲ ಎಂದು ಹೇಳಲಾಗಿದ್ದ ಪಿಚ್ ನಲ್ಲಿ ಟಾಸ್ ಸೋತಿದ್ದು ಬೆಂಗಳೂರಿಗೆ ಆರಂಭಿಕ ಹೊಡೆತ ನೀಡಿತು. ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆ ಮಾಡಿಕೊಂಡು ನಿಖರ ದಾಳಿ ಸಂಘಟಿಸಿ 139 ರನ್ ಗೆ ಆರ್ ಸಿಬಿ ಆಟಗಾರರನ್ನು ಕಟ್ಟಿಹಾಕಿತು.
ಸ್ಫೋಟಿಸದ ಕ್ರಿಸ್ ಗೇಲ್
ಒಂದೆಡೆ ನಿರಂತರವಾಗಿ ವಿಕೆಟ್ ಗಳು ಉದುರುತ್ತಿದ್ದರಿಂದ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ (41ರನ್, 43ಎಸೆತ, 2ಬೌಂಡರಿ, 3ಸಿಕ್ಸರ್) ಅವರಿಗೆ ಸ್ಫೋಟಕ ಆಟ ಆಡಲು ಸಾಧ್ಯವಾಗಲಿಲ್ಲ. ಅಲ್ಲದೇ ಚೆನ್ನೈ ಬೌಲರ್ ಗಳು ಗೇಲ್ ಲೋಪವನ್ನು ಅರಿತು ಬೌಲ್ ಮಾಡಿದರು. ಯಾವ ಕಾರಣಕ್ಕೂ ಗೇಲ್ ಗೆ ಬಿರುಸಾಗಿ ಬ್ಯಾಟ್ ಬೀಸಲು ಅವಕಾಶ ನೀಡಲಿಲ್ಲ.
ಎಬಿ ಡಿವಿಲಿಯರ್ಸ್ ಗೆ ಕೆಟ್ಟ ತೀರ್ಮಾನ?
ನೆಹ್ರಾ ಬೌಲಿಂಗ್ ನಲ್ಲಿ ಚೆಂಡು ಕಾಲಿಗೆ ತಾಗಿಸಿಕೊಂಡ ಎಬಿಡಿ ಎಲ್ಬಿ ಬಲೆಗೆ ಬಿದ್ದರು. ಆದರೆ ತೀರ್ಪು ಗೊಂದಲಕಾರಿಯಾಗಿದ್ದು ಚೆಂಡಿನ ಮಾರ್ಗ ನೋಡಿದರೆ ಎಲ್ ಬಿ ಸಾಧ್ಯವಿರಲಿಲ್ಲ. ಪರಿಣಾಮ ಕೇವಲ 1 ರನ್ ಗಳಿಸಿ ಎಬಿಡಿ ಫೆವಿಲಿಯನ್ ಹಾದಿ ಹಿಡಿಯಬೇಕಾಯಿತು. ಎಬಿಡಿ ನಗುತ್ತಲೇ ಸಾಗಿದ್ದು ಅವರ ಕ್ರೀಡಾ ಸ್ಫೂರ್ತಿ ಎತ್ತಿ ಹೇಳುತ್ತಿತ್ತು.
ಕುಸಿತ ತಡೆದ ಸರ್ಫರಾಜ್
ದಿನೇಶ್ ಕಾರ್ತಿಕ್ (28) ಮತ್ತು ಸರ್ಫರಾಜ್ ಖಾನ್ (31) ರನ್ ಗಳಿಸಿದ್ದು ಆರ್ ಸಿಬಿ 140 ರ ಗಡಿ ತಲುಪಲು ಸಾದ್ಯ ಮಾಡಿತು. ಬೌಲಿಂಗ್ ಗೆ ಬೆರವು ನೀಡುತ್ತಿದ್ದ ಪಿಚ್ ನಲ್ಲಿ ಬೆಂಗಳೂರು ಈ ಮೊತ್ತವನ್ನು ಕಾಪಾಡಿಕೊಳ್ಳಲು ಸಾಧ್ಯವಿತ್ತು.
ಆಶಿಶ್ ನೆಹ್ರಾ ಮಾರಕ ಬೌಲಿಂಗ್
ಅನುಭವಿ ಬೌಲರ್ ಆಶಿಶ್ ನೆಹ್ರಾ (28ಕ್ಕೆ 3) ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದರು. ಬೆಂಗಳೂರು ತಂಡದ ಪ್ರಮುಖ ವಿಕೆಟ್ ಕಬಳಿಸಿದ ನೆಹ್ರಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾದರು.
ಮೈಕೆಲ್ ಹಸ್ಸೆ ಆರ್ಭಟ
ಮೆಕಲಮ್ ಜಾಗಕ್ಕೆ ಆಗಮಿಸಿದ ಹಸ್ಸೆ ಮಹತ್ವದ ಪಂದ್ಯದಲ್ಲಿ ಬ್ಯಾಟಿಂಗ್ ವೈಭವ ಮೆರೆದರು. ಮೈಕೆಲ್ ಹಸ್ಸೆ (56 ರನ್, 46 ಎಸೆತ, 3 ಬೌಂಡರಿ, 2 ಸಿಕ್ಸರ್) ಗಳಿಸಿದ್ದು ಚೆನ್ನೈ ಗೆಲುವನ್ನು ಸುಲಭವಾಗಿಸಿತು.
160 ಗಳಿಸಿದ್ದರೆ ಜಯ ಸಾಧ್ಯವಿತ್ತು
ಹೌದು ಬ್ಯಾಟಿಂಗ್ ಗೆ ಕಷ್ಟಕರವಾಗಿದ್ದ ಪಿಚ್ ನಲ್ಲಿ ಬೆಂಗಳೂರು 160 ರನ್ ಗಳಿಸಿದ್ದರೆ ಚೆನ್ನೈ ನ್ನು ಸುಲಭವಾಗಿ ಮಣಿಸಬಹುದಿತ್ತು. ಮಧ್ಯಮ ಕ್ರಮಾಂಕದ ವೈಫಲ್ಯ, ರನ್ ಹರಿಸದ ಕೊಹ್ಲಿ ಸೋಲಿಗೆ ಹೊಣೆಗಾರಾಗಿ ನಿಲ್ಲುವಂತಾಯಿತು.