ಮುಂಬೈ, ಮೇ.14: ಕೋಲ್ಕತ್ತಾ ನೈಟ್ ರೈಡರ್ಸ್ ಕೋಚ್, ಪಾಕಿಸ್ತಾನದ ಮಾಜಿ ಕ್ರಿಕೆಟರ್ ವಾಸೀಂ ಅಕ್ರಂ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರನ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನಾಡಿದ್ದಾರೆ. ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್ ಅಷ್ಟೇ ಅಲ್ಲ ಬೌಲಿಂಗ್ ನಲ್ಲೂ ಚಮತ್ಕಾರ ತೋರಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದಿದ್ದಾರೆ.
ಇಂಗ್ಲೆಂಡಿನಲ್ಲಿ ನಾನು ಅರ್ಜುನ್ ತೆಂಡೂಲ್ಕರ್ ಅವರು ಆಡುವಾಗ ಮೊದಲು ನೋಡಿದೆ. ಒಂದು ಪ್ರದರ್ಶನ ಪಂದ್ಯದಲ್ಲಿ ನಾನು ಅವರು ಒಟ್ಟಿಗೆ ಆಡುವ ಅವಕಾಶ ಸಿಕ್ಕಿತು. ನಾನು ಮಿಡ್ ಆನ್ ನಲ್ಲಿ ನಿಂತಿದ್ದೆ. ಎಡಗೈ ವೇಗಿಯಾಗಿ ಅರ್ಜುನ್ ಹಾಕಿದ ಎಸೆತ ಬ್ರಿಯಾನ್ ಲಾರಾರ ವಿಕೆಟ್ ಉದುರಿಸಿತು ಎಂದು ವಾಸೀಂ ಅಕ್ರಂ ಹೇಳಿದ್ದಾರೆ.
ಐಪಿಎಲ್ 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗುರುವಾರ ಮಹತ್ವದ ಪಂದ್ಯವಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಸೆಣೆಸಲಿದೆ. ಪ್ಲೇ ಆಫ್ ಹಂತ ತಲುಪಲು ಮುಂಬೈಗೆ ಗೆಲುವು ಅನಿವಾರ್ಯವಾಗಿದೆ.
ಐಪಿಎಲ್ ವಿಶೇಷ ಪುಟ | ಅಂಕಪಟ್ಟಿ
ಈ ಪಂದ್ಯಕ್ಕೂ ಮುನ್ನ ಅಭ್ಯಾಸ ನಿರತ ಆಟಗಾರರ ಜೊತೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಪುತ್ರ ಅರ್ಜುನ್ ಜೊತೆ ನೆಟ್ ನಲ್ಲಿ ಅಭ್ಯಾಸ ಮಾಡುವುದು ಕಂಡು ಬಂದಿತು.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
'15ವರ್ಷ ವಯಸ್ಸಿನ ಅರ್ಜುನ್ ತೆಂಡೂಲ್ಕರ್ ಗೆ ಸೂಕ್ತ ತರಬೇತಿ ಸಿಕ್ಕರೆ ಉತ್ತಮ ಎಡಗೈ ಮಧ್ಯಮ ವೇಗಿಯಾಗಬಹುದು. ಅತನ ಬೌಲಿಂಗ್ ಶೈಲಿ, ಸ್ವಿಂಗ್ ಬಗ್ಗೆ ನಾನು ಮಾತನಾಡಿದೆ. ಕ್ರಿಕೆಟ್ ನಲ್ಲಿ ಈಗ ಫಿಟ್ನೆಸ್ ತುಂಬಾ ಮುಖ್ಯ ಈ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದೆ. ಅಪ್ಪನಂತೆ ಅರ್ಜುನ್ ನಲ್ಲೂ ಒಳ್ಳೆ ಕಲಿಕೆಯ ಗುಣವಿದೆ' ಎಂದು ಅಕ್ರಂ ಹೇಳಿದರು.
ಮುಂಬೈ ಪರ ಆಡುವ ಅರ್ಜುನ್ ಅವರು ಎಡಗೈ ಬ್ಯಾಟ್ಸ್ ಮನ್ ಬದಲಿಗೆ ಎಡಗೈ ವೇಗಿ ಆಗುವ ಲಕ್ಷಣಗಳು ಕಂಡು ಬಂದಿದೆ ಎಂದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಅಕ್ರಂ ಕೂಡಾ ಇದನ್ನೇ ಬಯಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಮಾರ್ಗದರ್ಶನ ಅರ್ಜುನ್ ಗೆ ಇದ್ದೇ ಇರುತ್ತದೆ. (ಪಿಟಿಐ)