ಐಪಿಎಲ್ 2018ರ 17ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ನಡುವೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ರಾಜಸ್ಥಾನ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಎರಡೂ ತಂಡಗಳು ಸಮ ಬಲ ಹೊಂದಿರುವ ತಂಡಗಳಾಗಿದ್ದು, ಚೆನ್ನೈ ತಂಡವು ಅನುಭವಿ ಆಟಗಾರ ಬಲದೊಂದಿಗೆ ಗೆಲ್ಲುವ ಫೆವರೇಟ್ ಎನಿಸಿಕೊಂಡಿದೆ. ಚೆನ್ನೈ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಸೋತು ಎರಡನ್ನು ಗೆದ್ದುಕೊಂಡಿದೆ. ರಾಜಸ್ಥಾನ ತಂಡವು 4 ಪಂದ್ಯಗಳನ್ನು ಆಡಿದ್ದು 2 ಅನ್ನು ಗೆದ್ದುಕೊಂಡಿದೆ.
ಈ ಪಂದ್ಯವು ಚೆನ್ನೈನಲ್ಲೇ ನಡೆಯಬೇಕಿತ್ತು, ಆದರೆ ಕಾವೇರಿ ನದಿ ನೀರಿಗೆ ಸಂಬಂಧಿಸಿದ ಪ್ರತಿಭಟನೆ ತೀವ್ರ ಸ್ವರೂಪದಲ್ಲಿ ನಡೆಯುತ್ತಿರುವ ಕಾರಣ ಚೆನ್ನೈನ ಎಲ್ಲಾ ತವರಿನ ಪಂದ್ಯಗಳನ್ನು ಪುಣೆಗೆ ವರ್ಗಾಯಿಸಲಾಗಿದೆ.
ಎರಡೂ ತಂಡಗಳು ಈವರೆಗೆ ಐಪಿಎಲ್ನಲ್ಲಿ 18 ಬಾರಿ ಮುಖಾಮುಖಿ ಆಗಿದ್ದು 6 ಪಂದ್ಯಗಳಲ್ಲಿ ರಾಜಸ್ಥಾನ ಗೆದ್ದಿದ್ದರೆ 12 ಪಂದ್ಯಗಳನ್ನು ಚೆನ್ನೈ ತಂಡ ಗೆದ್ದುಕೊಂಡಿದೆ.
ಈ ಪಂದ್ಯ ಅನುಭವಿ ಮತ್ತು ಯುವಕರ ನಡುವಿನ ಕಾದಾಟವೆಂದೇ ಹೇಳಬಹುದು. ಧೋನಿ, ಸುರೇಶ್ ರೈನಾ, ಶೇನ್ ವಾಟ್ಸನ್, ಡ್ವೇನ್ ಬ್ರಾವೋ, ಹರಿಬಜನ್ ಸಿಂಗ್ ರೀತಿಯ ಹಿರಿಯ ಅನುಭವಿ ಆಟಗಾರರು ಚೆನ್ನೈ ಕಡೆ ಇದ್ದರೆ, ಅಜಿಂಕ್ಯಾ ರಹಾನೆ, ಸಂಜು ಸ್ಯಾಮ್ಸನ್, ಶಾರ್ಟ್ ರೀತಿಯ ಯುವ ಪ್ರತಿಭಾನ್ವಿತರು ರಾಜಸ್ಥಾನ ತಂಡದ ಪರ ಇದ್ದಾರೆ.
ಪಿಚ್ ಲಘುವಾಗಿ ಸ್ಪಿನ್ಗೆ ನೆರವು ನೀಡುತ್ತದೆ ಎನ್ನಲಾಗುತ್ತಿದ್ದು, ಇಂದಿನ ಪಂದ್ಯ 'ಟೈಟ್ ಫಿನಿಶಿಂಗ್' ಪಂದ್ಯ ಆಗಲಿದೆ ಎನ್ನಲಾಗಿದೆ.