ಮುಖಾಮುಖಿಯಲ್ಲಿ ಬಲಾಬಲ ಹೀಗಿದೆ
* ಐಪಿಎಲ್ನಲ್ಲಿ ಮುಖಾಮುಖಿಯಾಗಿರುವುದು 20 ಬಾರಿ. ಚೆನ್ನೈ ತಂಡಕ್ಕೆ ಗೆಲುವು 12, ಆರ್ಸಿಬಿಗೆ ಗೆಲುವು 7. ಒಂದು ಪಂದ್ಯದಲ್ಲಿ ಫಲಿತಾಂಶ ದೊರಕಿಲ್ಲ.
* ಚಾಂಪಿಯನ್ಸ್ ಲೀಗ್ನಲ್ಲಿ ಒಮ್ಮೆ ಮುಖಾಮುಖಿ. ಅದರಲ್ಲಿ ಆರ್ಸಿಬಿ ಜಯಗಳಿಸಿತ್ತು.
* ತವರಿನ ನೆಲದಲ್ಲಿ ಆರ್ಸಿಬಿ ಚೆನ್ನೈಅನ್ನು ಒಟ್ಟು ಏಳುಬಾರಿ ಎದುರಿಸಿದೆ. ಇದರಲ್ಲಿ ಉಭಯ ತಂಡಗಳು 3-3 ಸಮಬಲ ಸಾಧಿಸಿವೆ. ಒಂದು ಪಂದ್ಯ ರದ್ದಾಗಿತ್ತು.
* ಕಳೆದ ನಾಲ್ಕು ಬಾರಿಯ ಮುಖಾಮುಖಿಗಳಲ್ಲಿ ಚೆನ್ನೈ ತಂಡಕ್ಕೆ ಗೆಲುವು
ಅಲ್ಲಿದ್ದವರು ಇಲ್ಲಿಗೆ, ಇಲ್ಲಿದ್ದವರು ಅಲ್ಲಿಗೆ!
* ಆಡಿದ ಎಲ್ಲ 21 ಪಂದ್ಯಗಳಲ್ಲಿ ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಆಡಿದ್ದರೆ, ಚೆನ್ನೈ ತಂಡದಲ್ಲಿ ಸುರೇಶ್ ರೈನಾ ಆಡಿದ್ದಾರೆ.
* ಚೆನ್ನೈ ತಂಡದ ಪರ ಆಡುತ್ತಿರುವ ಶೇನ್ ವಾಟ್ಸನ್ ಕಳೆದ ಬಾರಿ ಆರ್ಸಿಬಿಯಲ್ಲಿ ಆಡಿದ್ದರೆ, ಆರ್ಸಿಬಿಯಲ್ಲಿ ಆಡುತ್ತಿರುವ ಬ್ರೆಂಡನ್ ಮೆಕಲಮ್, ಕಳೆದ ಬಾರಿ ಚೆನ್ನೈ ತಂಡದಲ್ಲಿ ಆಡಿದ್ದರು. ಇಬ್ಬರೂ ಆರಂಭಿಕ ಆಟಗಾರರಾಗಿರುವುದು ವಿಶೇಷ. ಕಳೆದ ಸಾಲಿನಲ್ಲಿ ಆರ್ಸಿಬಿಯಲ್ಲಿ ಆಡಿದ್ದ ಕೇದಾರ್ ಜಾಧವ್ ಕೂಡ ಚೆನ್ನೈ ಪರ ಆಡುತ್ತಿದ್ದಾರೆ.
* ಕಳೆದ ಆವೃತ್ತಿಯಲ್ಲಿ ಚೆನ್ನೈ ತಂಡದ ಮುಖ್ಯ ಬೌಲರ್ ಆಗಿದ್ದ ಆಶಿಶ್ ನೆಹ್ರಾ, ಈ ಬಾರಿ ಆರ್ಸಿಬಿ ತಂಡದ ಬೌಲಿಂಗ್ ಕೋಚ್.
* ಆರ್ಸಿಬಿ ತಂಡದಲ್ಲಿ ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಆಡುತ್ತಿದ್ದಾರೆ. ಈ ಹಿಂದೆ ವಿಕೆಟ್ ಕೀಪರ್ ಅರುಣ್ ಕಾರ್ತಿಕ್ ಕೂಡ ಆರ್ಸಿಬಿಯನ್ನು ಪ್ರತಿನಿಧಿಸಿದ್ದರು. ಚೆನ್ನೈ ತಂಡದಲ್ಲಿ ಮಧ್ಯಮ ವೇಗದ ಬೌಲರ್ ರೋನಿತ್ ಮೋರೆ ಆಡಿದ್ದರು. ಆದರೆ ಅವರಿಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ.
ಉತ್ತಪ್ಪನೋ ಧೋನಿಯೋ?
ಕೊಡಗಿನ ರಾಬಿನ್ ಉತ್ತಪ್ಪ ರಣಜಿಯಲ್ಲಿ ಮತ್ತು ಐಪಿಎಲ್ನಲ್ಲಿ ಗ್ಲೌಸ್ ಧರಿಸಿ ವಿಕೆಟ್ ಕೀಪಿಂಗ್ಗೆ ನಿಂತವರೇ ಹೊರತು ಅವರು ಪರಿಣತ ವಿಕೆಟ್ ಕೀಪರ್ ಅಲ್ಲ. ಆದರೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ಕೀರ್ತಿ ಉತ್ತಪ್ಪಗೆ ಸಲ್ಲುತ್ತದೆ. 148 ಪಂದ್ಯಗಳನ್ನು ಆಡಿರುವ ಧೋನಿ 30 ಸ್ಟಂಪ್ ಔಟ್ ಮಾಡಿದ್ದರೆ, 149 ಪಂದ್ಯಗಳಲ್ಲಿ ಉತ್ತಪ್ಪ 33 ಸ್ಟಂಪ್ ಔಟ್ ಮಾಡಿದ್ದಾರೆ. ಧೋನಿಗಿಂತ ಉತ್ತಪ್ಪ ಒಂದು ಪಂದ್ಯ ಹೆಚ್ಚು ಆಡಿದ್ದರೂ, ಅವರು ಕೀಪಿಂಗ್ ಮಾಡಿರುವ ಪಂದ್ಯಗಳ ಸಂಖ್ಯೆ ಕಡಿಮೆ ಎನ್ನುವುದು ಗಮನಾರ್ಹ.
ಹರ್ಭಜನ್ ಸಿಂಗ್ ದಾಖಲೆ ಮಾಡ್ತಾರಾ?
ಹಿರಿಯ ಆಟಗಾರ ಹರ್ಭಜನ್ ಸಿಂಗ್ ಕಳೆದ ಕೆಲವು ಪಂದ್ಯಗಳಲ್ಲಿ ಆಡಿಲ್ಲ. ಅವರ ಬದಲು ಲೆಗ್ಸ್ಪಿನ್ನರ್ ಕರಣ್ ಶರ್ಮಾ ಅವರಿಗೆ ಅವಕಾಶ ನೀಡಲಾಗಿತ್ತು. ನೀಡಿದ ಅವಕಾಶಗಳಲ್ಲಿ ಕರಣ್ ಉತ್ತಮ ಪ್ರದರ್ಶನ ನೀಡಿರುವುದರಿಂದ ಹರ್ಭಜನ್ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಅವಕಾಶ ಸಿಕ್ಕರೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪೈಕಿ ಮೂರನೇ ಸ್ಥಾನಕ್ಕೆ ಜಿಗಿಯಬಹುದು. 129 ವಿಕೆಟ್ ಪಡೆದಿರುವ ಹರ್ಭಜನ್ ಸಿಂಗ್, ಲಸಿತ್ ಮಾಲಿಂಗ್ ಮತ್ತು ಅಮಿತ್ ಮಿಶ್ರಾ ನಂತರದ ಸ್ಥಾನಕ್ಕೆ ಬರಲು ಮೂರು ವಿಕೆಟ್ಗಳ ಅಗತ್ಯವಿದೆ.
ಎರಡೂ ಕಡೆ ಇದ್ದಾರೆ ಪ್ರಳಯಾಂತಕರು
ಆರ್ಸಿಬಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಸಂಪೂರ್ಣ ಅವಲಂಬಿತವಾಗಿದೆ ಎಂದರೆ ತಪ್ಪಲ್ಲ. ಇಬ್ಬರ ಹೊರತು ಪ್ರತಿಭಾವಂತ ಆಟಗಾರರಿದ್ದರೂ ಅವರ ಪ್ರತಿಭೆಯ ಉಪಯೋಗ ತಂಡಕ್ಕೆ ಅಷ್ಟಾಗಿ ಸಿಕ್ಕಿಲ್ಲ. ಕ್ವಿಂಟನ್ ಡಿ ಕಾಕ್ ಆಟಕ್ಕೆ ಇನ್ನೂ ಕುದುರಿಕೊಂಡಿಲ್ಲ. ಬ್ರೆಂಡನ್ ಮೆಕಲಮ್, ಕೋರಿ ಆಂಡರ್ಸನ್, ಸರ್ಫರಾಜ್ ಖಾನ್, ಯಜುರ್ವೇಂದ್ರ ಚಾಹಲ್ ವೈಫಲ್ಯ ಕಾಡುತ್ತಿದೆ. ಪಾರ್ಥಿವ್ ಪಟೇಲ್, ಕಾಲಿನ್ ಗ್ರಾಂಡ್ಹೋಮ್ ಅಥವಾ ಮೋಯಿನ್ ಅಲಿ ಅವರಿಗೆ ಅವಕಾಶ ನೀಡಲು ಪ್ರಯತ್ನಿಸಬಹುದು.
ಚೆನ್ನೈ ತಂಡದಲ್ಲಿ ಶೇನ್ ವಾಟ್ಸನ್, ಸುರೇಶ್ ರೈನಾ, ಅಂಬಿ ರಾಯುಡು, ಡ್ವೇಯ್ನ್ ಬ್ರಾವೊ, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಎಂ.ಎಸ್. ಧೋನಿ ಎಲ್ಲರೂ ಮಿಂಚುತ್ತಿದ್ದಾರೆ. ಅನಾರೋಗ್ಯದಿಂದ ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಇಮ್ರಾನ್ ತಾಹಿರ್ ತಂಡವನ್ನು ಮತ್ತೆ ಸೇರಿಕೊಳ್ಳಬಹುದು. ಇದರಿಂದ ಎಲ್ಲ ವಿಭಾಗಗಳಲ್ಲಿಯೂ ಚೆನ್ನೈ ಬಲಿಷ್ಠವಾಗಲಿದೆ.