ಬೆಂಗಳೂರು, ಏ. 28: ಈ 11ನೇ ಐಪಿಎಲ್ ಆವೃತ್ತಿಯ ಆರಂಭದಿಂದಲೂ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಗೆಲುವಿನ ಹಾದಿಯಲ್ಲಿ ಎಡವುತ್ತಲೇ ಬಂದಿವೆ. ಹಾಗಂತ ಅಂಕಪಟ್ಟಿಯಲ್ಲಿ ಮೇಲೇರೋದಕ್ಕೆ ಸಾಧ್ಯವಾಗದಷ್ಟು ವೀಕ್ ತಂಡಗಳು ಇವಲ್ಲ. ಎರಡೂ ತಂಡಗಳಲ್ಲೂ ಗೆಲುವಿಗೆ ನೆಪಗಳಿವೆ. ಹಾಗೇ ಸೋಲಿಗೂ ಒಂದೆರಡು ಕಾರಣಗಳಿವೆ.
ಸದ್ಯದ ಅಂಕಪಟ್ಟಿಯಲ್ಲಿ ಆರು ಪಂದ್ಯಗಳನ್ನಾಡಿ ಆರನೇ ಸ್ಥಾನದಲ್ಲಿರುವ ಆರ್ಸಿಬಿಯ ಆರಂಭಿಕ ಆಟಗಾರರು 324 ರನ್ನುಗಳೊಂದಿಗೆ 137.29 ಸ್ಟ್ರೈಕ್ ರೇಟ್ ಹೊಂದ್ದಾರೆ. ಇನ್ನು ಕೆಕೆಆರ್ ಆರಂಭಿಕರು ಒಟ್ಟು ಏಳು ಪಂದ್ಯಗಳಲ್ಲಿ 302 ರನ್ಗಳೊಂದಿಗೆ 147 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಹೀಗಾಗಿ ಇತ್ತಂಡಗಳ ಬ್ಯಾಟ್ಸ್ಮನ್ ಗಳಿಬ್ಬರೂ ಬಲಶಾಲಿಗಳೆ.
ನಾಳೆ ಕರಾರುವಕ್ಕಾಗಿ ಆಡುವ, ಆಟದಲ್ಲಿ ಜಾಣ್ಮೆ ಪ್ರದರ್ಶಿಸುವವರು ಗೆಲ್ಲುವುದು ಖಚಿತ. ತವರಿನಲ್ಲೇ ಪಂದ್ಯವಾಗುವುದರಿಂದ ಕೆಕೆಆರ್ ಗಿಂತಲೂ ಆರ್ಸಿಬಿಗೆ ಗೆಲ್ಲುವ ಒತ್ತಡ ಹೆಚ್ಚಿರುವುದರಿಂದ ನಾಳಿನ ಪಂದ್ಯದಲ್ಲಿ ಆರ್ಸಿಬಿ ಬಹುತೇಕ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಆರ್ಸಿಬಿ ಮತ್ತು ಕೆಕೆಆರ್ ಬೌಲರ್ಗಳೂ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಮೇಲ್ಸ್ತರದಲ್ಲಿರುವವರೆ. ಆರ್ಸಿಬಿಯಲ್ಲಿ ಕ್ರಿಸ್ ವಾಕರ್ ಮತ್ತು ಉಮೇಶ್ ಯಾದವ್ ವಿಕೆಟ್ ಕೀಳಬಲ್ಲ ಬೌಲರ್ ಗಳಾದರೆ ಕೆಕೆಆರ್ ನಲ್ಲಿ ಸುನಿಲ್ ನಾರಾಯಣ್ ಹೆಚ್ಚು ಅಪಾಯಕಾರಿ ಬೌಲರ್. ಆದರೆ ರನ್ ಗಳಿಕೆ ಮತ್ತು ಚೇಸಿಂಗ್ ವಿಚಾರಕ್ಕೆ ಹೋಲಿಸಿದರೆ ಆರ್ಸಿಬಿ-ಕೆಕೆಆರ್ ಎರಡೂ ತಂಡಗಳೂ ಹೇಳಿಕೊಳ್ಳುವ ಪ್ರಖರತೆಯನ್ನು ಪ್ರದರ್ಶಿಸಿಲ್ಲ.
ವೆದರ್ ನಮ್ ಫೇವರ್
ಭಾನುವಾರದ ಪಂದ್ಯದ ವೇಳೆ ಬೆಂಗಳೂರಿನಲ್ಲಿ ಸಂಜೆ 31 ಡಿಗ್ರಿ ಸೆ. ತಾಪಮಾನ ಇರಲಿರುವುದಾಗಿ ಅಂದಾಜಿಸಲಾಗಿದೆ. ಮಳೆಯಾಗುವ ಮುನ್ಸೂಚನೆ ಇಲ್ಲ. ಆದರೆ ನಗರದಲ್ಲಿ ಗುಡುಗು ಮತ್ತು ತುಂತುರು ಮಳೆಯಾಗುವುದನ್ನು ಅಲ್ಲಗೆಳೆಯುವಂತಿಲ್ಲ. ಒಟ್ಟಿನಲ್ಲಿ ಮ್ಯಾಚಿನ ವೇಳೆ ವಾತಾವರಣ ಬೆಂಗಳೂರಿಗರಿಗೆ ಫೇವರಾಗಿರುವುದನ್ನು ನಿರೀಕ್ಷಿಸಲಾಗಿದೆ.