ಕೊರೊನಾ ವೈರಸ್ ಕಾರಣದಿಂದಾಗಿ ಈ ಬಾರಿಯ ಐಪಿಎಲ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿದ್ದು ಆಟಗಾರರ ಜೈವಿಕ ಸುರಕ್ಷತಾ ವಲಯ. ಟೂರ್ನಿಯ ಹಿತದೃಷ್ಠಿಯಿಂದ ಹಾಗೂ ಆಟಗಾರರ ಆರೋಗ್ಯದ ದೃಷ್ಠಿಯಿಂದ ಇದು ಅನಿವಾರ್ಯವೂ ಆಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಓರ್ವ ಈ ಸುರಕ್ಷಿತಾ ವಲಯ ಭೇದಿಸಿದ್ದಾರೆ ಎನ್ನಲಾಗಿದೆ. ಆದರೆ ಈ ವರದಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ವಿಶ್ವನಾಥನ್ ತಳ್ಳಿ ಹಾಕಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಕೇರಳ ಮೂಲದ ವೇಗಿ ಆಸಿಫ್ ಜೈವಿಕ ಸುರಕ್ಷತಾ ವಲಯವನ್ನು ಉಲ್ಲಂಘಿಸಿದ ಆಟಗಾರ ಎಂದು ವರದಿಯಾಗಿದೆ. ತಪ್ಪಾದ ಕೀಯನ್ನು ಪಡೆದುಕೊಂಡಿದ್ದ ಕಾರಣ ಆಸಿಫ್ ಅದನ್ನು ಬದಲಿಸುವ ಸಲುವಾಗಿ ರಿಸೆಪ್ಶನ್ಗೆ ತೆರಳಿ ಕೀ ಬದಲಿಸಿಕೊಂಡಿದ್ದರು. ಆದರೆ ಆ ರಿಸೆಪ್ಶನ್ ಸೆಂಟರ್ ಜೈವಿಕ ಸುರಕ್ಷತಾ ವಲಯದಲ್ಲಿ ಇರಲಿಲ್ಲ ಹಾಗಾಗಿ ಆಸಿಫ್ ಜೈವಿಕ ಸುರಕ್ಷತಾ ವಲಯನ್ನು ಬೇಧಿಸಿದ್ದಾರೆ ಎನ್ನಲಾಗಿದೆ.
ಐಪಿಎಲ್ 2020 ಕಪ್ ಗೆಲ್ಲುವ ನೆಚ್ಚಿನ ತಂಡ RCB ಎಂದ ಬ್ಯಾಟಿಂಗ್ ದಿಗ್ಗಜ
ಆದರೆ ಈ ಬಗ್ಗೆ ಎಎನ್ಐ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಮಾತನಾಡಿದ್ದು ಈ ವರದಿ ಸತ್ಯಕ್ಕೆ ದೂರವಾಗಿದ್ದು ಎಂದಿದ್ದಾರೆ. ಈ ಬಗ್ಗೆ ಸತ್ಯವನ್ನು ಪರಿಶೀಲಿಸಿ ವರದಿ ಮಾಡಲಾಗಿದೆಯಾ ಎಂದು ನನಗೆ ತಿಳಿದಿಲ್ಲ. ಆಸಿಫ್ ಯಾವುದೇ ರೀತಿಯಲ್ಲೂ ಜೈವಿಕ ಸುರಕ್ಷತಾ ವಲಯದಿಂದ ಹೊರಬಂದಿಲ್ಲ ಎಂದು ಕಾಶಿ ವಿಶ್ವನಾಥನ್ ಮಾಹಿತಿಯನ್ನು ನೀಡಿದ್ದಾರೆ.
ಆಸಿಫ್ ತಪ್ಪಾದ ಕೀಯನ್ನು ಪಡೆದುಕೊಂಡಿದ್ದು, ಬಳಿಕ ಅದನ್ನು ಬದಲಾಯಿಸಿದ್ದು ಎಲ್ಲವೂ ನಿಜ. ಆದರೆ ಆತ ತಮಗೆ ಮೀಸಲಾದ ಸಿಬ್ಬಂದಿಗಳ ಬಳಿ ಹೋಗಿ ತನ್ನ ಕೀಯನ್ನು ಬದಲಿಸಿಕೊಂಡಿದ್ದಾರೆ. ಅವರು ಜನರಲ್ ರಿಸೆಪ್ಶನ್ ಕೇಂದ್ರಕ್ಕೆ ಹೋಗಿರಲಿಲ್ಲ. ತಮಗೆ ಗೊತ್ತುಪಡಿಸಿದ ಟೇಬಲ್ಗೆ ಹೋಗಿ ಕೀ ಬದಲಾಯಿಸಿದ್ದಾರೆ ಎಂದು ವಿಶ್ವನಾಥನ್ ಹೇಳಿದ್ದಾರೆ.
ಸ್ವತಃ ತಾನು ಕೂಡ ಸಿಎಸ್ಕೆ ಆಟಗಾರರ ಜೈವಿಕ ಸುರಕ್ಷಿತಾ ವಲಯದೊಳಗೆ ಪ್ರವೇಶಿಸುತ್ತಿಲ್ಲ. ತಾನು ಕೂಡ ಪ್ರೊಟೊಕಾಲ್ಗಳನ್ನು ಅನುಸರಿಸುತ್ತಿದ್ದೇನೆ ಎಂದು ಈ ಸಂದರ್ಭದಲ್ಲಿ ವಿಶ್ವನಾಥನ್ ಉಲ್ಲೇಖಿಸಿದ್ದಾರೆ. ಅಧಿಕಾರಿಗಳಿಗೆ ಬೇರೆಯದ್ದೇ ಜೈವಿಕ ಸುರಕ್ಷಿತಾ ವಲಯವನ್ನು ನಿಗದಿಪಡಿಸಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳ ಮುನ್ನ ಕೊರೊನ ವೈರಸ್ ದಾಳಿಗೆ ತುತ್ತಾಗಿತ್ತು. ಇಬ್ಬರು ಆಟಗಾರರ ಸಹಿತ 13 ಸಿಬ್ಬಂದಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗುವ ಮೂಲಕ ಆತಂಕವನ್ನು ಮೂಡಿಸಿತ್ತು.