ಈ ಬಾರಿಯ ಐಪಿಎಲ್ನಲ್ಲಿ ಭಾರೀ ನಿರೀಕ್ಷೆಯಿಂದ ಕಣಕ್ಕಿಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದ ಗೆಲುವನ್ನು ಹೊರತು ಪಡಿಸಿ ಉಳಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ತನ್ನ ಕೆಟ್ಟ ಆರಂಭವನ್ನು ಪಡೆದುಕೊಂಡಿದೆ. ಸ್ಕ್ವಾಡ್ನಲ್ಲಿರುವ ಇಬ್ಬರು ಅನುಭವಿ ಆಟಗಾರರು ಗಾಯಗೊಂಡಿರುವುದು ತಂಡದ ಪಾಲಿಗೆ ದೊಡ್ಡ ಹಿನ್ನೆಡೆಯಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 48 ಎಸೆತಗಳಲ್ಲಿ 71 ರನ್ ಸಿಡಿಸಿ ಮ್ಯಾಚ್ ವಿನ್ನರ್ ಆಗಿ ಮಿಂಚಿದ್ದ ಅಂಬಾಟಿ ರಾಯುಡು ಬಳಿಕ ಗಾಯಗೊಂಡ ಕಾರಣ ಮುಂದಿನ ಎರಡು ಪಂದ್ಯಗಳಿಗೂ ಅಲಭ್ಯರಾದರು. ಈ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಗಳಲ್ಲಿ ಚೆನ್ನೈ ಸೋಲು ಕಂಡು ಆಘಾತವನ್ನು ಅನುಭವಿಸಿತ್ತು. ಜೊತೆಗೆ ಅನುಭವಿ ಆಲ್ರೌಂಡರ್ ಡ್ವೇಯ್ನ್ ಬ್ರಾವೋ ಈ ಟೂರ್ನಿಯಲ್ಲಿ ಒಂದು ಪಂದ್ಯದಲ್ಲೂ ಕಣಕ್ಕಿಳಿದಿಲ್ಲ. ಅವರು ಕೂಡ ಫಿಟ್ ಆಗದಿರುವುದು ತಂಡದ ಪಾಲಿಗೆ ದೊಡ್ಡ ಹಿನ್ನೆಡೆಯಾಗಿದೆ.
ಐಪಿಎಲ್ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?
ಈಗ ಈ ಇಬ್ಬರೂ ಆಟಗಾರರ ಆಡುವ ಬಳಗಕ್ಕೆ ಮರಳುವ ಬಗ್ಗೆ ಸಿಎಸ್ಕೆ ಸಿಇಒ ಕೆಎಸ್ ವಿಶ್ವನಾಥನ್ ಮಾಹಿತಿಯನ್ನು ನೀಡಿದ್ದಾರೆ. ಅಂಬಾಟಿ ರಾಯುಡು ಬಗ್ಗೆ ಮಾಹಿತಿಯನ್ನು ನೀಡುತ್ತಾ ವಿಶ್ವನಾಥನ್ "ಮಂಡಿರಜ್ಜು ಗಾಯದಿಂದ ಅಂಬಾಟಿ ರಾಯುಡು ಚೆನ್ನಾಗಿ ಗುಣಮುಖರಾಗುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಅಭ್ಯಾಸದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಬ್ಯಾಟಿಂಗ್ ಮಾಡಿದ್ದಾರೆ" ಎಂದು ವಿಶ್ವನಾಥನ್ ವಿವರಿಸಿದರು.
400 ಪ್ಲಸ್ ರನ್ ಮಳೆಯಲ್ಲಿ ಮಿಂಚಿದ ಸುಂದರ, ಕುಂಬ್ಳೆ ಸಾಲಿಗೆ ಸೇರ್ಪಡೆ
ಇನ್ನೋರ್ವ ಪ್ರಮುಖ ಆಟಗಾರ ಡ್ವೇಯ್ನ್ ಬ್ರಾವೋ ಈ ಟೂರ್ನಿಯ ಮೂರೂ ಪಂದ್ಯಗಳಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಬ್ರಾವೋ ಸ್ಥಾನದಲ್ಲಿ ಕಣಕ್ಕಿಳಿದಿರುವ ಸ್ಯಾಮ್ ಕರ್ರನ್ ತಂಡಕ್ಕೆ ಭರವಸೆ ನೀಡುವಂತಾ ಪ್ರದರ್ಶನವನ್ನು ನೀಡಿದ್ದಾರೆ. ಬ್ರಾವೋ ಬಗ್ಗೆ ಮಾತಮಾಡಿದ ಸಿಇಒ ವಿಶ್ವನಾಥನ್ "ನೆಟ್ನಲ್ಲಿ ಬ್ರಾವೋ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ" ಎಂದು ಉತ್ತರಿಸಿದ್ದಾರೆ. ಆದರೆ ಯಾವಾಗ ಕಣಕ್ಕಿಳಿಯಲಿದ್ದಾರೆ ಎಂಬ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ವಿಶ್ವನಾಥನ್ ನೀಡಿಲ್ಲ.
ಒಟ್ಟು ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತಿರುವ ಚೆನ್ನೈ ರನ್ರೇಟ್ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಚೆನ್ನೈ ಸಿಇಒ ಆಗಿರುವ ಕಾಶಿ ವಿಶ್ವನಾಥನ್ ತಂಡದ ಪ್ರದರ್ಶನದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 'ಟೂರ್ನಿಯಲ್ಲಿ ತಿರುಗಿ ಬೀಳಲಿದ್ದೇವೆ' ಎನ್ನುವ ಭರವಸೆಯನ್ನು ನೀಡಿದ್ದಾರೆ.