ರಾಯುಡು-ಪೊಲಾರ್ಡ್ ಅಬ್ಬರ
ಆರ್ಸಿಬಿ ಮತ್ತು ಮುಂಬೈ ತಂಡಗಳ ನಡುವೆ 2012ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯ ನೆನಪಿನಲ್ಲಿ ಉಳಿಯುವ ಪಂದ್ಯಗಳಲ್ಲಿ ಒಂದು. ಈ ಪಂದ್ಯದಲ್ಲಿ ಆರ್ಸಿಬಿ ಬ್ಯಾಟ್ಸ್ಮನ್ಗಳು ವಿಫಲವಾದಾಗ ಮಧ್ಯಮ ಕ್ರಮಾಂಕದಲ್ಲಿ ಬಂದಿದ್ದ ಮಯಾಂಕ್ ಅಗರವಾಲ್ 30 ಎಸೆತಗಳಲ್ಲಿ 64 ರನ್ ಬಾರಿಸಿ ಗೌರವಾರ್ಹ ಮೊತ್ತವಾದ 171 ರನ್ ತಲುಪುವಂತೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಒಂದು ಹಂತದಲ್ಲಿ 51 ರನ್ಗೆ 5 ವಿಕೆಟ್ ಕಳೆದುಕೊಂಡು ಸೋಲುವ ಭೀತಿಯಲ್ಲಿತ್ತು. ಆದರೆ ನಂತರ ಜತೆಗೂಡಿದ್ದ ಅಂಬಾಟಿ ರಾಯುಡು ಮತ್ತು ಕೀರನ್ ಪೊಲಾರ್ಡ್ ಮುರಿಯದ ಆರನೇ ವಿಕೆಟ್ಗೆ 122 ರನ್ ಸೇರಿಸಿ ಗೆಲುವಿನ ದಡ ತಲುಪಿಸಿದ್ದರು.
ಮಯಾಂಕ್- ರಾಹುಲ್ಗೆ ಹೊಸ ಹೆಸರು ನೀಡಿದ ಸೆಹ್ವಾಗ್
ಪಂದ್ಯ ಗೆಲ್ಲಿಸಿದ್ದ ವಿನಯ್ ಕುಮಾರ್
2013ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಕ್ರಿಸ್ ಗೇಲ್ ಏಕಾಂಗಿ ಹೋರಾಟ ನಡೆಸಿದ್ದರು. ಗೇಲ್ ಅಜೇಯ 92 ರನ್ ಗಳಿಸಿದ್ದರೂ ತಂಡ ಗಳಿಸಿದ್ದು 156 ರನ್ ಮಾತ್ರ. ವಿರಾಟ್ ಕೊಹ್ಲಿ (24) ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್ಮನ್ ಕೂಡ ಗೇಲ್ಗೆ ಸರಿಯಾಗಿ ಜತೆ ನೀಡಿರಲಿಲ್ಲ. ಸಾಮಾನ್ಯ ಗುರಿಯ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರೂ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗಳನ್ನು ಆರ್ಸಿಬಿ ಬೌಲರ್ಗಳು ಕಟ್ಟಿಹಾಕಿದ್ದರು. ಕೊನೆಯ ಓವರ್ನಲ್ಲಿ ಪೊಲಾರ್ಡ್ರಂತಹ ಆಟಗಾರರಿದ್ದರೂ ಬೇಕಿದ್ದ 10 ರನ್ಗಳನ್ನು ಹೊಡೆಯಲು ಆಗದಂತೆ ವಿನಯ್ ಕುಮಾರ್ ಬಿಗುವಿನ ಬೌಲಿಂಗ್ ನಡೆಸಿದ್ದರು. ಆರ್ಸಿಬಿ ಎರಡು ರನ್ನಿಂದ ಪಂದ್ಯ ಗೆದ್ದಿತ್ತು.
ಎಬಿಡಿ ಅಬ್ಬರದ ಶತಕ
2015ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಕೇವಲ ಒಂದು ವಿಕೆಟ್ ಕಳೆದುಕೊಂಡು 235 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಕ್ರಿಸ್ ಗೇಲ್ 13 ರನ್ ಗಳಿಸಿ ಔಟಾದ ಬಳಿಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅಬ್ಬರಿಸಿದ್ದರು. ಎಬಿಡಿ 59 ಎಸೆತಗಳಲ್ಲಿ 133 ರನ್ ಸಿಡಿಸಿದರೆ, 50 ಎಸೆತಗಳಲ್ಲಿ 82 ರನ್ ಗಳಿಸಿ ಕೊಹ್ಲಿ ಉತ್ತಮ ಜತೆಯಾಟ ನೀಡಿದ್ದರು. ಇದಕ್ಕೆ ಮುಂಬೈ ಇಂಡಿಯನ್ಸ್ ತಕ್ಕ ಉತ್ತರ ನೀಡಿದರೂ 196 ರನ್ ಗಳಿಸಲಷ್ಟೇ ಶಕ್ತವಾಗಿ 39 ರನ್ ಸೋಲು ಅನುಭವಿಸಿತು.
ಐಪಿಎಲ್ 2020ಗಾಗಿ ''ಹಿಟ್ ಮ್ಯಾನ್'' ರೋಹಿತ್ ತಂದಿರುವ ಬ್ಯಾಟುಗಳೆಷ್ಟು?
ಬದ್ರಿ ಹ್ಯಾಟ್ರಿಕ್
2017ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ 20 ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗಳಿಸಿದ್ದು 142 ರನ್ ಮಾತ್ರ. ಕೊಹ್ಲಿ 62 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಆಟ ಬಂದಿರಲಿಲ್ಲ. ಸಾಧಾರಣ ಗುರಿ ಬೆನ್ನಟ್ಟಿದ ಮುಂಬೈ ತೀರಾ ಸಂಕಷ್ಟಕ್ಕೆ ಸಿಲುಕಿತ್ತು. ಏಳು ರನ್ಗೆ ನಾಲ್ಕು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಇದರಲ್ಲಿ ಸ್ಯಾಮ್ಯುಯೆಲ್ ಬದ್ರಿ ಅವರ ಹ್ಯಾಟ್ರಿಕ್ ಕೂಡ ಸೇರಿತ್ತು. ಪಾರ್ಥಿವ್ ಪಟೇಲ್, ರೋಹಿತ್ ಶರ್ಮಾ ಮತ್ತು ಮಿಚೆಲ್ ಮೆಕ್ಕ್ಲೆನಗನ್ ವಿಕೆಟ್ಗಳನ್ನು ಒಂದರ ಹಿಂದೆ ಒಂದಂತೆ ಕಿತ್ತಿದ್ದ ಬದ್ರಿ, 4 ಓವರ್ಗಳಲ್ಲಿ ಕೇವಲ 9 ರನ್ ನೀಡಿ ಒಟ್ಟು 4 ವಿಕೆಟ್ ಪಡೆದಿದ್ದರು. ಆದರೆ ನಂತರ ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದಿದ್ದರು.
ನೋಬಾಲ್ ವಿವಾದ
ಐಪಿಎಲ್ನ ಅತ್ಯಂತ ವಿವಾದಾತ್ಮಕ ಪಂದ್ಯಗಳಲ್ಲಿ 2019ರಲ್ಲಿ ನಡೆದಿದ್ದ ಆರ್ಸಿಬಿ-ಮುಂಬೈ ಪಂದ್ಯವೂ ಒಂದು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ 187 ರನ್ ಗಳಿಸಿತ್ತು. ಎಬಿ ಡಿವಿಲಿಯರ್ಸ್ 41 ಎಸೆತದಲ್ಲಿ 70 ರನ್ ಗಳಿಸಿ ಆರ್ಸಿಬಿಯನ್ನು ಜಯದ ಹೊಸ್ತಿಲಿಗೆ ಕೊಂಡೊಯ್ದಿದ್ದರು. ಆರ್ಸಿಬಿಗೆ ಗೆಲ್ಲಲು ಏಳು ರನ್ ಬೇಕಿತ್ತು. ಲಸಿತ್ ಮಾಲಿಂಗ ಅವರ ಕಡೆಯ ಎಸೆತದಲ್ಲಿ ಶಿವಂ ದುಬೆಗೆ ಒಂದೂ ರನ್ ಹೊಡೆಯಲು ಆಗಲಿಲ್ಲ. ಇದರಿಂದ ಮುಂಬೈ ಆರು ರನ್ಗಳ ಗೆಲುವು ಪಡೆದಿತ್ತು. ಆದರೆ ರಿಪ್ಲೈ ನೋಡಿದಾಗ ಲಸಿತ್ ಮಾಲಿಂಗ ನೋಬಾಲ್ ಎಸೆದಿದ್ದು ಗೊತ್ತಾಗಿತ್ತು. ಅಂಪೈರ್ ಇದನ್ನು ಗಮನಿಸಿರಲಿಲ್ಲ. ನಾವು ಕ್ಲಬ್ ಮಟ್ಟದ ಕ್ರಿಕೆಟ್ ಆಡುತ್ತಿದ್ದೇವೆಯೇ ಎಂದು ಅಂಪೈರ್ ಎಸ್. ರವಿ ವಿರುದ್ಧ ಕೊಹ್ಲಿ ಕಿಡಿಕಾರಿದ್ದರು.
ಐಪಿಎಲ್ 2020: ಮುಂಬೈ ವಿರುದ್ಧವೂ ಮುಂದುವರಿದ ವಿರಾಟ್ ಕೊಹ್ಲಿ ಫ್ಲಾಪ್ ಶೋ