ಸೆಲೆಬ್ರೇಷನ್ ಬಗ್ಗೆ ಅಶ್ವಿನ್ ಪ್ರಶ್ನೆ
ಇಮ್ರಾನ್ ತಾಹಿರ್ ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯೂಟ್ಯೂಬ್ ಚಾನೆಲ್ನಲ್ಲಿ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆರ್ ಅಶ್ವಿನ್ ಇಮ್ರಾನ್ ತಾಹಿರ್ ಬಳಿ ತಮ್ಮ ವಿಚಿತ್ರ ಸೆಲೆಬ್ರೇಷನ್ ಬಗ್ಗೆ ಪ್ರಶ್ನೆಯನ್ನು ಮಾಡಿದ್ದರು. "ವಿಕೆಟ್ ಪಡೆದ ಬಳಿಕ ನೀವು ಮೈಲ್ಗಳಷ್ಟು ದೂರ ಯಾಕೆ ಓಡುತ್ತೀರಿ" ಎಂದು ಅಶ್ವಿನ್ ಪ್ರಶ್ವಿಸಿದ್ದರು.
ಅದು ಶುದ್ಧ ಉತ್ಸಾಹ
ಅಶ್ವಿನ್ ಕೇಳಿದ ಈ ಪ್ರಶ್ನೆಗೆ ನಾನು ಇದನ್ನು ಶುದ್ಧ ಉತ್ಸಾಹ ಎಂದು ಕರೆಯುತ್ತೇನೆ. ಇದು ಹೇಗೆ ಬಂತು ಎಂದು ನನಗೂ ತಿಳಿದಿಲ್ಲ ಎಂದು ತಾಹಿರ್ ಹೇಳಿದರು. ಈ ಸಂದರ್ಭದಲ್ಲಿ ತಾಹಿರ್ 15 ವರ್ಷಗಳ ಹಿಂದೆ ಈ ರೀತಿ ಸಂಭ್ರಮಿಸುತ್ತಾ ತಮಾಷೆಗೊಳಗಾದ ಕುತೂಹಲಕಾರಿ ಘಟನೆಯೊಂದನ್ನು ನೆನಪಿಸಿಕೊಂಡರು.
ರಸ್ತೆಯವರೆಗೆ ಓಡಿದ್ದ ತಾಹಿರ್
"ಇಂಗ್ಲೆಂಡ್ನಲ್ಲಿ 15 ವರ್ಷಗಳ ಹಿಂದೆ ಇಂಗ್ಲೆಂಡ್ನಲ್ಲಿ ಕ್ಲಬ್ ಕ್ರಿಕೆಟ್ನಲ್ಲಿ ಆಡುತ್ತಿದ್ದೆ. ಅಂದು ಅದ್ಭುತ ಕ್ಯಾಚ್ವೊಂದನ್ನು ಪಡೆದು ವಿಕೆಟ್ ಕಿತ್ತಿದ್ದೆ. ಬಳಿಕ ಓಡಲು ಆರಂಭಿಸಿದ್ದೆ. ಓಡುತ್ತಾ ಅಂಗಳದಾಚೆಗೆ ಹೋಗಿ, ರಸ್ತೆಯ ಬದಿಗೆ ತಲುಪಿದ್ದೆ. ಬಳಿಕ ಹಾಗೆಯೇ ನಡೆದುಕೊಂಡು ವಾಪಾಸ್ ಬಂದೆ. ನನ್ನನ್ನು ಕಂಡು ಅಲ್ಲಿದ್ದವರು ನಗಲು ಆರಂಭಿಸಿದ್ದರು. ಅದು ತಮಾಷೆಯಾಗಿತ್ತು. ಆದರೆ ನಾನು ಇರುವುದೇ ಹಾಗೆ. ಇದನ್ನು ಜನರು ಹೇಗೆ ಭಾವಿಸುತ್ತಾರೆ ಎಂದು ನನಗೆ ತಿಳಿದಿಲ್ಲ. ಈ ಸಂಭ್ರಮಕ್ಕೆ ಯೋಜನೆಗಳಿಲ್ಲ. ಪ್ರತಿ ವಿಕೆಟ್ ಕೂಡ ಮುಖ್ಯ" ಎಂದು ಇಮ್ರಾನ್ ತಾಹಿರ್ ತಮಾಷೆಯ ಸಂಗತಿಯನ್ನು ಬಿಚ್ಚಿಟ್ಟರು.
ಸಾಮಾಜಿಕ ಜಾಲತಾಣದಲ್ಲಿ ಟೀಕೆ
ಇಮ್ರಾನ್ ತಾಹಿರ್ ಈ ಬಾರಿಯ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಅವಕಾಶ ದೊರೆಯದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಕಳೆದ ಬಾರಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನನ್ನು ಸಿಎಸ್ಕೆ ಬಳಸಿಕೊಳ್ಳುತ್ತಿರುವ ರೀತಿಗೆ ಟ್ವಿಟ್ಟರ್ನಲ್ಲಿ ನೆಟ್ಟಿಗರು ಆಕ್ರೋಶ ಹಾಗೂ ಮರುಕ ವ್ಯಕ್ತಪಡಿಸಿದ್ದರು. ಆದರೆ ತಾಹಿರ್ ಸಿಎಸ್ಕೆ ಮ್ಯಾನೇಜ್ಮೆಂಟ್ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡುವ ಮೂಲಕ ವೃತ್ತಿಪರತೆ ಮೆರೆದಿದ್ದರು.