ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೊಹಿತ್ ಶರ್ಮಾ ಕಣಕ್ಕಿಳಿದಿಲ್ಲ. ಪಂದ್ಯಕ್ಕೂ ಮುನ್ನ ರೊಹಿತ್ ಮಂಡಿರಜ್ಜು ಗಾಯಕ್ಕೊಳಗಾಗಿದ್ದು ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕಿರಾನ್ ಪೊಲಾರ್ಡ್ ಮುನ್ನಡೆಸುತ್ತಿದ್ದಾರೆ.
ಟಾಸ್ ಸಂದರ್ಭದಲ್ಲಿ ನಾಯಕ ಕಿರಾನ್ ಪೊಲಾರ್ಡ್ ಮಾತನಾಡುತ್ತಾ ರೋಹಿತ್ ಶರ್ಮಾ ಗಾಯದ ಬಗ್ಗೆ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಗುರಿಯ ಬಗ್ಗೆ ಸ್ಪಷ್ಟವಾದ ಮಾತುಗಳನ್ನು ಆಡಿದ್ದಾರೆ. ರೊಹಿತ್ ಶರ್ಮಾ ಚೆನ್ನೈ ವಿರುದ್ದದ ಪಂದ್ಯದಿಂದ ಹೊರಗುಳಿಯಲಿದ್ದು ಶೀಘ್ರವಾಗಿ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಭರವಸೆಯನ್ನು ನೀಡಿದ್ದಾರೆ.
ಮುಂದಿನ 4 ಪಂದ್ಯಗಳಲ್ಲೂ ಸಿಎಸ್ಕೆ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ: ವಾಟ್ಸನ್
ಟಾಸ್ ಗೆದ್ದು ಮೊದಲಿಗೆ ಫೀಲ್ಡಿಂಗ್ ಮಾಡುವ ನಿರ್ಧಾರ ತಿಳಿಸಿದ ಪೊಲಾರ್ಡ್ ಬಳಿಕ "ನಾವು ಮೊದಲಿಗೆ ಪ್ಲೇ ಆಫ್ ಹಂತಕ್ಕೇರಲು ಬಯಸುತ್ತೇವೆ, ಹಾಗೂ ನಮ್ಮಿಂದ ಇನ್ನು ಕೂಡ ಉತ್ತಮ ಕ್ರಿಕೆಟ್ ಬರಬೇಕಾಗಿದೆ. ನಾವು ಉತ್ತಮ ಪ್ರದರ್ಶನವನ್ನು ನೀಡಬೇಕಾಗಿರುವ ಕ್ಷೇತ್ರಗಳತ್ತ ಇಂದಿನ ಪಂದ್ಯದಿಂದಲೇ ಗಮನಹರಿಸುತ್ತೇವೆ" ಎಂದಿದ್ದಾರೆ.
" ರೋಹಿತ್ ಶರ್ಮಾ ಎಡ ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂಬ ಭರವಸೆಯಿದೆ. ಆದಷ್ಟು ಬೇಗನೆ ಅವರು ಫಿಟ್ ಆಗಲಿದ್ದು ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ರೋಹಿತ್ ಸ್ಥಾನಕ್ಕೆ ಸೌರಬ್ ತಿವಾರಿ ಆಗಮಿಸಿದ್ದಾರೆ" ಎಂದು ಪೊಲಾರ್ಡ್ ರೊಹಿತ್ ಶರ್ಮಾ ಗಾಯದ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.