ಐಪಿಎಲ್ 13ನೇ ಆವೃತ್ತಿಯಲ್ಲಿ ಪ್ಲೇ ಆಫ್ ಹಂತಕ್ಕೇರಲು ಕಷ್ಟಪಡುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2020ರ ಆವೃತ್ತಿಯಲ್ಲಿ ಇನ್ನೂ ಉಸಿರಾಡುತ್ತಿದೆ ಎಂದು ಕೆಕೆಆರ್ ತಂಡದ ಮೆಂಟರ್ ಡೇವಿಡ್ ಹಸ್ಸಿ ಹೇಳಿದ್ದಾರೆ.
ಗುರುವಾರ (ಅ.29) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರು ವಿಕೆಟ್ಗಳ ಸೋಲನ್ನಪ್ಪಿದ ಕೆಕೆಆರ್ ತಂಡದ ಪ್ಲೇ ಆಫ್ ಹಾದಿಯು ದುರ್ಗಮಗೊಂಡಿದೆ. ಐಪಿಎಲ್ 2020ನೇ ಆವೃತ್ತಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಜಯಿಸಿ ಏಳು ಪಂದ್ಯಗಳಲ್ಲಿ ಕೆಕೆಆರ್ ಮುಗ್ಗರಿಸಿದೆ. 12 ಪಾಯಿಂಟ್ಸ್ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಐದನೇ ಸ್ಥಾನದಲ್ಲಿ ಉಳಿದುಕೊಂಡಿದೆ.
KKR ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದ ಜೂಹಿ ಚಾವ್ಲಾ ಟ್ರೋಲ್ಗೆ ಗುರಿ
''ಪಂದ್ಯಗಳನ್ನು ಸೋಲುವ ಮೂಲಕ ನಮ್ಮನ್ನು ನಾವು ಈ ಸ್ಥಾನಕ್ಕೆ ತಂದುಕೊಂಡಿದ್ದೇವೆ. ಆದ್ರೆ ನಾವು ಇನ್ನೂ ಉಸಿರಾಡುತ್ತಿದ್ದೇವೆ. ಮುಂದಿನ ಪಂದ್ಯ ರಾಜಸ್ಥಾನ್ ವಿರುದ್ಧವಾಗಿದೆ'' ಎಂದು ಹಸ್ಸಿ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
''ಕೆಲವೇ ದಿನಗಳಲ್ಲಿ ನಾವು ನಮ್ಮ ಬ್ಯಾಟರಿಗಳನ್ನು ರೀಚಾರ್ಜ್ ಮಾಡಲು ಹೊರಟಿದ್ದೇವೆ ಮತ್ತು ಈ ಸೋಲಿನಿಂದ ಹೊರಬಂದು ಮುಕ್ತವಾಗಿ ಕ್ರಿಕೆಟ್ ಆಡುತ್ತೇವೆ. ಮುಂದೆ ಏನಾಗಬಹುದು ಎಂಬುದು ನಿಮಗೆ ತಿಳಿದಿಲ್ಲ, ಫಲಿತಾಂಶಗಳು ನಮ್ಮ ಹಾದಿಯಲ್ಲಿ ಬರಬಹುದು ಮತ್ತು ಪ್ಲೇ ಆಫ್ನಲ್ಲಿ ನಾವು ಕೆಲವು ತಂಡಗಳಿಗೆ ಆಘಾತ ನೀಡಬಹುದು'' ಎಂದು ಅವರು ಹೇಳಿದರು.
ಕೆಕೆಆರ್ ನೀಡಿದ 173 ರನ್ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಓಪನರ್ ರುತುರಾಜ್ ಗಾಯಕ್ವಾಡ್ 72, ಅಂಬಟಿ ರಾಯುಡು 38, ಕೊನೆಯಲ್ಲಿ ರವೀಂದ್ರ ಜಡೇಜಾ ಸ್ಪೋಟಕ 31ರನ್ಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್ಗಳ ಗೆಲುವು ಸಾಧಿಸಿತು.