ಕೊಡಗಿನ ಕಲಿಯ ವೈಫಲ್ಯ
ಸ್ಫೋಟಕ ಬ್ಯಾಟ್ಸ್ಮನ್ ಎಂದೇ ಹೆಸರಾಗಿದ್ದ ಕೊಡಗಿನ ರಾಬಿನ್ ಉತ್ತಪ್ಪ ತಮ್ಮ ಹಳೆಯ ಆಟದ ಮೊನಚು ಕಳೆದುಕೊಂಡು ಬಹಳ ಸಮಯವಾಗಿದೆ. ಇದರಿಂದಾಗಿ ಅವರು ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ರಣಜಿಯಲ್ಲಿ ಕೇರಳ ತಂಡವನ್ನು ಪ್ರತಿನಿಧಿಸುತ್ತಿರುವ ಅವರು ಈ ಬಾರಿ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ನಿದ್ದೆಗೆಡಿಸಿರುವ ಕನ್ನಡಿಗರನ್ನು ಹಣಿಯಲು ಶೇನ್ ಬಾಂಡ್ ತಂತ್ರ ಇದು
ರಾಷ್ಟ್ರೀಯ ತಂಡದಲ್ಲಿ ಮರಳಿ ಸ್ಥಾನ ಗಿಟ್ಟಿಸಲು ಬಯಸಿರುವ ರಾಬಿನ್ ಉತ್ತಪ್ಪ ಮೊದಲ ಮೂರು ಪಂದ್ಯಗಳಲ್ಲಿ ತೀರಾ ನಿರಾಸೆ ಮೂಡಿಸಿದ್ದಾರೆ. ಈ ಮೂರು ಪಂದ್ಯಗಳಲ್ಲಿ ಉತ್ತಪ್ಪ ಗಳಿಸಿರುವ ರನ್ ಕ್ರಮವಾಗಿ 5, 9 ಮತ್ತು 2. ಅಲ್ಲದೆ ಕಳೆದ ಎರಡು ಪಂದ್ಯಗಳಲ್ಲಿ ಅವರು ಎರಡು ಸುಲಭದ ಕ್ಯಾಚ್ಗಳನ್ನು ಕೈ ಚೆಲ್ಲಿದ್ದಾರೆ.
ಶ್ರೇಯಸ್ ಗೋಪಾಲ್
ಆಲ್ರೌಂಡರ್ ಶ್ರೇಯಸ್ ಗೋಪಾಲ್ ರಣಜಿ ಹಾಗೂ ದೇಶಿ ಪಂದ್ಯಗಳಲ್ಲಿ ಕರ್ನಾಟಕದ ಪರ ಅತ್ಯುತ್ತಮ ಪ್ರದರ್ಶನ ತೋರಿಸಿದ್ದಾರೆ. ಕಳೆದ ಐಪಿಎಲ್ ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ಪರ ಹ್ಯಾಟ್ರಿಕ್ ಪಡೆದಿದ್ದು ಸೇರಿದಂತೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಮಿಂಚಿದ್ದರು. ಆದರೆ, ಈ ಸಾಲಿನಲ್ಲಿ ಶ್ರೇಯಸ್ ಪ್ರದರ್ಶನ ಚಿಂತೆಗೀಡುಮಾಡಿದೆ. ಮೂರು ಪಂದ್ಯಗಳಿಂದ ಅವರು 1 ವಿಕೆಟ್ ಮಾತ್ರ ಪಡೆದಿದ್ದಾರೆ. ಮಾತ್ರವಲ್ಲ ಬಲು ದುಬಾರಿಯಾಗಿದ್ದಾರೆ ಕೂಡ.
ಆರ್ಸಿಬಿ ಪಾಲಿನ ದೇವದೂತ ದೇವದತ್ ಪಡಿಕ್ಕಲ್
ಸಿಎಸ್ಕೆ ವಿರುದ್ಧ 9.50ರ ಎಕಾನಮಿಯಲ್ಲಿ 38 ರನ್ ನೀಡಿ ಮುರಳಿ ವಿಜಯ್ ವಿಕೆಟ್ ಪಡೆದಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 11ರ ಎಕಾನಮಿಯಲ್ಲಿ 44 ರನ್ ನೀಡಿದ್ದರೆ, ಕೆಕೆಆರ್ ವಿರುದ್ಧ 10.80ರ ಸರಾಸರಿಯಲ್ಲಿ 43 ರನ್ ನೀಡಿದ್ದರು. ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಿಕ್ಕಿತ್ತು. ಕೇವಲ ಐದು ರನ್ ಗಳಿಸುವ ಮೂಲಕ ಬ್ಯಾಟ್ ಮೂಲಕವಾದರೂ ತಮ್ಮ ಸ್ಥಾನವನ್ನು ಭದ್ರತಪಡಿಸುವ ಅವಕಾಶವನ್ನು ಹಾಳುಮಾಡಿಕೊಂಡರು.
ಕೃಷ್ಣಪ್ಪ ಗೌತಮ್
ಕರ್ನಾಟಕ ಕಂಡ ಉಪಯುಕ್ತ ಆಲ್ರೌಂಡರ್ಗಳಲ್ಲಿ ಕೃಷ್ಣಪ್ಪ ಗೌತಮ್ ಒಬ್ಬರು. ಐಪಿಎಲ್ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಹಿಂದಿನ ಆವೃತ್ತಿಯಿಂದಲೂ ಅವರು ವಿಫಲರಾಗುತ್ತಿದ್ದಾರೆ. ಬೌಲಿಂಗ್ನಲ್ಲಿ ದುಬಾರಿಯಾಗುತ್ತಿದ್ದ ಅವರು ವಿಕೆಟ್ ಕೂಡ ಪಡೆಯುವಲ್ಲಿ ವಿಫಲರಾಗಿದ್ದರಿಂದ ರಾಜಸ್ಥಾನ ರಾಯಲ್ಸ್ ತಂಡ ಅವರನ್ನು ಕೈಬಿಟ್ಟಿತ್ತು. ಕೆಎಲ್ ರಾಹುಲ್ ನಾಯಕರಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಿದರೂ ಗೌತಮ್ ಪುನಃ ವಿಫಲರಾದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್ಗಳಲ್ಲಿ 39 ರನ್ ಬಿಟ್ಟುಕೊಟ್ಟಿದ್ದ ಅವರು, 20 ರನ್ ಗಳಿಸಿದ್ದರು. ಹೀಗಾಗಿ ನಂತರದ ಎರಡು ಪಂದ್ಯಗಳಲ್ಲಿ ಅವರು ಅವಕಾಶ ಪಡೆಯಲಿಲ್ಲ.
ಕರುಣ್ ನಾಯರ್ ಮೇಲೆ ನಿರೀಕ್ಷೆ
ಕನ್ನಡಿಗರ ಪಾರುಪತ್ಯ ಹೆಚ್ಚಿರುವ ಕಿಂಗ್ಸ್ ಇಲೆವೆನ್ ತಂಡದಲ್ಲಿರು ಮತ್ತೊಬ್ಬ ಆಟಗಾರ ಕರುಣ್ ನಾಯರ್ ಅವರಿಗೆ ಇನ್ನೂ ಅವಕಾಶಗಳು ಸಿಗಬೇಕಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕೆಟ್ಟ ಹೊಡೆತಕ್ಕೆ ಮುಂದಾಗಿ ಕೇವಲ ಒಂದು ರನ್ಗೆ ಔಟಾಗಿದ್ದರು. ಆರ್ಸಿಬಿ ವಿರುದ್ಧ 8 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿದ್ದರೆ, ರಾಜಸ್ಥಾನ ರಾಯಲ್ಸ್ ವಿರುದ್ಧ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿರಲಿಲ್ಲ. ಕಳೆದ ಐಪಿಎಲ್ ಆವೃತ್ತಿ ಹಾಗೂ ರಣಜಿ ಟೂರ್ನಿಗಳಲ್ಲಿ ಕರುಣ್ ನಾಯರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಅವರಿಗೆ ಸವಾಲಾಗಿದೆ.
ಇನ್ನೂ ಅವಕಾಶ ಸಿಗದವರು
ಆರ್ಸಿಬಿ ತಂಡದಲ್ಲಿರುವ ಪವನ್ ದೇಶಪಾಂಡೆ, ರಾಜಸ್ಥಾನ ರಾಯಲ್ಸ್ ತಂಡದಲ್ಲಿರುವ ಅನಿರುದ್ಧ್ ಜೋಷಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿರುವ ಜಗದೀಶ್ ಸುಚಿತ್ ಮತ್ತು ಕೆಕೆಆರ್ ತಂಡದಲ್ಲಿರುವ ಪ್ರಸಿದ್ಧ್ ಕೃಷ್ಣ ಅವರಿಗೆ ಇದುವರೆಗೂ ಆಡುವ ಅವಕಾಶ ಸಿಕ್ಕಿಲ್ಲ. ಇವರಲ್ಲಿ ಮುಂಬರುವ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಲಿದೆಯೇ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕು.
ಗಮನ ಸೆಳೆದ ಕನ್ನಡಿಗರು
ಆರ್ಸಿಬಿಯಲ್ಲಿ ಆಡುತ್ತಿರುವ ದೇವದತ್ ಪಡಿಕ್ಕಲ್ ಹುಟ್ಟಿದ್ದು ಕೇರಳದಲ್ಲಿ ಆದರೂ ಈಗ ಕನ್ನಡಿಗರೇ ಆಗಿದ್ದಾರೆ. ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯ ಮೂರು ಪಂದ್ಯಗಳಲ್ಲೇ ಎರಡು ಅರ್ಧಶತಕ ಗಳಿಸಿ ಗಮನ ಸೆಳೆದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಮನೀಶ್ ಪಾಂಡೆ ಕೂಡ ಎರಡು ಪಂದ್ಯಗಳಲ್ಲಿ ಮಿಂಚಿದ್ದಾರೆ. ಇನ್ನು ಪಂಜಾಬ್ ತಂಡದಲ್ಲಿ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರವಾಲ್ ಅಬ್ಬರಿಸುತ್ತಿದ್ದಾರೆ.