'ಸದ್ಯ ಏನೂ ಹೇಳುವ ಪರಿಸ್ಥಿತಿಯಲ್ಲಿಲ್ಲ'
ಕಳೆದ ಕೆಲ ದಿನಗಳ ಹಿಂದೆ ಸೌರವ್ ಗಂಗೂಲಿ ಐಪಿಎಲ್ ಆರಂಭದ ಬಗ್ಗೆ ಮಾತನಾಡಿದರು. ಐಪಿಎಲ್ ಮುಂದೂಡಿಕೆಯ ಘೋಷಣೆಯ ದಿನಕ್ಕೂ ಇಂದಿಗೂ ಯಾವುದೇ ಸಕಾರಾತ್ಮಕ ಬೆಳವಣಿಗೆಯಾಗಿಲ್ಲ. ಐಪಿಎಲ್ ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಿಲ್ಲ ಎಂದಿದ್ದರು ಸೌರವ್ ಗಂಗೂಲಿ.
ಮೀಟಿಂಗ್ ಕ್ಯಾನ್ಸಲ್
ಐಪಿಎಲ್ ಆಯೋಜನೆ ಬಗ್ಗೆ ಮುಂದಿನ ಬೆಳವಣಿಗೆ ಕುರಿತಾಗಿ ಎಲ್ಲಾ ಫ್ರಾಂಚೈಸಿಗಳ ಮೀಟಿಂಗನ್ನು ಕರೆಯಲಾಗಿತ್ತು. ಆದರೆ ಈ ಮೀಟಿಂಗನ್ನು ಕೂಡ ರದ್ದುಗೊಳಿಸಲಾಗಿದೆ. ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಮೀಟಿಂಗ್ನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.
ರದ್ದುಗೊಳಿಸುವುದೊಂದೇ ದಾರಿ?
ಸದ್ಯ ಈ ಪರಿಸ್ಥಿತಿ ಇನ್ನೆಷ್ಟು ಕಾಲ ಇರಲಿದೆ ಎಂಬ ಅರಿವು ಯಾರಿಗು ಇಲ್ಲ. ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಭಾರತದಲ್ಲೂ ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೀಗಾಗಿ ಈಗ ಘೋಷಿಸಿರುವ ಲಾಕ್ಡೌನ್ ಮುಕ್ತಾಯದ ಬಳಿಕ ಮತ್ತೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕೂಡ ಗೊತ್ತಿಲ್ಲ. ಆದರೆ ಪರಿಸ್ಥಿತಿ ಗಂಭೀರತೆಯನ್ನು ಪಡೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದ್ದಂತೆಯೇ ಐಪಿಎಲ್ನ್ನು ರದ್ದುಗೊಳಿಸುವುದೇ ಉತ್ತಮ ನಿರ್ಧಾರವಾಗಿರುವುದರಲ್ಲಿ ಅನುಮಾನವಿಲ್ಲ.
ಮಹತ್ವದ ಲೀಗ್ಗಳೂ ಮುಂದೂಡಿಕೆ
ಈ ವರ್ಷದಲ್ಲಿ ನಡೆಯಬೇಕಾಗಿದ್ದ ಮಹತ್ವದ ಟೂರ್ನಿಗಳನ್ನು ರದ್ದುಗೊಳಿಸಲಾಗಿದೆ. ಅದರಲ್ಲಿ ಪ್ರಮುಖವಾದದ್ದಉ ಒಲಿಂಪಿಕ್ಸ್. ಜಪಾನ್ನಲ್ಲಿ ನಡೆಯಬೇಕಾಗಿದ್ದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ. ಮತ್ತೊಂದೆಡೆ ಪ್ರಖ್ಯಾತ ಫುಟ್ಬಾಲ್ ಕ್ರೀಡಾಕೂಟ ಯೂರೋ ಫುಟ್ಬಾಲ್ ಟೂರ್ನಮೆಂಟ್ಕೂಡ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಇದು ಐಪಿಎಲ್ ಮುಂದೂಡಲು ಒತ್ತಡವನ್ನು ತರಲಿದೆ.
ಮುಂದಿನ ವರ್ಷ ಮೆಗಾ ಆಕ್ಷನ್ ಇಲ್ಲ?
ಬಹುತೇಕ ಈ ವರ್ಷ ಐಪಿಎಲ್ ನಡೆಯುವ ಯಾವ ಸಾಧ್ಯತೆಯೂ ಇಲ್ಲ. ಅನಿವಾರ್ಯವಾಗಿ ಬಿಸಿಸಿಐ ಈ ನಿರ್ಧಾರಕ್ಕೆ ಬರಲೇಬೇಕಾದ ಒತ್ತಡದಲ್ಲಿದೆ. ಈ ನಿರ್ಧಾರವನ್ನು ಪ್ರಕಟಗೊಳಿಸಿದರೆ ಮುಂದಿನ ವರ್ಷ ಮೆಗಾ ಆಕ್ಷನ್ ನಡೆಯಬೇಕಾಗಿತ್ತು, ಅದು ರದ್ದಾಗಲಿದೆ. ಸದ್ಯ ಇರುವ ತಂಡಗಳ ಪ್ರಕಾರವೇ ಮುಂದಿನ ವರ್ಷದ ಐಪಿಎಲ್ನಲ್ಲಿ ಪಾಲ್ಗೊಳ್ಳಲಿವೆ.
ರಕ್ಷಣೆ ಮುಖ್ಯ ಎಂದ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ ಸಂದರ್ಭದಲ್ಲಿ ಐಪಿಎಲ್ ಆಯೋಜನೆಗಿಂತಲೂ ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಮತ್ತು ಆಟಗಾರರ ರಕ್ಷಣೆ ಬಹಳ ಮುಖ್ಯ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಿಸಿಸಿಐ ಬೆಂಬಲವನ್ನು ನೀಡಲಿದೆ ಎಂಬ ಮಾತನ್ನು ಸೌರವ್ ಗಂಗೂಲಿ ಹೇಳಿದ್ದರು.