ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆರ್ಸಿಬಿ ವಿರುದ್ದದ ಪಂದ್ಯದಲ್ಲಿ 8 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ನಿಟ್ಟುಸಿರು ಬಿಟ್ಟಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್ಕೆ ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಈ ಗೆಲುವಿನ ಬಳಿಕ ಚೆನ್ನೈ ನಾಯಕ ಧೋನಿ ಸಂತಸ ವ್ಯಕ್ತಪಡಿಸಿದ್ದಾರೆ.
"ಇದು ನಮ್ಮ ಪಾಲಿಗೆ ಪರಿಪೂರ್ಣವಾದ ಪಂದ್ಯವಾಗಿತ್ತು. ನಮ್ಮ ಯೋಜನೆಯ ಪ್ರಕಾರವೇ ಎಲ್ಲವೂ ನಡೆದುಕೊಂಡು ಹೋಯಿತು. ಯೋಜನೆಯ ರೀತಿಯಲ್ಲೇ ಪ್ರದರ್ಶನವೂ ಕಂಡು ಬಂತು. ಎದುರಾಳಿಗಳ ವಿಕೆಟ್ಗಳನ್ನು ತೆಗೆದುಕೊಳ್ಳುತ್ತಾ ಸಾಗಿದೆವು. ಹೀಗಾಗಿ ಹೆಚ್ಚಿನ ರನ್ ಗಳಿಸದಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಆಟಗಾರರು ಹೇಗೆ ಪ್ರದರ್ಶನ ನೀಡುತ್ತಾರೆ ಹಾಗೂ ಪಿಚ್ ಹೇಗೆ ವರ್ತಿಸುತ್ತದೆ ಎಂಬುದು ಬಹಳಷ್ಟು ನಿರ್ಣಾಯಕವಾಗಿರುತ್ತದೆ ಎಂದು ಎಂಎಸ್ ಧೋನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಲಿನ ಬಳಿಕವೂ ನಾವು ಆತ್ಮವಿಶ್ವಾಸ ಹೊಂದಿದ್ದೇವೆ ಎಂದ ಆರ್ಸಿಬಿ ನಾಯಕ ಕೊಹ್ಲಿ
ಮಧ್ಯಮ ಓವರ್ಗಳಲ್ಲಿ ನಾವು ರನ್ ಗಳಿಸಲು ಕಷ್ಟಪಟ್ಟಿದ್ದೇವೆ. ಡೆತ್ ಓವರ್ಗಳಿಗೆ ಬಂದಾಗ ಅದು ಇನ್ನಷ್ಟು ಬೃಹತ್ ಆಗಿರುತ್ತಿತ್ತು. ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರಲು ಇದು ಕೂಡ ಒಂದು ಕಾರಣವಾಗಿರಬಹುದು. ಬ್ಯಾಟಿಂಗ್ನಲ್ಲಿ ನಾವು ಸ್ಥಿತವಾಗಿರಲಿಲ್ಲ ಎಂದು ಧೋನಿ ವಿವರಿಸಿದ್ದಾರೆ.
ಇಂದು ನಮ್ಮ ಆರಂಭ ಉತ್ತಮವಾಗಿತ್ತು. ಋತುರಾಜ್ ಗಾಯಕ್ವಾಡ್ ನಿಜಕ್ಕೂ ಉತ್ತಮ ಪ್ರದರ್ಶನ ನೀಡಿದರು. ಆತನ ಹೊಡೆತಗಳ ಆಯ್ಕೆ ಉತ್ತಮವಾಗಿದ್ದು ನಿರಾತಂಕವಾಗಿ ಬ್ಯಾಟ್ ಬೀಸಿದ್ದಾರೆ. ಇದು ಇಂದಿನ ಪಂದ್ಯದಲ್ಲಿ ವ್ಯತ್ಯಾಸವನ್ನು ಮಾಡಿತು ಎಂದು ಧೋನಿ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ 2020: ಹಸಿರು ಜರ್ಸಿಯಲ್ಲಿ ಆರ್ಸಿಬಿಗೆ ಗೆಲುವಿಗಿಂತ ಸೋಲೇ ಹೆಚ್ಚು!
ಆರ್ಸಿಬಿ ನೀಡಿದ 146 ರನ್ಗಳನ್ನು ಬೆನ್ನತ್ತಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಅದರಲ್ಲೂ ಯುವ ಆಟಗಾರ ಋತುರಾಜ್ ಗಾಯಕ್ವಾಡ್ 51 ಎಸೆತಗಳಲ್ಲಿ ಅಜೇಯ 65 ರನ್ಗಳನ್ನು ಬಾರಿಸಿ ಚೆನ್ನೈ ಗೆಲುವಿಗೆ ಕಾರಣರಾದರು. ಈ ಪ್ರದರ್ಶನಕ್ಕೆ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ