ಫಿಂಚ್ ಜೊತೆ ಪಾರ್ಥೀವ್ ಪಟೇಲ್ ಆಡ್ಬೇಕು ಎಂದುಕೊಂಡಿದ್ದ ನೆಹ್ರಾ!
ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುವುದಕ್ಕೂ ಮುನ್ನ ಆರೋನ್ ಫಿಂಚ್ ಅವರ ಜತೆ ಪಾರ್ಥಿವ್ ಪಟೇಲ್ ಇನಿಂಗ್ಸ್ ಆಡಿಸಬೇಕೆಂದು ಬಯಸಿದ್ದು ನಿಜ. ಆದರೆ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ನೋಡಿದ ಬಳಿಕ ನನ್ನ ಅಭಿಪ್ರಾಯವನ್ನು ಬದಲಾಯಿಸಿದ್ದೇನೆಂದು ಭಾರತ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ ತಿಳಿಸಿದ್ದಾರೆ.
ಪಡಿಕ್ಕಲ್ ಓರ್ವ ವಿಶೇಷ ಬ್ಯಾಟ್ಸ್ಮನ್
ಕರ್ನಾಟಕದ ಯುವ ಎಡಗೈ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಬಗ್ಗೆ ಈಗಾಗಲೇ ಅನೇಕ ದಿಗ್ಗಜ ಕ್ರಿಕೆಟಿಗರೇ ಹಾಡಿ ಹೊಗಳಿದ್ದಾರೆ. ಪಡಿಕ್ಕಲ್ಗೆ ವಿಶೇಷ ಟ್ಯಾಲೆಂಟ್ ಇದೆ. ಅವರ ನೆಟ್ ಪ್ರಾಕ್ಟೀಸ್ ವೇಳೆ ಅವರ ನೋಟ, ಚೆಂಡನ್ನು ಎದುರಿಸುವ ಪರಿಯನ್ನು ನೋಡಿ ಈತ ವಿಶೇಷ ಆಟಗಾರ ಎಂದು ವಿರಾಟ್ ಕೊಹ್ಲಿ ಸೈಮನ್ ಕ್ಯಾಟಿಚ್ಗೆ ಹೇಳಿದ್ದರು.
ಇದೀಗ ನೆಹ್ರಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವದತ್ ಪಡಿಕ್ಕಲ್ ಈ ಸೀಸನ್ನಲ್ಲಿ ಆರ್ಸಿಬಿಗೆ ಸಿಕ್ಕ ವರ ಎಂಬಂತೆ ಮಾತನಾಡಿದ್ದಾರೆ.
ಗೆಲ್ಲುವ ಪಂದ್ಯ ಕೈಚೆಲ್ಲಿದ ಚೆನ್ನೈ ತಂಡಕ್ಕೆ ವಿಲನ್ ಆದ ನಾಯಕ ಧೋನಿ, ಕೇದಾರ್ ಜಾಧವ್
ರವಿ ಬಿಷ್ಣೋಯಿ ಸ್ಪಿನ್ಗೆ ಆಕರ್ಷಿತನಾದ ಆಶಿಶ್ ನೆಹ್ರಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೇವದತ್ ಪಡಿಕ್ಕಲ್ ಜೊತೆಗೆ, ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ರವಿ ಬಿಷ್ಣೋಯ್ ಅವರ ಸ್ಪಿನ್ ಬೌಲಿಂಗ್ಗೂ ಆಶಿಶ್ ನೆಹ್ರಾ ಆಕರ್ಷಿತರಾಗಿದ್ದಾರೆ. ಈ ಇಬ್ಬರೂ ಯುವ ಪ್ರತಿಭೆಗಳು ಟೂರ್ನಿಯಲ್ಲಿ ತೋರಿರುವ ಪ್ರದರ್ಶನವನ್ನು ಮಾಜಿ ವೇಗಿ ಕೊಂಡಾಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಶೋ 'ಕ್ರಿಕೆಟ್ ಕನೆಕ್ಟೆಡ್'ನಲ್ಲಿ ಮಾತನಾಡಿದ ನೆಹ್ರಾ, "ರವಿ ಬಿಷ್ಣೋಯ್ ಹಾಗೂ ದೇವದತ್ ಪಡಿಕ್ಕಲ್ ಇಬ್ಬರೂ ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿಯಲ್ಲಿ ಆರೋನ್ ಫಿಂಚ್ ಜೆತೆಗೆ ಪಾರ್ಥಿವ್ ಪಟೇಲ್ ಇನಿಂಗ್ಸ್ ಆರಂಭಿಸಲು ಕಳುಹಿಸಬೇಕೆಂದು ಹೇಳಿದ್ದೆ. ಆದರೆ, ನನ್ನ ಯೋಚನೆಯೇ ಬದಲಾಗಿದೆ. ಪಡಿಕ್ಕಲ್ ಹಾಗೂ ಬಿಷ್ಣೋಯ್ ಅವರ ಪ್ರದರ್ಶನದಿಂದ ಆಕರ್ಷಿತನಾಗಿದ್ದೇನೆ. ಇವರಿಬ್ಬರ ಭವಿಷ್ಯ ಇದೀಗ ನನ್ನ ಕಣ್ಣ ಮುಂದೆ ಕಾಣುತ್ತಿದೆ," ಎಂದು ಹೇಳಿದರು.
ಸ್ಥಿರ ಪ್ರದರ್ಶನ ನೀಡುತ್ತಿರುವ ಪಡಿಕ್ಕಲ್
ಪ್ರಸಕ್ತ ಆವೃತ್ತಿಯಯಲ್ಲಿ ದೇವದತ್ ಪಡಿಕ್ಕಲ್ ಆರ್ಸಿಬಿ ಪರ ಆಡಿದ ಐದು ಪಂದ್ಯಗಳಿಂದ ಮೂರು ಅರ್ಧಶತಕ ಸೇರಿದಂತೆ ಒಟ್ಟು 178 ರನ್ಗಳನ್ನು ಕಲೆ ಹಾಕಿದ್ದಾರೆ. 20ರ ಪ್ರಾಯದ ಎಡಗೈ ಬ್ಯಾಟ್ಸ್ಮನ್ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಆರ್ಸಿಬಿಗೆ ಉತ್ತಮ ಆರಂಭ ಪಡೆಯಲು ನೆರವಾಗಿದ್ದಾರೆ.
ಮತ್ತೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ನ ರವಿ ಬಿಷ್ಣೋಯ್ ಎದುರಾಳಿ ಬ್ಯಾಟ್ಸ್ಮನ್ಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಸ್ಪಿನ್ನರ್ ಒಟ್ಟು 4 ವಿಕೆಟ್ಗಳನ್ನು ಪಡೆದಿದ್ದಾರೆ.ಈ ಇಬ್ಬರ ಜತೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ ನಟರಾಜನ್ ಅವರು ಕೂಡ ಪ್ರಸಕ್ತ ಆವೃತ್ತಿಯಲ್ಲಿ ಬೆಳಕಿಗೆ ಬಂದ ಪ್ರತಿಭೆಯಾಗಿದ್ದಾರೆ. ತಮಿಳುನಾಡು ವೇಗಿಯ ಮಾರಕ ಯಾರ್ಕರ್ಗಳಿಗೆ ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಸಂಜಯ್ ಮಾಂಜ್ರೇಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.