ಸೂರ್ಯ ಕುಮಾರ್ ಯಾದವ್ ಈ ಬಾರಿಯ ಐಪಿಎಲ್ನಲ್ಲಿ ಮತ್ತೊಂದು ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ. ಆರ್ಸಿಬಿ ವಿರುದ್ದದ ಪಂದ್ಯದಲ್ಲಿ 43 ಎಸೆತಗಳನ್ನು ಎದುರಿಸಿದ ಯಾದವ್ 79 ರನ್ ಬಾರಿಸಿ ಮಿಂಚಿದರು. ಈ ಮೂಲಕ ಮುಂಬೈ ಗೆಲುವಿಗೆ ಕಾರಣರಾಗಿದ್ದಾರೆ.
ಸೂರ್ಯ ಕುಮಾರ್ ಯಾದವ್ ಅವರ ಈ ಅದ್ಭುತ ಪ್ರದರ್ಶನದ ಬಳಿಕ ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಕುತೂಹಲಕಾರಿ ಟ್ವಿಟ್ ಮಾಡಿದ್ದಾರೆ. ಪುಟ್ಟ ಟ್ವಿಟ್ ಸಂದೇಶದಲ್ಲಿ ರವಿ ಶಾಸ್ತ್ರಿ ದೊಡ್ಡ ಭರವಸೆಯನ್ನು ನೀಡಿದ್ದಾರೆ.
ಸತತವಾಗಿ ಐಪಿಎಲ್ ಟೂರ್ನಿಯಲ್ಲಿ ಮಿಂಚುತ್ತಿರುವ ಸೂರ್ಯ ಕುಮಾರ್ ಯಾದವ್ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಲು ಹಾತೊರೆಯುತ್ತಿದ್ದಾರೆ. ಆದರೆ ಕಲೆದ ಎರಡ್ಮೂರು ವರ್ಷಗಳಲ್ಲಿ ಇದು ಸಾಧ್ಯವಾಗಲಿಲ್ಲ. ಆದರೆ ಇದಕ್ಕೆ ತಮ್ಮ ಬ್ಯಾಟಿಂಗ್ ಮೂಲಕವೇ ಪ್ರತ್ಯುತ್ತರವನ್ನು ನೀಡುತ್ತಿರುವ ಸೂರ್ಯ ಕುಮಾರ್ ಯಾದವ್ಗೆ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯ ತಂಡದಲ್ಲೂ ನಿರಾಸೆಯೇ ಉಂಟಾಯಿತು. ಆದರೆ ರವಿ ಶಾಸ್ತ್ರಿ ಮಾಡಿರುವ ಟ್ವೀಟ್ ಸೂರ್ಯ ಕುಮಾರ್ ಯಾದವ್ ಕನಸಿಗೆ ಹುಮ್ಮಸ್ಸು ನೀಡುವಂತಿದೆ.
ಟ್ವೀಟ್ನಲ್ಲಿ ರವಿ ಶಾಸ್ತ್ರಿ "ಸೂರ್ಯ ನಮಸ್ಕಾರ್, ಬಲಿಷ್ಠನಾಗಿರು ಮತ್ತು ತಾಳ್ಮೆಯಿಂದಿರು" ಎಂದು ಸೂರ್ಯ ಕುಮಾರ್ ಯಾದವ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಯುವ ಪ್ರತಿಭೆಯ ಪ್ರದರ್ಶನಕ್ಕೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ ಎಂಬರ್ಥದಲ್ಲಿ ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿನ ಪ್ರದರ್ಶನದ ಬಳಿಕ ಸೂರ್ಯ ಕುಮಾರ್ ಯಾದವ್ ಆಯ್ಕೆಯ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಕುಮಾರ್ ಯಾದವ್ಗೆ ಬೆಂಬಲವನ್ನು ವ್ಯಕ್ತಪಡಿಸಿ ಸಾವಿರಾರು ಟ್ವೀಟ್ಗಳು ಹರಿದು ಬರುತ್ತಿದೆ.