ಕನ್ನಡಿಗ ಆಟಗಾರರನ್ನು ಉಳಿಸಿಕೊಳ್ಳಲು ನಿರುತ್ಸಾಹ
ಪ್ರತಿ ಫ್ರಾಂಚೈಸಿಯೂ ಸ್ಥಳೀಯ ಪ್ರತಿಭಾನ್ವಿತ ಆಟಗಾರರಿಗೆ ಆದ್ಯತೆಯನ್ನು ನೀಡಲು ಬಯಸುತ್ತದೆ. ಆದರೆ ಆರ್ಸಿಬಿ ಈ ವಿಚಾರದಲ್ಲಿ ಹಿಂದಿದೆ. ಈ ಹಿಂದೆ ತಂಡದಲ್ಲಿ ಇದ್ದ ಆಟಗಾರರನ್ನು ಉಳಿಸಿಕೊಳ್ಳುವಲ್ಲಿಯೂ ಆರ್ಸಿಬಿ ಉತ್ಸಾಹ ತೋರಲಿಲ್ಲ ಎಂಬುದು ಅಭಿಮಾನಿಗಳ ಅಸಮಾದಾನಕ್ಕೆ ಕಾರಣ. ಇನ್ನು ಕೆಲ ಆಟಗಾರರಿಗೆ ಸ್ಕ್ವಾಡ್ನಲ್ಲಿದ್ದರೂ ಆಡುವ ಬಳಗದಲ್ಲಿ ಅವಕಾಶ ನೀಡದೆ ಬೆಂಚು ಬಿಸಿ ಮಾಡಿಸಲಾಯಿತು ಎಂಬುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪಡಿಕ್ಕಲ್ ಪ್ರತಿಭೆಗೆ ಸಿಗಲಿದೆಯಾ ಮನ್ನಣೆ
ಕನ್ನಡಿಗ ಯುವ ಆಟಗಾರ ದೇವದತ್ ಪಡಿಕ್ಕಲ್ ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿ ಎಲ್ಲರ ಚಿತ್ತ ತಮ್ಮತ್ತ ಹರಿಯುವಂತೆ ಮಾಡಿದ ಪ್ರತಿಭಾನ್ವಿತ ಆಟಗಾರ. ಕಳೆದ ಬಾರಿಯ ದೇಶಿಯ ಕ್ರಿಕೆಟ್ ಆವೃತ್ತಿಯಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದು ಮಾತ್ರವಲ್ಲ ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. ಹಾಗಾಗಿ ಈ ಬಾರಿಯ ಐಪಿಎಲ್ನಲ್ಲಿ ಆಡುವ ತಂಡದಲ್ಲಿ ಅವಕಾಶ ಗಳಿಸಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.
ತಂಡದ ಲೆಕ್ಕಾಚಾರಗಳು ಏನು?
ಆದರೆ ದೇವದತ್ ಪಡಿಕ್ಕಲ್ಗೆ ಅವಕಾಶ ದೊರೆಯುವ ಬಗ್ಗೆ ಅಂತಿಮ ಹಂತದವರೆಗೂ ತಂಡ ಗುಟ್ಟುಬಿಟ್ಟುಕೊಡಲಾರದು. ಆದರೆ ಆರ್ಸಿಬಿಯಲ್ಲಿ ಹಲವಾರು ದಿಗ್ಗಜ ಆಟಗಾರರಿದ್ದಾರೆ. ಆರಂಭಿಕ ಸ್ಥಾನದಲ್ಲಿ ಫಿಂಚ್ ಖಾಯಂ. ಅವರ ಜೊತೆಗೆ ಪಾರ್ಥೀವ್ ಪಟೆಲ್ ಆಡಲಿಳಿದರೆ ಪಡಿಕ್ಕಲ್ಗೆ ಅವಕಾಶ ಕ್ಷೀಣಿಸಲಿದೆ. ಮುಂದಿನ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಪಡಿಕ್ಕಲ್ ವಿಚಾರದಲ್ಲಿ ತಂಡ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಬೇರೆ ತಂಡಗಳಲ್ಲಿ ಮಿಂಚುತ್ತಿದ್ದಾರೆ ಕನ್ನಡಿಗರು
ಕನ್ನಡಿಗ ಆಟಗಾರರು ಇತರೆ ತಂಡಗಳಲ್ಲಿ ಹೆಚ್ಚಿನ ಅವಕಾಶವನ್ನು ಪಡೆದುಕೊಂಡಿದ್ದಾರೆ. ಪಂಜಾಬ್ ತಂಡ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗ ಆಟಗಾರರನ್ನು ಹೊಂದಿದ ತಂಡವಾಗಿದ್ದು ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಿದ್ದಾರೆ. ಮಯಾಂಕ್ ಅಗರ್ವಾಲ್ ತಂಡದ ಮೊದಲ ಪಂದ್ಯದಲ್ಲಿ ಸೋಲಿನ ಅಂಚಿನಲ್ಲಿದ್ದ ತಂಡವನ್ನು ಟೈ ಮಾಡುವ ಹಂತಕ್ಕೆ ತೆಗೆದುಕೊಂಡು ಹೋಗಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಆದರೆ ಕರ್ನಾಟಕ ಮೂಲದ ಫ್ರಾಂಚೈಸಿಯಾಗಿದ್ದು ಆರ್ಸಿಬಿ ತೆಗೆದುಕೋಳ್ಳುತ್ತಿರುವ ನಡೆ ಮಾತ್ರ ಅಭಿಮಾನಿಗಳಿಗೆ ಅಸಮಾದಾನಕ್ಕೆ ಕಾರಣವಾಗುತ್ತಿದೆ.