ಒಂದೆಡೆ ಯುವ ಆಟಗಾರರು ಈ ಬಾರಿಯ ಐಪಿಎಲ್ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಆದರೆ ಐಪಿಎಲ್ನಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದ್ದ ಕೆಲ ಅನುಭವಿಗಳು ಮಂಕಾದಂತೆ ಕಂಡುಬರುತ್ತಿದ್ದಾರೆ. ಅದರಲ್ಲಿ ಪ್ರಮುಖ ಹೆಸರು ಕನ್ನಡಿಗ ರಾಬಿನ್ ಉತ್ತಪ್ಪ. ರಾಜಸ್ಥಾನ್ ರಾಯಲ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಉತ್ತಪ್ಪ ಇವತ್ತು ಕೂಡ ನಿರಾಸೆ ಮೂಡಿಸಿದ್ದಾರೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಕಣಕ್ಕಿಳಿಯುವ ವೇಳೆ ತಂಡ ಸಂಕಷ್ಟದಲ್ಲಿತ್ತು. ಅನುಭವಿ ಆಟಗಾರನಾಗಿರುವ ಉತ್ತಪ್ಪ ಮೇಲೆ ಅಭಿಮಾನಿಗಳು ನಿರೀಕ್ಷೆಯನ್ನು ಇಟ್ಟಿದ್ದರು. ಆದರೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ ಉತ್ತಪ್ಪ ಗಳಿಸಿದ್ದು 17 ರನ್ ಮಾತ್ರ. ಚಾಹಲ್ ಎಸೆತದಲ್ಲಿ ಇಸುರು ಉದನಗೆ ಕ್ಯಾಚ್ ನೀಡಿ ಉತ್ತಪ್ಪ ನಿರ್ಗಮಿಸಿದರು.
ಆರ್ಸಿಬಿ Vs ರಾಜಸ್ಥಾನ: ಕೊಹ್ಲಿ, ಸ್ಮಿತ್ ಪಡೆಗೆ ಎರಡು ಕಠಿಣ ಸವಾಲುಗಳು
ಟೂರ್ನಿಯಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಒಂದಂಕಿಗೆ ನಿರ್ಗಮಿಸಿದ್ದ ಉತ್ತಪ್ಪ ಈ ಬಾರಿ ಎರಡಂಕಿಯನ್ನು ತಲುಪುವಲ್ಲಿ ಯಶಸ್ವಿಯಾದರು ಎಂಬುದಷ್ಟೇ ಸಮಾದಾನದ ಸಂಗತಿ. ಸಿಎಸ್ಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಉತ್ತಪ್ಪ 9 ಎಸೆತದಲ್ಲಿ 5 ರನ್ ಗಳಿಸಿದ್ದರು. ಬಳಿಕ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 4 ಎಸೆತಗಳಲ್ಲಿ 9 ರನ್ ಗಳಿಸಿದರೆ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 7 ಎಸೆತವನ್ನು ಎದುರಿಸಿ 2 ರನ್ಗೆ ವಿಕೆಟ್ ಒಪ್ಪಿಸಿದ್ದರು.
ಒಟ್ಟಾರೆಯಾಗಿ ರಾಬಿನ್ ಉತ್ತಪ್ಪ ಈ ಬಾರಿಯ ಟೂರ್ನಿಯಲ್ಲಿ 42 ಎಸೆತಗಳನ್ನು ಎದುರಿಸಿದ್ದು 33 ರನ್ ಮಾತ್ರವೇ ಬ್ಯಾಟ್ನಿಂದ ಸಿಡಿದಿದೆ. ಇದು ರಾಬಿನ್ ಉತ್ತಪ್ಪ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಅಭಿಮಾನಿಗಳಿಗೆ. ರಾಜಸ್ಥಾನ್ ರಾಯಲ್ಸ್ ತಂಡದ ಕೆಲ ಅಭಿಮಾನಿಗಳು ಉತ್ತಪ್ಪಗೆ ಅವಕಾಶವನ್ನು ನೀಡುವ ಬದಲು ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅಥವಾ ಅನುಭವಿ ಅಜಿಂಕ್ಯ ರಹಾನೆಗೆ ಅವಕಾಶ ನೀಡಿ ಎಂದು ಟ್ವಿಟ್ಟರ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸಿಎಸ್ಕೆ Vs ಸನ್ ರೈಸರ್ಸ್ ಪಂದ್ಯ: ಕೆಲವು ವಿಶಿಷ್ಟ ಸಂಗತಿಗಳು ಇಲ್ಲಿವೆ
ಐಪಿಎಲ್ನಲ್ಲಿ ಆರಂಭಿಕ ಆವೃತ್ತಿಯಿಂದಲೂ ಆಡುತ್ತಿರುವ ಉತ್ತಪ್ಪ ನಿರಂತರವಾಗಿ ಉತ್ತಮ ಪ್ರದರ್ಶನವನ್ನು ನಿಡಿಕೊಂಡೇ ಬಂದಿದ್ದರು. ಆದರೆ ಈ ಬಾರಿ ಉತ್ತಪ್ಪ ನಿರೀಕ್ಷಿತ ಮಟ್ಟವನ್ನು ತಲುಪಸಲು ಸಾಧ್ಯವಾಗಿಲ್ಲ. ಟೂರ್ನಿ ಆರಂಭಕ್ಕೂ ಮುನ್ನ ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ಟೀಮ್ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಇಂಗಿತವನ್ನು ಉತ್ತಪ್ಪ ವ್ಯಕ್ತಪಡಿಸಿದ್ದರು.