ದುಬೈ: ಕುಟುಂಬದ ಸದಸ್ಯರು ಸಾವನ್ನಪ್ಪಿದಾಗಲೂ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವನ್ನಾಡಿ ಕ್ರೀಡಾ ಸ್ಫೂರ್ತಿ ಮೆರೆದ ಕ್ರಿಕೆಟಿಗರಾದ ಕಿಂಗ್ಸ್ 11 ಪಂಜಾಬ್ನ ಮನ್ದೀಪ್ ಸಿಂಗ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ನ ನಿತೀಶ್ ರಾಣಾಗೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ಮನ್ ನಿತೀಶ್ ರಾಣಾ ಅವರ ಮಾವ ಕ್ಯಾನ್ಸರ್ನಿಂದಾಗಿ ಸಾವನ್ನಪ್ಪಿದ್ದರು. ಕಿಂಗ್ಸ್ 11 ಪಂಜಾಬ್ ಬ್ಯಾಟ್ಸ್ಮನ್ ಮನ್ದೀಪ್ ಸಿಂಗ್ ಅವರ ತಂದೆ ಸರ್ದಾರ್ ಹರ್ದೇವ್ ಸಿಂಗ್ ದೀರ್ಘ ಕಾಲದ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು.
ನಿತೀಶ್ ರಾಣಾಗೆ ಹೃದಯಸ್ಪರ್ಶಿ ಟ್ವೀಟ್ ಸಂದೇಶ ನೀಡಿದ ಆಕಾಶ್ ಚೊಪ್ರ
ನಿತೀಶ್ ರಾಣಾ ಅವರು ಅಕ್ಟೋಬರ್ 24ರಂದು ನಡೆದಿದ್ದ ಐಪಿಎಲ್ 42ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. 53 ಎಸೆತಗಳಿಗೆ 81 ರನ್ ಬಾರಿಸಿದ್ದರು. ರಾಣಾ ಸ್ಫೋಟಕ ಅರ್ಧ ಶತಕದೊಂದಿಗೆ ಕೆಕೆಆರ್ ಪಂದ್ಯವನ್ನು 59 ರನ್ನಿಂದ ಗೆದ್ದಿತ್ತು.
ಇದೇ ದಿನ ನಡೆದಿದ್ದ ಐಪಿಎಲ್ 43ನೇ ಪಂದ್ಯದಲ್ಲಿ ಕಿಂಗ್ಸ್ 11 ಪಂಜಾಬ್ ಮತ್ತು ಸನ್ ರೈಡರ್ಸ್ ಹೈದರಾಬಾದ್ ತಂಡಗಳು ಕಾದಾಡಿದ್ದವು. ಇದರಲ್ಲಿ ಮನ್ ದೀಪ್ 17 ರನ್ ನೀಡಿದ್ದರು. ಈ ಪಂದ್ಯದಲ್ಲಿ ಪಂಜಾಬ್ ರೋಚಕ 12 ರನ್ಗಳಿಂದ ಗೆದ್ದಿತ್ತು.
'ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ತುಂಬಾ ನೋವಾಗುತ್ತದೆ. ಅದರಲ್ಲೂ ಕೊನೇ ಸಾರಿ ಅವರಿಗೆ ಬೈ ಹೇಳಲು ನಮ್ಮಿಂದ ಸಾಧ್ಯವಾಗದಿದ್ದರೆ ಹೃದಯವೇ ಛಿತ್ರವಾದಂತೆ ಅನ್ನಿಸುತ್ತದೆ. ಮನ್ದೀಪ್ ಮತ್ತು ನಿತೀಶ್ ಕುಟುಂಬ ದುಃಖದಿಂದ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಇವತ್ತು ಆಡಿದ್ದಕ್ಕಾಗಿ ಹ್ಯಾಟ್ಸ್ಆಫ್. ಚೆನ್ನಾಗಿ ಆಡಿದ್ದೀರಿ,' ಎಂದು ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.