ಅಪಾಯದಿಂದ ತಪ್ಪಿಸಿಕೊಂಡ ಸ್ಟೋನಿಸ್
ಬೀಮರ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಮಾರ್ಕಸ್ ಸ್ಟೋನಿಸ್ ಅವರ ಗ್ಲೌಸ್ಗೆ ಚೆಂಡು ತಗುಲಿತ್ತು. ಅವರ ಬೆರಳುಗಳಿಗೆ ಪೆಟ್ಟಾಯಿತು. ಆದರೆ ಅದೃಷ್ಟವಶಾತ್ 144 ಕಿ.ಮೀ. ವೇಗದಲ್ಲಿ ಬಂದಿದ್ದ ಚೆಂಡು ಅವರ ಎದೆಗೆ ತಗುಲಿರಲಿಲ್ಲ. ರಾಜಸ್ಥಾನ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾಗೆ ಇದೇ ರೀತಿ ಬೀಮರ್ ಹೊಡೆತ ಬಿದ್ದಿತ್ತು.
ಕ್ಷಮೆ ಕೋರದ ಸೈನಿ
ಈ ಎಸೆತದ ಬಗ್ಗೆ ಸ್ಟೋನಿಸ್ ಬಹಳ ಅಸಮಾಧಾನಗೊಂಡಿದ್ದರು. ಸೈನಿ ವಿರುದ್ಧ ಕೋಪದಿಂದ ದೃಷ್ಟಿಹಾಯಿಸಿದ್ದರು. ಆದರೆ ಸೈನಿ ತಮ್ಮ ತಪ್ಪಿಗೆ ಕ್ಷಮೆ ಕೇಳಲು ಸಹ ಮುಂದಾಗಿರಲಿಲ್ಲ. ಸಾಮಾನ್ಯವಾಗಿ ನಿಯಂತ್ರಣ ತಪ್ಪಿ ಬೀಮರ್ ಆದಾಗ ಬೌಲರ್ಗಳು ಬ್ಯಾಟ್ಸ್ಮನ್ ಕ್ಷಮೆ ಕೇಳುತ್ತಾರೆ. ಆದರೆ ಸೈನಿ ಆ ಮಾನವೀಯತೆ ತೋರಿಸಿರಲಿಲ್ಲ.
ಉದ್ದೇಶಪೂರ್ವಕವಾಗಿ ಎಸೆದಿದ್ದಾರೆ
ಇದಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ. ವೀಕ್ಷಕ ವಿವರಣೆ ನೀಡುತ್ತಿದ್ದ ಗವಾಸ್ಕರ್, ಸೈನಿಯ ಬೀಮರ್ ಅನ್ನು ಪ್ರಶ್ನಿಸಿದ್ದಾರೆ. ಮಾರ್ಕಸ್ ಸ್ಟೋನಿಸ್ ಅವರ ಕ್ಷಮೆ ಕೇಳದ ಬೌಲರ್ ಉದ್ದೇಶಪೂರ್ವಕವಾಗಿಯೇ ಅದನ್ನು ಎಸೆದಿರಬಹುದು ಎಂದಿದ್ದಾರೆ. 'ಅದು ವೇಗವಾಗಿತ್ತು. ಅದರತ್ತ ನೋಡಿ. ನೀವು ಏನೇ ಹೇಳಬಹುದು. ಆದರೆ ಯಾರ್ಕರ್ ಅಷ್ಟು ಎತ್ತರಕ್ಕೆ ಬರಲು ಸಾಧ್ಯವೇ ಇಲ್ಲ' ಎಂದು ಗವಾಸ್ಕರ್ ಹೇಳಿದ್ದಾರೆ.
ಅದು ಕೈ ಜಾರಿದ್ದಲ್ಲ
'ನೀವು ಫುಲ್ಲರ್ ಯಾರ್ಕರ್ ಎಸೆದರೆ ಅದು ಮೊಣಕಾಲಿನ ಬಳಿ ಹೋಗಬಹುದು. ಇನ್ನೂ ಹೆಚ್ಚೆಂದರೆ ನಡುವಿನ ಭಾಗಕ್ಕೆ ಹೋಗಬಹುದು. ಆದರೆ ಅದಕ್ಕೂ ಮೇಲೆ ಸಾಧ್ಯವೇ ಇಲ್ಲ. ಅದು ಕೈ ಜಾರಿದ್ದು ಎಂದು ಹೇಳಬೇಡಿ' ಎಂದು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದುಬಾರಿಯಾದ ಸೈನಿ
ನವದೀಪ್ ಸೈನಿ ಎಸೆದ ಬೀಮರ್ ಅನ್ನು ನೋಬಾಲ್ ಎಂದು ಅಂಪೈರ್ ಪ್ರಕಟಿಸಿದ್ದರು. ನಂತರದ ಫ್ರೀ ಹಿಟ್ ಅನ್ನು ಸ್ಟೋನಿಸ್ ಬೌಂಡರಿಗೆ ಅಟ್ಟಿದ್ದರು. ನಂತರ ಸೈನಿ ಕೈ ಎತ್ತಿ ಕ್ಷಮೆ ಕೋರಿದ್ದರು. ಆದರೆ ಅದು ತಡವಾಗಿತ್ತು. ಸೈನಿ ಕೇವಲ ಮೂರು ಓವರ್ಗಳಲ್ಲಿ 48 ರನ್ ನೀಡಿದ್ದರು.