ಧೋನಿಯನ್ನು ಕೊಹ್ಲಿ ಅನುಸರಿಸಲಿ
ಕ್ರಿಕೆಟ್ ವಿಶ್ಲೇಕರಾಗಿ ಬದಲಾಗಿರುವ ಗೌತಮ್ ಗಂಭೀರ್, ಐಪಿಎಲ್ ಕಪ್ ಗೆಲ್ಲಬೇಕಾದರೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಯನ್ನು ಅನುಸರಿಸಬೇಕು. ಧೋನಿಯಂತೆ ಕೊಹ್ಲಿ ಕೂಡ ಒಂದಿಷ್ಟು ಪಂದ್ಯಗಳಲ್ಲಿ ಒಂದೇ ಬಲಿಷ್ಠ ತಂಡವನ್ನು ಮುಂದುವರೆಸಬೇಕು ಎಂದಿದ್ದಾರೆ.
ಬ್ಯಾಲನ್ಸ್ ಇಲ್ಲದ ತಂಡ
ಆರ್ಸಿಬಿ ತಂಡದಲ್ಲಿ ಸಮತೋಲನ ಇಲ್ಲ ಅನ್ನೋದು ನಮಗೆ-ನಿಮಗೆ ಗೊತ್ತಿರುವ ಸತ್ಯ ಸಂಗತಿ. ಗೌತಮ್ ಗಂಭೀರ್ ಕೂಡ ಕೊಹ್ಲಿಯದ್ದು ಬ್ಯಾಟ್ಸ್ಮನ್ ಹೆಚ್ಚಿರುವ ತಂಡ ಎಂದಿದ್ದಾರೆ. ಪ್ಲೇಯಿಂಗ್ XI ಆರಿಸುವಾಗ ಬ್ಯಾಲನ್ಸ್ ಮಾಡುವಲ್ಲಿ ಆರ್ಸಿಬಿ ಎಡವುತ್ತದೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದ ಗಂಭೀರ್ ತಿಳಿಸಿದ್ದಾರೆ.
ಆರ್ಸಿಬಿಗೂ ಸಿಎಸ್ಕೆಗೂ ಇರುವ ವ್ಯತ್ಯಾಸ
'ಈ ಬಾರಿಯೂ ಆರ್ಸಿಬಿ ಬ್ಯಾಟಿಂಗ್ನಲ್ಲೇ ಹೆಚ್ಚು ಬಲಿಷ್ಠ ತಂಡ ಎಂದು ನನಗನ್ನಿಸುತ್ತದೆ. ಕೊಹ್ಲಿಗೂ ಧೋನಿಗೂ ಇರುವ ದೊಡ್ಡ ವ್ಯತ್ಯಾಸವೆಂದರೆ ಧೋನಿ 6-7 ಪಂದ್ಯಗಳಲ್ಲಿ ತನ್ನ ಆಟಗಾರರೊಂದಿಗೆ ಮುಂದುವರೆಯುತ್ತಾರೆ. ನೀವು ಆರ್ಸಿಬಿಯ ಟ್ರೆಂಡ್ ಗಮನಿಸಿದರೆ, ಅಲ್ಲಿ ಬೇಗನೆ ಪ್ಲೇಯಿಂಗ್ XI ಬದಲಾಯಿಸುತ್ತಿರುತ್ತಾರೆ. ಯಾಕೆಂದರೆ ಅವರಿಗೆ ತಮ್ಮ ಪ್ಲೇಯಿಂಗ್ XI ಬಗ್ಗೆ ಅನುಮಾನವಿರುತ್ತದೆ,' ಎಂದು ಗಂಭೀರ್ ವಿವರಿಸಿದರು.
ಪ್ಲೇಯಿಂಗ್ XI ಜೊತೆಗೆ ನಿಲ್ಲಬೇಕು
ಮಾತು ಮುಂದುವರೆಸಿದ ಗಂಭೀರ್, 'ಆರಂಭಿಕ ಪಂದ್ಯಗಳಲ್ಲಿ ಆರ್ಸಿಬಿ ಉತ್ತಮ ಪ್ರದರ್ಶನ ನೀಡದಿದ್ದರೂ ಅವರು ತಮ್ಮ ಮೊದಲ ಪ್ಲೇಯಿಂಗ್ XI ಜೊತೆಗೆ ನಿಲ್ಲಬೇಕು. 6-7 ಪಂದ್ಯಗಳನ್ನು ಆಡುವ ಅವಕಾಶ ಅದೇ ಪ್ಲೇಯಿಂಗ್ XIಗೆ ನೀಡಬೇಕು. ಆಗ ಮಾತ್ರ ಆಟಗಾರನೊಬ್ಬ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆಯೇ ಹೊರತು, ಬರೀ ಒಂದೆರಡು ಪಂದ್ಯಗಳಿಗೆ ಅವಕಾಶ ಕೊಟ್ಟರೆ ಅಲ್ಲ,' ಎಂದರು.