ಸುರೇಶ್ ರೈನಾ, ಹರ್ಭಜನ್ ಸಿಂಗ್ ಅಲಭ್ಯತೆ
2020ರ ಆವೃತ್ತಿಯ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಕಾದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೆನ್ನೆಲುಬಾಗಿದ್ದ ಉಪನಾಯಕ ಸುರೇಶ್ ರೈನಾ ವೈಯಕ್ತಿಕ ಕಾರಣಗಳನ್ನು ನೀಡಿ ಟೂರ್ನಿಯ ಆರಂಭಕ್ಕೂ ಮುನ್ನವೇ ತಂಡದ ಕ್ಯಾಂಪ್ ತೊರೆದು ಭಾರತಕ್ಕೆ ವಾಪಾಸಾಗಿದ್ದರು. ಇದರ ಬೆನ್ನಲ್ಲೇ ಅನುಭವಿ ಹರ್ಭಜನ್ ಸಿಂಗ್ ಕೂಡ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕಣಕ್ಕಿಳಿಯದಿರಲು ನಿರ್ಧರಿಸಿದರು. ಇದು ತಂಡದ ಸಮತೊಲನದ ಮೇಲೆ ದೊಡ್ಡ ಏಟು ಬೀಳುವಂತೆ ಮಾಡಿತು. ಪಿಯೂಚ್ ಚಾವ್ಲಾ, ರವೀಂದ್ರ ಜಡೇಜಾ ಮಿಂಚಲು ವಿಫಲರಾಗುತ್ತಿರುವ ಯುಎಇ ಪಿಚ್ನಲ್ಲಿ ಹರ್ಭಜನ್ ಸಿಂಗ್ ಅನುಭವ ತಂಡಕ್ಕೆ ನೆರವಾಗುವ ಸಾಧ್ಯತೆ ಹೆಚ್ಚಿತ್ತು.
ಎಂಎಸ್ ಧೋನಿಯ ಫಾರ್ಮ್ ಕೊರತೆ
ಐಪಿಎಲ್ನ ಪ್ರತೀ ಆವೃತ್ತಿಯಲ್ಲೂ ಧೋನಿ ಬ್ಯಾಟಿಂಗ್ ತಂಡಕ್ಕೆ ಆಧಾರವಾಗಿರುತ್ತಿತ್ತು. ಅನುಭವಿಯಾಗಿ ಧೋನಿ ತಂಡದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾತ್ರವಲ್ಲದೆ ಅನಿವಾರ್ಯ ಸಂದರ್ಭಗಳಲ್ಲಿ ಎಚ್ಚರಿಕೆಯ ಆಟದ ಮೂಲಕವೂ ತಂಡಕ್ಕೆ ಚೇತರಿಕೆಯನ್ನು ನೀಡಿ ತಂಡವನ್ನು ಮೇಲಕ್ಕೆತ್ತುತ್ತಿದ್ದರು. ಆದರೆ ಐಪಿಎಲ್ 2020ರ ಆವೃತ್ತಿಯಲ್ಲಿ ಮಾಹಿ ಸಂಪೂರ್ಣವಾಗಿ ಬ್ಯಾಟಿಂಗ್ ವ್ಯಫಲ್ಯವನ್ನು ಅನುಭವಿಸುತ್ತಿದ್ದಾರೆ. ಶೀಘ್ರವಾಗಿ ರನ್ಗಳಿಸಲು ವಿಫಲರಾಗುತ್ತಿದ್ದಾರೆ. ಕೆಲ ಇನ್ನಿಂಗ್ಸ್ಗಲ್ಲಿ ಧೋನಿ ವೇಗವಾಗಿ ರನ್ಗಳಿಸಿದರಾದರೂ ಅದಾಗಲೇ ತಂಡ ಪಂದ್ಯವನ್ನು ಎದುರಾಳಿ ಕೈಗೆ ಒಪ್ಪಿಸಿಬಿಟ್ಟಾಗಿತ್ತು. ಧೋನಿಯ ನಾಯಕತ್ವದಲ್ಲಿ ಎಂದಿನ ಹುಮ್ಮಸ್ಸು ಕಾಣಲೇ ಇಲ್ಲ. ಆಟದ ರಣತಂತ್ರವನ್ನು ಬದಲಿಸುವ ಬಗ್ಗೆ ಮನಸ್ಸು ಮಾಡಲೇ ಇಲ್ಲ. ಆದರೆ ವಿಕೆಟ್ನ ಹಿಂದೆ ಮಾತ್ರ ಧೋನಿ ತಮ್ಮ ಎಂದಿನ ಕೌಶಲ್ಯವನ್ನು ತೋರ್ಪಡಿಸಲು ಸಾಧ್ಯವಾಗಿದ್ದರು.
ಯುವ ಆಟಗಾರರಿಗೆ ಅವಕಾಶಗಳ ಕೊರತೆ
ಈ ಬಾರಿಯ ಐಪಿಎಲ್ನಲ್ಲಿ ಯುವ ಆಟಗಾರರೇ ಹೆಚ್ಚಾಗಿ ಗಮನಸೆಳೆದಿದ್ದಾರೆ. ಆದರೆ ದೋನಿ ನೇತೃತ್ವದ ತಂಡ 'ಡ್ಯಾಡ್ಸ್ ಆರ್ಮಿ' ಎಂಬ ತನ್ನ ಹಣೆಪಟ್ಟಿಗೆ ತಕ್ಕನಾಗಿಯೇ ಕಣಕ್ಕಿಳಿದಿತ್ತು. ತಂಡದಲ್ಲಿ ಆಟಗಾರರನ್ನು ಬದಲಾವಣೆ ಮಾಡಿಕೊಳ್ಳಲು ಬಯಸದೇ ಇರುವ ತಂಡವನ್ನೇ ಉಳಿಸಿಕೊಳ್ಳದೆ ಒಂದೇ ಆಡುವ ಬಳಗವನ್ನು ಕಣಕ್ಕಿಳಿಸುವ ತಂತ್ರವನ್ನು ಈ ಬಾರಿಯೂ ಅನುಸರಿಸಿತು. ಕೆಲ ಆಟಗಾರರು ತಮ್ಮ ಫಾರ್ಮ್ ಕಂಡುಕೊಳ್ಳಲು ಹಲವು ಪಂದ್ಯಗಳನ್ನೇ ತೆಗೆದುಕೊಂಡರು. ಅದಾಗಲೇ ಡೆಲ್ಲಿ ಆರ್ಸಿಬಿಯಂತಾ ತಂಡಗಳಿಗಿಂತ ಸಿಎಸ್ಕೆ ಹಿಂದೆ ಬಿದ್ದಾಗಿತ್ತು. ಎನ್ ಜಗದೀಸನ್, ಆರ್ ಸಾಯಿ ಕಿಶೋರ್ ಹಾಗೂ ಋತುರಾಜ್ ಗಾಯಕ್ವಾಡ್ ಅವರಂತಾ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಿಲ್ಲ. ಕೆಲವರಿಗೆ ಅವಕಾಶ ದೊರೆತರೂ ಅವರಿಂದ ಹೆಚ್ಚಿನ ರನ್ ಹರಿದು ಬರಲಿಲ್ಲ.
ವಿಚಿತ್ರ ರಣತಂತ್ರಗಳು
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆಲ ಅನಿರೀಕ್ಷಿತ ರಣತಂತ್ರಗಳನ್ನು ಹೆಣೆಯುವುದಕ್ಕೆ ಖ್ಯಾತವಾಗಿದೆ. ಇದರಲ್ಲಿ ಇಷ್ಟು ವರ್ಷ ಸಿಎಸ್ಕೆ ಯಶಸ್ಸನ್ನೂ ಕಂಡಿತ್ತು. ಆದರೆ ಈ ಬಾರಿ ಧೋನಿಯ ತಂತ್ರಗಳು ಸಂಪೂರ್ಣವಾಗಿ ವಿಫಲವಾಗಿದೆ. ಬ್ಯಾಟ್ ಹಾಗೂ ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿರುವ ಸ್ಯಾಮ್ ಕರ್ರನ್ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಧೋನಿ ವಿಫಲರಾದರು. ಏಳು ಪಂದ್ಯಗಳ ನಂತರ ಸ್ಯಾಮ್ ಕರ್ರನ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದರು. 2019ರಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಪಡೆದಿದ್ದ ಇಮ್ರಾನ್ ತಾಹಿರ್ ಅವರನ್ನು ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಸುವ ಪ್ರಯತ್ನವನ್ನು ಚೆನ್ನೈ ನಡೆಸಲಿಲ್ಲ. ಡ್ವೇಯ್ನ್ ಬ್ರಾವೋ ಮೊಣಕಾಲಿನ ಗಾಯದಿಂದ ಗೈರಾಗಿದ್ದರೂ ತಾಹಿರ್ಗೆ ಅವಕಾಶವೇ ದೊರೆಯಲಿಲ್ಲ.