ಹೊಸ ಆವೃತ್ತಿಯಲ್ಲಿ ಆರು ಪಂದ್ಯಗಳು ಮಾತ್ರ ಮಧ್ಯಾಹ್ನ ನಡೆಯಲಿವೆ
ಈ ಬಾರಿಯ ಐಪಿಲ್ ನಲ್ಲಿ ಶನಿವಾರ ಒಂದೇ ಒಂದು ಪಂದ್ಯವನ್ನು ಆಡಿಸಲಾಗುತ್ತಿದೆ. ಭಾನುವಾರ ಮಾತ್ರ ಎಂದಿನಂತೆ, ಎರಡು ಪಂದ್ಯಗಳು ಇರಲಿವೆ. ಇನ್ನು ಸಮಯದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಹೊಸ ಆವೃತ್ತಿಯಲ್ಲಿ ಆರು ಪಂದ್ಯಗಳು ಮಾತ್ರ ಮಧ್ಯಾಹ್ನ ನಡೆಯಲಿವೆ. ಈ ಕ್ರಿಕೆಟ್ ಹಬ್ಬ ಮಾರ್ಚ್ 29ರಿಂದ ಮೇ 24ರ ವರೆಗೆ ನಡೆಯಲಿದೆ.
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ
2008ರಿಂದ ಆರಂಭವಾದ ಐಪಿಎಲ್ ನಲ್ಲಿ ಅಲ್ಲಿಂದ ಇಲ್ಲಿಯವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬಂದವರು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಕಳೆದ ಸುಮಾರು ಒಂದು ವರ್ಷದಿಂದ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನು ಧೋನಿ ಆಡಲಿಲ್ಲ. ಅವರು ಆಡಿದ ಕೊನೆಯ ಟಿ20 ಪಂದ್ಯ, ಫೆಬ್ರವರಿ 27,2019ರಂದು, ಆಸ್ಟ್ರೇಲಿಯಾದ ವಿರುದ್ದ. ಐಪಿಎಲ್ ಪ್ರಸಕ್ತ ಸರಣಿಗೆ ಧೋನಿ, ಭಾರೀ ಪ್ರಾಕ್ಟೀಸ್ ನಡೆಸುತ್ತಿದ್ದಾರೆ.
ಚೆನ್ನೈ ತಂಡದ ಉಪನಾಯಕ ಸುರೇಶ್ ರೈನಾ
ಚೆನ್ನೈ ತಂಡದ ಉಪನಾಯಕ, ಎಡಗೈ ಬ್ಯಾಟ್ಸ್ ಮ್ಯಾನ್ ಮತ್ತು ಉತ್ತಮ ಫೀಲ್ಡರ್ ಕೂಡಾ ಆಗಿರುವ ಸುರೇಶ್ ರೈನಾ ಕೂಡಾ ಅಂತರಾಷ್ಟ್ರೀಯ ಪಂದ್ಯದಿಂದ ಇನ್ನೂ ನಿವೃತ್ತಿ ಘೋಷಿಸಿಲ್ಲ. ಜುಲೈ 17, 2018 ಇವರು ಆಡಿದ ಕೊನೆಯ ಏಕದಿನ ಪಂದ್ಯವಾಗಿದ್ದು, ಇಂಗ್ಲೆಂಡ್ ವಿರುದ್ದ ಆಡಿದ್ದರು. ಅಲ್ಲಿಂದ ಇಲ್ಲಿಯವರೆಗೆ, ಟೀಂ ಇಂಡಿಯಾದಲ್ಲಿ ರೈನಾಗೆ ಸ್ಥಾನ ಸಿಗಲಿಲ್ಲ. ಇವರು ಕೂಡಾ, ಐಪಿಎಲ್ ನಲ್ಲಿ ಫಿಟ್ ಇರಲು ನೆಟ್ ಪ್ರಾಕ್ಟೀಸ್ ನಲ್ಲಿ ತೊಡಗಿದ್ದಾರೆ.
ಬಲಗೈ ಸ್ಪಿನ್ನರ್ ಹರಭಜನ್ ಸಿಂಗ್
ಟೀಂ ಇಂಡಿಯಾದ ಬಲಗೈ ಸ್ಪಿನ್ನರ್ ಆಗಿದ್ದ ಹರಭಜನ್ ಸಿಂಗ್, ಕೊನೆಯ ಟಿ20 ಪಂದ್ಯವನ್ನು ಆಡಿದ್ದು, ಯುಎಇ ವಿರುದ್ದ ಮಾರ್ಚ್ 4,2016ರಂದು. ಐಪಿಎಲ್ ನಲ್ಲಿ ಮೊದಲು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಹರಭಜನ್, ನಂತರ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡರು. ಕಳೆದ ಐಪಿಎಲ್ ಸೀಸನ್ ನಲ್ಲಿ ಹರಭಜನ್ ಹದಿನಾರು ವಿಕೆಟ್ ಅನ್ನು ಪಡೆದಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಇವರು ನಿವೃತ್ತಿಯನ್ನು ಘೋಷಿಸಬೇಕಷ್ಟೇ.