ಯುವಿಯಿಂದ ಐಪಿಎಲ್ ಫೈನಲ್ ಲೆಕ್ಕಾಚಾರ, ಆರ್ಸಿಬಿಗೆ ಸ್ಥಾನವಿಲ್ಲ!
ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಐಪಿಎಲ್ 13ನೇ ಆವೃತ್ತಿಯ ಫೈನಲ್ಗೇರುವ ತಂಡಗಳ ಯಾವುವು ಎಂದು ಭವಿಷ್ಯ ನುಡಿದಿದ್ದಾರೆ. ಈ ಬಾರಿ ಕಪ್ ಗೆಲ್ಲುವ ಅವಕಾಶ ಹೊಂದಿದೆ ಎಂದು ಕೇಳಿಬಂದಿರುವ ಆರ್ಸಿಬಿ ತಂಡವು ಸಿಕ್ಸರ್ ಕಿಂಗ್ನ ಲೆಕ್ಕಾಚಾರದಲ್ಲಿ ಇಲ್ಲವೇ ಇಲ್ಲ.
ಮುಂಬೈ-ಪಂಜಾಬ್ ಪಂದ್ಯ ನೋಡಿ ಯುವರಾಜ್ ಭವಿಷ್ಯ
ಹೌದು, ಭಾನುವಾರ (ಅ. 18) ಐಪಿಎಲ್ ಇತಿಹಾಸದಲ್ಲಿ ಎಂದೂ ಮರೆಯಲಾಗದ ದಿನ. ಏಕೆಂದರೆ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಗೆಲುವನ್ನ ದಕ್ಕಿಸಲು ಹೋರಾಡಿದ ರೀತಿ ಐಪಿಎಲ್ ವಿಶ್ವದಲ್ಲೇ ಅತ್ಯುತ್ತಮ ಟಿ20 ಲೀಗ್ ಎಂಬುದಕ್ಕೆ ಹಿಡಿದ ಕನ್ನಡಿಯಾಗಿತ್ತು.
ಒಂದೇ ಪಂದ್ಯದಲ್ಲಿ ಎರಡು ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶ ಕಂಡ ಯುವರಾಜ್ ಸಿಂಗ್ ಈ ಬಾರಿಯ ಸೀಸನ್ನಲ್ಲಿ ಐಪಿಎಲ್ ಫೈನಲ್ಗೇರುವ ತಂಡವನ್ನು ತಿಳಿಸಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಎಲ್ಲರನ್ನ ಹಿಂದಿಕ್ಕಿ ಫೈನಲ್ಗೇರುತ್ತದೆ!
ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ 2020 ಫೈನಲ್ಗೇರುತ್ತದೆ. ಹೀಗಂತ ನಾವು ಹೇಳ್ತಿಲ್ಲ, ಬದಲಾಗಿ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಭವಿಷ್ಯವಾಗಿದೆ.
ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿರುವ 9 ಪಂದ್ಯಗಳಿಂದ ಮೂರು ಪಂದ್ಯ ಗೆದ್ದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ , ಇತರೆ ತಂಡಗಳನ್ನು ಹಿಂದಿಕ್ಕಿ ಫೈನಲ್ಗೇರಲಿದೆ ಎಂದು ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ರಾಹುಲ್ ಟೀಮ್
2020ರ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಸದ್ಯ ಆರನೇ ಸ್ಥಾನದಲ್ಲಿದೆ. ಈ ಹಂತದಲ್ಲಿ ನೋಡುವುದಾದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇಆಫ್ಗೆ ಅರ್ಹತೆ ಪಡೆಯುವ ಹಾದಿ ಸ್ವಲ್ಪ ಕಠಿಣವಾಗಿದೆ. ಆದರೆ, ಯುವರಾಜ್ ಸಿಂಗ್ ಕ್ರಮವಾಗಿ 6 ಹಾಗೂ 5 ಪಂದ್ಯಗಳನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳನ್ನು ಬಿಟ್ಟು, ಪಂಜಾಬ್ ತಂಡವನ್ನು ಬೆಂಬಲಿಸಿದ್ದಾರೆ. ರಾಹುಲ್ ಪಡೆ ಪ್ಲೇಆಫ್ ಅಲ್ಲದೆ, ಫೈನಲ್ಗೇರಲಿದೆ ಎಂಬುದು ಯುವಿ ಅಭಿಮತ.
ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಯುವರಾಜ್ ಸಿಂಗ್ ಈ ವಿಷಯವನ್ನು ತಿಳಿಸಿದರು. ಹಾಲಿ ಚಾಂಪಿಯನ್ಸ್ ವಿರುದ್ಧ ಅದ್ಭುತ ಹೊಡೆತಗಳನ್ನು ಹೊಡೆದ ನಿಕೋಲಸ್ ಪೂರನ್ ಅವರನ್ನು ಶ್ಲಾಘಿಸಿದರು. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬೈ ಇಂಡಿಯನ್ಸ್ ಮತ್ತೊಂದು ತುದಿಯಲ್ಲಿ ಫೈನಲ್ ಹಣಾಹಣಿಯಲ್ಲಿ ಆಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.
|
ನಾವೇನು ಭಾರತಕ್ಕೆ ವಾಪಸ್ ಬರೋದಾ ಎಂದ ಚಹಾಲ್!
ಯುವರಾಜ್ ಸಿಂಗ್ ಟ್ವೀಟ್ಗೆ ಆರ್ಸಿಬಿ ಸ್ಪಿನ್ನರ್ ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ಫೈನಲ್ಗೆ ಹೋಗುವುದಾದರೆ ನಾವು ಭಾರತಕ್ಕೆ ವಾಪಸ್ ಆಗುವುದಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಯುವಿ ಬೇಡ ಇನ್ನಷ್ಟು ವಿಕೆಟ್ ಪಡೆದು, ಸಿಕ್ಸರ್ ಹೊಡೆದು ಬನ್ನಿ ಎಂದಿದ್ದಾರೆ.
ಯುವಿಯನ್ನ ಮತ್ತೆ ಕಾಲೆಳೆದ ಚಹಾಲ್ ಹಾಗಾದ್ರೆ ನವೆಂಬರ್ 10ರವರೆಗೆ ವಿಕೆಟ್ ಪಡೆದು ಅಥವಾ ಸಿಕ್ಸರ್ ಹೊಡೆಸಿಕೊಳ್ಳುತ್ತೇನೆ ಎಂದಿದ್ದಾರೆ. ಇದರರ್ಥ ನಾವು ಫೈನಲ್ ಆಡುತ್ತೇವೆ ಎಂದು ಚಹಾಲ್ ಪರೋಕ್ಷವಾಗಿ ತಿಳಿಸಿದ್ದಾರೆ.
ಚಹಾಲ್ ಟ್ವೀಟ್ಗೆ ಸರಿಯಾಗಿ ಉತ್ತರಿಸಿದ ಯುವಿ, ಖಂಡಿತವಾಗಿ ನೀವು ಫೈನಲ್ ಅನ್ನು ನೋಡಿಕೊಂಡು ಬನ್ನಿ ಎಂದು ಟಕ್ಕರ್ ನೀಡಿದ್ದಾರೆ. ಇದಕ್ಕೆ ಸುಸ್ತಾದ ಚಹಾಲ್ ಯಾವುದೇ ಉತ್ತರವನ್ನು ನೀಡಿಲ್ಲ.
ಆರ್ಸಿಬಿ ಮೂರನೇ ಸ್ಥಾನ, ಪಂಜಾಬ್ ಆರನೇ ಸ್ಥಾನ
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನದಲ್ಲಿದೆ, ಹಾಗಾಗಿ ಪ್ಲೇಆಫ್ ಅರ್ಹತೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಮವಾಗಿ ಎರಡು ಮತ್ತು ಮೂರನೇ ಕ್ರಮಾಂಕದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ ನಾಲ್ಕನೇ ಸ್ಥಾನದಲ್ಲಿದೆ. ಸನ್ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವೆನ್ ಪಂಜಾಬ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಕೊನೆಯ ನಾಲ್ಕು ಸ್ಥಾನಗಳನ್ನು ಅಲಂಕರಿಸಿವೆ. ಈ ವರ್ಷದ ಐಪಿಎಲ್ನ ಫೈನಲ್ಗೆ ಯಾವ ತಂಡಗಳು ಸ್ಥಾನ ಪಡೆಯುತ್ತವೆ ಎಂಬುದನ್ನು ಸಮಯ ಮಾತ್ರ ಹೇಳುತ್ತದೆ, ಆದಾಗ್ಯೂ ಯುವರಾಜ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಫೈನಲ್ ತಲುಪುವ ತಂಡಗಳ ಪಟ್ಟಿಗೆ ಸೇರಿಸಿರುವುದು ಆಶ್ಚರ್ಯ ಮೂಡಿಸಿದೆ.