ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ 4 ಜಯ ಸಾಧಿಸುವ ಮೂಲಕ ಉತ್ತಮ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಸ್ವದೇಶಕ್ಕೆ ಮರಳಿದ್ದು ಕೊಂಚ ಬೇಸರವನ್ನುಂಟು ಮಾಡಿದೆ. ಈ ಇಬ್ಬರೂ ಸಹ ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಸ್ವದೇಶಕ್ಕೆ ಮರಳುತ್ತಿರುವುದರ ಬಗ್ಗೆ ಆರ್ಸಿಬಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿತ್ತು.
ಹೀಗೆ ವೈಯಕ್ತಿಕ ಕಾರಣವನ್ನು ನೀಡಿ ತನ್ನ ಸ್ವದೇಶವನ್ನು ಸೇರಿದ ಆಸ್ಟ್ರೇಲಿಯಾದ ಆಟಗಾರ ಆಡಂ ಜಂಪಾ ಐಪಿಎಲ್ ಆಡಲು ಭಾರತ ಸುರಕ್ಷಿತ ಸ್ಥಳವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕಳೆದ ಬಾರಿ ಐಪಿಎಲ್ ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಭಾರತಕ್ಕೆ ಹೋಲಿಸಿದರೆ ಯುಎಇ ಎಷ್ಟೋ ಉತ್ತಮ, ಈ ಬಾರಿಯ ಐಪಿಎಲ್ ಟೂರ್ನಿಯನ್ನು ಸಹ ಯುಎಇಯಲ್ಲಿ ಆಯೋಜಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆಡಂ ಜಂಪಾ ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕಿಂತ ಯುಎಇ ಆಟಗಾರರಿಗೆ ಹೆಚ್ಚಿನ ಸುರಕ್ಷತೆ ನೀಡಿತ್ತು, ಹೀಗಾಗಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಸಹ ಅಲ್ಲಿಯೇ ಆಯೋಜನೆ ಮಾಡಬೇಕಾಗಿತ್ತು ಎಂಬುದು ಜಂಪಾ ಅವರ ಅಭಿಪ್ರಾಯ.
ಪ್ರಸ್ತುತ ಐಪಿಎಲ್ ಟೂರ್ನಿಯ ಬಯೋ ಬಬಲ್ ಕೂಡ ತುಂಬ ಭಯಂಕರವಾಗಿತ್ತು, ಯಾವಾಗಲೂ ನೈರ್ಮಲ್ಯವಾಗಿರಬೇಕು ಮತ್ತು ಎಚ್ಚರಿಕೆಯಿಂದಿರಬೇಕು ಎಂಬುದನ್ನು ಕೇಳಿ ಕೇಳಿ ನಾನು ದುರ್ಬಲಗೊಂಡಿದ್ದೆ ಎಂದು ಜಂಪಾ ಹೇಳಿಕೊಂಡಿದ್ದಾರೆ. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಸಹ ಭಾರತದಲ್ಲಿಯೇ ನಡೆಸಲು ತೀರ್ಮಾನ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಇದೊಂದು ದೊಡ್ಡ ಚರ್ಚಾಸ್ಪದ ವಿಷಯವಾಗಲಿದೆ ಎಂದು ಜಂಪಾ ಅಭಿಪ್ರಾಯಪಟ್ಟರು.
ಇತ್ತ ಆರ್ಸಿಬಿ ಆಟಗಾರ ಆಡಂ ಜಂಪಾ ಈ ರೀತಿ ಹೇಳಿಕೆ ನೀಡಿದ್ದರೆ, ಅತ್ತ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಕೌಲ್ಟರ್ನೈಲ್ ಭಾರತದಲ್ಲಿ ಆಯೋಜಿಸಲಾಗಿರುವ ಬಯೋ ಬಬಲ್ ಬಗ್ಗೆ ತನಗೆ ತುಂಬಾ ವಿಶ್ವಾಸವಿದ್ದು ಯಾವುದೇ ಕಾರಣಕ್ಕೂ ಆಸ್ಟ್ರೇಲಿಯಕ್ಕೆ ಮರಳುವ ಯೋಚನೆ ಇಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.