ಸೈಯದ್ ಮುಷ್ತಾಕ್ ಟ್ರೋಫಿ ಅಲಿ ಟ್ರೋಫಿ ಟೂರ್ನಮೆಂಟ್ ನಲ್ಲಿ ಮಿಂಚಿ ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಸುಲಭವಾಗಿ ಎಂಟ್ರಿ ಪಡೆದುಕೊಳ್ಳಲು ಹಲವಾರು ಪ್ರತಿಭೆಗಳು ಶ್ರಮಿಸುತ್ತಿದ್ದಾರೆ. ಈ ನಡುವೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್ ಹರಾಜು ಪಟ್ಟಿ ಸೇರಲು ಅರ್ಹರಾಗಿರುವ ಎಂಬ ಸುದ್ದಿ ಬಂದಿದೆ.
ಇದೇ ಮೊದಲ ಬಾರಿಗೆ ಹಿರಿಯರ ತಂಡದಲ್ಲಿ ಅರ್ಜುನ್ ಕಾಣಿಸಿಕೊಂಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಯುವ ಎಡಗೈ ವೇಗಿ ಅರ್ಜುನ್ ಬೌಲಿಂಗ್ ಮಾಡುತ್ತಿದ್ದಾರೆ. ಒಂದೆರಡು ವಿಕೆಟ್ ಪಡೆದುಕೊಂಡಿದ್ದಾರೆ ಕೂಡಾ.
ದೇಶಿ ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿರುವ ಮುಂಬೈನ 22 ಮಂದಿ ಸದಸ್ಯರ ತಂಡದಲ್ಲಿ ಅರ್ಜುನ್ ಸೇರ್ಪಡೆಯಾಗಿದ್ದಾರೆ ಎಂದು ಮುಖ್ಯ ಆಯ್ಕೆದಾರ ಮಾಜಿ ವೇಗಿ ಸಲೀಲ್ ಅಂಕೋಲಾ ಜನವರಿ 2 ರಂದು ಪ್ರಕಟಿಸಿದರು. ಬಿಸಿಸಿಐ ನಿಯಮದಂತೆ ಪ್ರತಿ ತಂಡ ಗರಿಷ್ಠ 20 ಮಂದಿಯನ್ನು ಮಾತ್ರ ಹೊಂದಬಹುದಾಗಿತ್ತು.
ಆದರೆ, ಅರ್ಜುನ್ ಹಾಗೂ ಕೃತಿಕ್ ಹನಗವಾಡಿಯನ್ನು ಸೇರ್ಪಡೆ ಮಾಡಿಕೊಂಡು 22 ತಂಡದೊಂದಿಗೆ ಮುಂಬೈ ಕಣಕ್ಕಿಳಿಯಲು ಬಯಸಿತು. ಬಿಸಿಸಿಐ ಕೂಡಾ ನಿಯಮ ಬದಲಾಯಿಸಿ 22 ಮಂದಿಯನ್ನು ಹೊಂದಲು ಅನುಮತಿ ನೀಡಿತು.
ಹರ್ಯಾಣ ತಂಡದ ಪರ 21 ವರ್ಷ ವಯಸ್ಸಿನ ಅರ್ಜುನ್ ಮೊದಲ ಪಂದ್ಯವಾಡಿ 1 ವಿಕೆಟ್ ಗಳಿಸಿದರು. ಮುಂದಿನ ಪಂದ್ಯದಲ್ಲೂ ಒಂದು ವಿಕೆಟ್ ಗಳಿಸಿದರು. ಹಾಲಿ ಈ ಟೂರ್ನಮೆಂಟ್ ನಲ್ಲಿ ಮುಂಬೈ ಸತತವಾಗಿ ಮೂರು ಸೋಲು ಕಂಡಿದೆ.
ಐಪಿಎಲ್ ಹರಾಜು ನಿಯಮ:
ರಾಜ್ಯ ಕ್ರಿಕೆಟ್ ಸಮಿತಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೀಡಿರುವ ಐಪಿಎಲ್ ಹರಾಜು ನಿಯಮಾವಳಿ ಪ್ರಕಾರ, ರಾಜ್ಯ ತಂಡದ ಪರ ದೇಶಿ ಟಿ 20, ರಣಜಿ ಅಥವಾ ಅದೇ ಸ್ತರದ ಪಂದ್ಯಗಳಲ್ಲಿ ಆಡಿರಬೇಕಾಗುತ್ತದೆ. ಜ್ಯೂನಿಯರ್ ಮಟ್ಟದಲ್ಲಿ ಆಡಿರುವ ಅರ್ಜುನ್ ಅವರು ಈಗ ಮುಂಬೈ ಪರ ಮೊದಲ ಪಂದ್ಯವಾಡಿದ್ದು,ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛೆ ವ್ಯಕ್ತಪಡಿಸಿ, ಆನ್ ಲೈನ್ ನಲ್ಲಿನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ಯಾವುದೇ ಏಜೆಂಟ್ ಅಥವಾ ಮ್ಯಾನೇಜರ್ ಮೂಲಕ ಬರುವ ಅರ್ಜಿಯನ್ನು ಸ್ವೀಕರಿಸದಿರಲು ಬಿಸಿಸಿಐ ನಿರ್ಧರಿಸಿದೆ. ಮುಂಬೈ ಇಂಡಿಯನ್ಸ್ ಪರ ಈಗಾಗಲೇ ನೆಟ್ ಬೌಲರ್ ಆಗಿ ಗುರುತಿಸಿಕೊಂಡಿರುವ ಅರ್ಜುನ್ ಅವರನ್ನು ಐದು ಬಾರಿ ಚಾಂಪಿಯನ್ ತಂಡವೇ ಎಷ್ಟು ಬೆಲೆಯಾದರೂ ಸರಿ ಕೊಟ್ಟು ಖರೀದಿಸುವ ಸಾಧ್ಯತೆಯಿದೆ.