ಇದೇ ಮೊದಲ ಬಾರಿಗೆ ಐಪಿಎಲ್ ತಂಡವೊಂದರ ನಾಯಕತ್ವವನ್ನು ಯುವ ಆಟಗಾರ ರಿಷಭ್ ಪಂತ್ ವಹಿಸಿಕೊಂಡಿದ್ದರು. ಶ್ರೇಯಸ್ ಐಯ್ಯರ್ ಗಾಯಕ್ಕೊಳಗಾಗಿದ್ದ ಕಾರಣದಿಂದ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ರಿಷಭ್ ಪಂತ್ ಹೆಗಲಿಗೆ ಹಾಕಲಾಗಿತ್ತು. ಅತಿ ಕಿರಿಯ ವಯಸ್ಸಿನಲ್ಲಿಯೇ ನಾಯಕತ್ವದ ಜವಾಬ್ದಾರಿಯನ್ನು ರಿಷಭ್ ಪಂತ್ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಈ ಕುತೂಹಲಕ್ಕೆ ಉತ್ತರವಾಗಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಸ್ತುತ ಟೂರ್ನಿ ಮುಂದೂಡಲ್ಪಟ್ಟ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ತನ್ನ ತಂಡ ಅಗ್ರಸ್ಥಾನಕ್ಕೇರುವಂತಹ ಉತ್ತಮ ಗುಣಮಟ್ಟದ ನಾಯಕತ್ವವನ್ನು ನಿಭಾಯಿಸಿರುವ ರಿಷಭ್ ಪಂತ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಪಡೆಯಲು ಹೆಣೆದ ಯೋಜನೆಯೊಂದನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಆವೇಶ್ ಖಾನ್ ಬಿಚ್ಚಿಟ್ಟಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡಲು ಬಂದ ವೇಳೆ ಅವೇಶ್ ಖಾನ್ ಬೌಲಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವೇಶ್ ಖಾನ್ ಬಳಿ ಬಂದ ರಿಷಭ್ ಪಂತ್ ಧೋನಿ ಅವರ ವಿಕೆಟ್ ಪಡೆಯಲು ಸಲಹೆಯೊಂದನ್ನು ನೀಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮಾಡಲು ಬಂದಾಗ ಕೊನೆಯ 5 ಓವರ್ಗಳು ಬಾಕಿ ಉಳಿದಿದ್ದವು ಹೀಗಾಗಿ ಧೋನಿ ಖಡಾಖಂಡಿತವಾಗಿ ತಂಡದ ಮೊತ್ತವನ್ನು ಹೆಚ್ಚಿಸಲು ದೊಡ್ಡ ಹೊಡೆತಗಳಿಗೆ ಕೈ ಹಾಕುತ್ತಾರೆ ಆದ್ದರಿಂದ ಸ್ಲೋ ಬಾಲ್ ಹಾಕಿದರೆ ಧೋನಿ ಔಟ್ ಆಗುತ್ತಾರೆ ಎಂದು ರಿಷಭ್ ಪಂತ್ ಅವೇಶ್ ಖಾನ್ ಅವರಿಗೆ ಸಲಹೆಯೊಂದನ್ನು ನೀಡಿದ್ದರಂತೆ. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಅವೇಶ್ ಖಾನ್ ಪಂತ್ ಹೇಳಿದಂತೆ ಧೋನಿ ಅವರಿಗೆ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಾರೆ, ಫಲಿತಾಂಶವಾಗಿ ಧೋನಿ ಇನ್ಸೈಡ್ ಎಡ್ಜ್ ಆಗಿ ಕ್ಲೀನ್ ಬೌಲ್ಟ್ ಆಗುವುದರ ಮೂಲಕ ಅವೇಶ್ ಖಾನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ 2 ಎಸೆತಗಳಿಗೆ ಯಾವುದೇ ರನ್ ಗಳಿಸದೆ ಪೆವಿಲಿಯನ್ ಸೇರಿಕೊಂಡರು. ಹೀಗೆ ಧೋನಿ ವಿಕೆಟ್ ಉರುಳಿಸಲು ಪಂತ್ ಹೆಣೆದ ಯೋಜನೆಯನ್ನು ಅವೇಶ್ ಖಾನ್ ಬಿಚ್ಚಿಟ್ಟಿದ್ದಾರೆ.