ಸೋಮವಾರ ( ಏಪ್ರಿಲ್ 19 ) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಸೆಣಸಾಟ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 45 ರನ್ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವನ್ನು ದಾಖಲಿಸಿತು. ಈ ಪಂದ್ಯ ಮುಗಿದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ಚೇತನ್ ಸಕಾರಿಯಾ ತನ್ನ ನೆಚ್ಚಿನ ಕ್ರಿಕೆಟಿಗನಾದ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿಯಾಗಿ, ಧೋನಿ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಅವಕಾಶವನ್ನೂ ಪಡೆದರು.
ಪಂದ್ಯ ಮುಗಿದ ಬಳಿಕ ವಾಂಖೆಡೆ ಸ್ಟೇಡಿಯಂನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಚೇತನ್ ಸಕಾರಿಯಾ ಭೇಟಿ ಮಾಡಿದ್ದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಹೀಗೆ ಫೋಟೋ ಹಂಚಿಕೊಂಡಿರುವ ಚೇತನ್ ಸಕಾರಿಯಾ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಾಡಿ ಹೊಗಳಿದ್ದಾರೆ. 'ಚಿಕ್ಕ ವಯಸ್ಸಿನ ಹುಡುಗನಾಗಿದ್ದಾಗಿನಿಂದಲೂ ಸಹ ನಿಮ್ಮನ್ನು ಆರಾಧಿಸುತ್ತಿದ್ದ ನನಗೆ ಇಂದು ನಿಮ್ಮ ಜೊತೆ ಕ್ರಿಕೆಟ್ ಆಡುವ ಅವಕಾಶ ಒದಗಿಬಂತು, ಇದು ನನ್ನ ಜೀವನದಲ್ಲಿಯೇ ಅತ್ಯುತ್ತಮ ಸಂದರ್ಭವಾಗಿದ್ದು ಜೀವನಪೂರ್ತಿ ಇದನ್ನು ಮರೆಯುವುದಿಲ್ಲ. ನಿಮ್ಮಂತೆ ಯಾರೂ ಇಲ್ಲ.. ನಮಗೆಲ್ಲಾ ಸ್ಫೂರ್ತಿಯಾಗಿರುವ ನಿಮಗೆ ಧನ್ಯವಾದಗಳು' ಎಂದು ಚೇತನ್ ಸಕಾರಿಯಾ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಧೋನಿ ಕುರಿತು ಬರೆದುಕೊಂಡಿದ್ದಾರೆ.
ಚೇತನ್ ಸಕಾರಿಯಾ ಪಾಲಿಗೆ ಇನ್ನೂ ವಿಶೇಷವಾದ ಸಂಗತಿಯೇನೆಂದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟನ್ನೂ ಸಹ ಚೇತನ್ ಪಡೆದುಕೊಂಡದ್ದು. ನೆಚ್ಚಿನ ಆಟಗಾರನ ವಿಕೆಟ್ ಪಡೆದುಕೊಳ್ಳುವುದೆಂದರೆ ಪ್ರತಿಯೊಬ್ಬ ಬೌಲರ್ಗೂ ಸಹ ಅದು ಹೆಮ್ಮೆಯ ವಿಷಯವಾಗಿರುತ್ತದೆ. ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೇತನ್ ಸಕಾರಿಯಾ ಒಟ್ಟು 3 ವಿಕೆಟ್ಗಳನ್ನು ಪಡೆದುಕೊಂಡು ಅದ್ಬುತ ಪ್ರದರ್ಶನ ನೀಡಿದರು.