29 ಪಂದ್ಯಗಳು ಯಶಸ್ವಿಯಾಗಿ ಮುಗಿದ ನಂತರ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಕೊರೊನಾವೈರಸ್ ಕಾರಣದಿಂದ ಮುಂದೂಡಲಾಗಿದೆ. ಈ ಟೂರ್ನಿಯಲ್ಲಿ ಇದುವರೆಗೂ ನಡೆದಿರುವ 29 ಪಂದ್ಯಗಳಲ್ಲಿ ಕೆಲ ಅನ್ಕ್ಯಾಪ್ಡ್ ಆಟಗಾರರು ತೋರಿಸಿದ ಅತ್ಯದ್ಭುತ ಪ್ರದರ್ಶನವನ್ನು ನೀವು ನೋಡಿರುತ್ತೀರಿ. ಅನ್ಕ್ಯಾಪ್ಡ್ ಆಟಗಾರರಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್, ರಾಜಸ್ಥಾನ್ ರಾಯಲ್ಸ್ ತಂಡದ ಚೇತನ್ ಸಕಾರಿಯಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮಿಂಚಿ ಕ್ರೀಡಾಭಿಮಾನಿಗಳ ಗಮನವನ್ನು ಸೆಳೆದರು.
ಚೇತನ್ ಸಕಾರಿಯಾ ಬಡ ಕುಟುಂಬದಿಂದ ಬೆಳೆದು ಬಂದ ಪ್ರತಿಭೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುವ ಮೂಲಕ ಐಪಿಎಲ್ಗೆ ಚೇತನ್ ಸಕಾರಿಯಾ ಪದಾರ್ಪಣೆ ಮಾಡಿದರು. ಪ್ರಸ್ತುತ ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನಾಡಿರುವ ಚೇತನ್ ಸಕಾರಿಯಾ 7 ವಿಕೆಟ್ಗಳನ್ನು ಪಡೆದು ಮಿಂಚಿದರು. ಸ್ಟಾರ್ ಕ್ರಿಕೆಟಿಗರಾದ ಕೆ ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಸುರೇಶ್ ರೈನಾ, ಅಂಬಾಟಿ ರಾಯುಡು ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ಗಳನ್ನು ಪಡೆದುಕೊಳ್ಳುವುದರ ಮೂಲಕ ಮೊದಲ 3 ಪಂದ್ಯಗಳಲ್ಲಿ ಚೇತನ್ ಸಕಾರಿಯಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರು.
ಐಪಿಎಲ್ ಮುಂದೂಡಲ್ಪಟ್ಟ ನಂತರ ತನ್ನ ಮೊದಲ ಐಪಿಎಲ್ ಕುರಿತ ಅನುಭವವನ್ನು ಚೇತನ್ ಸಕಾರಿಯಾ ಹಂಚಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಿಂದ ತಾನು ಕಲಿತ ಪಾಠದ ಬಗ್ಗೆ ಮಾತನಾಡಿದ ಚೇತನ್ ಸಕಾರಿಯಾ ತದನಂತರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಪಂದ್ಯದ ಬಳಿಕ ತಾನು ಭಯಭೀತನಾಗಿದ್ದ ವಿಷಯವನ್ನು ಸಹ ಬಿಚ್ಚಿಟ್ಟರು. ಪಂದ್ಯ ಮುಗಿದ ಎರಡು ದಿನಗಳ ಒಳಗೆ ಹೈದರಾಬಾದ್ ತಂಡದ ವೃದ್ಧಿಮಾನ್ ಸಹಾಗೆ ಕೊರೊನಾ ಪಾಸಿಟಿವ್ ಬಂದ ಸುದ್ದಿ ತಿಳಿದು ಭಯಭೀತನಾಗಿದ್ದೆ ಎಂದು ಚೇತನ್ ಸಕಾರಿಯಾ ತಿಳಿಸಿದ್ದಾರೆ. ಟೂರ್ನಿಯ 28ನೇ ಪಂದ್ಯದಲ್ಲಿ ರಾಜಸ್ಥಾನ್ ಮತ್ತು ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು, ಈ ಪಂದ್ಯ ಮುಗಿದ ಬಳಿಕ ಎರಡೂ ತಂಡದ ಆಟಗಾರರು ಪರಸ್ಪರ ಭೇಟಿಯಾಗಿದ್ದ ಕಾರಣ ಚೇತನ್ ಸಕಾರಿಯಾ ಭಯಕ್ಕೊಳಗಾಗಿದ್ದೆ ಎಂದು ತಿಳಿಸಿದ್ದಾರೆ.