14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 9ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಸಾಧಾರಣ 150 ರನ್ ಗಳಿಸಿತು. ಆದರೆ ಸನ್ ರೈಸರ್ಸ್ ಹೈದರಾಬಾದ್ ತಂಡ 19.4 ಓವರ್ಗಳಲ್ಲಿ 137 ರನ್ಗಳಿಗೆ ಆಲ್ಔಟ್ ಆಗುವ ಮೂಲಕ 13 ರನ್ಗಳ ಸೋಲನ್ನನುಭವಿಸಿತು.
ಈ ಮೂಲಕ ಟೂರ್ನಿಯಲ್ಲಿ ಸತತ ಮೂರನೇ ಸೋಲನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಅನುಭವಿಸಿತು. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತನ್ನ ಮೊದಲನೇ ಪಂದ್ಯವನ್ನು ಸೋತಿದ್ದ ಸನ್ ರೈಸರ್ಸ್ ಹೈದರಾಬಾದ್ ಎರಡನೇ ಪಂದ್ಯದಲ್ಲಿ ಬೆಂಗಳೂರು ತಂಡದ ವಿರುದ್ಧವೂ ಸಹ ಸೋಲುಂಡಿತ್ತು. ಇದೀಗ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೋಲುವ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಕಂಡಿದೆ. ಮುಂಬೈ ವಿರುದ್ಧದ ಪಂದ್ಯ ಮುಗಿದ ಮೇಲೆ ಮಾತನಾಡಿರುವ ಡೇವಿಡ್ ವಾರ್ನರ್ ತಂಡದ ಸೋಲಿನ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಈ ಸೋಲನ್ನು ಹೇಗೆ ತೆಗೆದುಕೊಳ್ಳಬೇಕೆಂದು ನನಗೆ ತಿಳಿಯುತ್ತಿಲ್ಲ, ನಿಜವಾಗಿಯೂ ತುಂಬಾ ಬೇಸರವಾಗುತ್ತಿದೆ. ಆರಂಭಿಕ ಆಟಗಾರರಾಗಿ ಬಂದ ನಾವಿಬ್ಬರು ( ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್ಸ್ಟೋವ್ ) ಉತ್ತಮ ಆರಂಭವನ್ನು ಮಾಡಿದೆವು. ಒಳ್ಳೆಯ ಇನ್ನಿಂಗ್ಸ್ ಕಟ್ಟಿಕೊಟ್ಟರೂ ಸಹ ತದನಂತರ ಬಂದ ಬ್ಯಾಟ್ಸ್ಮನ್ಗಳು ರನ್ ಗಳಿಸಲು ವಿಫಲರಾದರು. ಇಬ್ಬರು ಬ್ಯಾಟ್ಸ್ಮನ್ ಹೊರತುಪಡಿಸಿ ಉಳಿದ ಬ್ಯಾಟ್ಸ್ಮನ್ಗಳು ಗಂಭೀರವಾಗಿ ಆಡದಿದ್ದರೆ ಗೆಲುವು ಅಸಾಧ್ಯ ಎಂದು ಡೇವಿಡ್ ವಾರ್ನರ್ ಹೇಳಿದರು. ಇದೇ ವೇಳೆ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡೇವಿಡ್ ವಾರ್ನರ್, ಗುರಿ ಮುಟ್ಟಬಹುದಾದ ಮೊತ್ತವನ್ನು ಕೈಚೆಲ್ಲಿದೆವು ಎಂದು ಬೇಸರ ವ್ಯಕ್ತಪಡಿಸಿದರು.