ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಆರಂಭವೇನೂ ಸಿಗಲಿಲ್ಲ. ಡೇವಿಡ್ ವಾರ್ನರ್ ನಾಯಕತ್ವದಲ್ಲಿ 6 ಪಂದ್ಯಗಳನ್ನಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಗೆದ್ದಿರುವುದು ಕೇವಲ ಒಂದು ಪಂದ್ಯದಲ್ಲಿ ಮಾತ್ರ, ಉಳಿದ 5 ಪಂದ್ಯಗಳಲ್ಲಿಯೂ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಲು ಸಾಲು ಸೋಲುಗಳನ್ನು ಕಂಡ ಪರಿಣಾಮ ಸನ್ ರೈಸರ್ಸ್ ಹೈದರಾಬಾದ್ ಮ್ಯಾನೇಜ್ಮೆಂಟ್ ಡೇವಿಡ್ ವಾರ್ನರ್ರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದಿಂದ ಕೆಳಗಿಳಿಸಿತು.
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಸನ್ ರೈಸರ್ಸ್ ಹೈದರಾಬಾದ್ ಮ್ಯಾನೇಜ್ಮೆಂಟ್ ಈ ದೊಡ್ಡ ನಿರ್ಧಾರವನ್ನು ಕೈಗೊಂಡು ಕೇನ್ ವಿಲಿಯಮ್ಸನ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನೂತನ ನಾಯಕನನ್ನಾಗಿ ನೇಮಿಸಿತು. ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ ಅವರು ನಾಯಕತ್ವದಿಂದ ತನ್ನನ್ನು ವಜಾ ಮಾಡಲಾದ ಸುದ್ದಿ ಡೇವಿಡ್ ವಾರ್ನರ್ ಕಿವಿಗೆ ಬಿದ್ದಾಗ ಯಾವ ರೀತಿ ಪ್ರತಿಕ್ರಿಯೆ ನೀಡಿದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ತನ್ನನ್ನು ನಾಯಕತ್ವದಿಂದ ತೆಗೆದುಹಾಕಿದ್ದಾರೆ ಎಂಬ ಸುದ್ದಿ ಕೇಳಿದ ಕೂಡಲೇ ಡೇವಿಡ್ ವಾರ್ನರ್ ಅಕ್ಷರಶಃ ಕಂಗಾಲಾದರಂತೆ. ಈ ಕಹಿ ಸುದ್ದಿಯನ್ನು ಅರಗಿಸಿಕೊಳ್ಳಲಾಗದ ಡೇವಿಡ್ ವಾರ್ನರ್ ತೀವ್ರ ಬೇಸರಕ್ಕೊಳಗಾಗುವುದರ ಜೊತೆಗೆ ಮ್ಯಾನೇಜ್ಮೆಂಟ್ ತೆಗೆದುಕೊಂಡ ದಿಢೀರ್ ನಿರ್ಧಾರ ನೋಡಿ ದೊಡ್ಡ ಮಟ್ಟದಲ್ಲಿ ಆಶ್ಚರ್ಯವನ್ನೂ ಸಹ ಪಟ್ಟರು ಎಂದು ಟಾಮ್ ಮೂಡಿ ತಿಳಿಸಿದರು. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ 193 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಅವರನ್ನು ಭಾನುವಾರ (ಮೇ 2) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ತೆಗೆದುಕೊಳ್ಳದಿರುವುದು ಅವರಲ್ಲಿ ಮತ್ತಷ್ಟು ಬೇಸರವನ್ನುಂಟುಮಾಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ.