ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮುಂದೆ ನಿಂತು ಧೋನಿ ತಂಡವನ್ನು ಮುನ್ನಡೆಸಬೇಕು ಎಂಬ ಮಾತನ್ನು ಗೌತಮ್ ಗಂಭೀರ್ ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಧೋನಿ ಶೂನ್ಯಕ್ಕೆ ಔಟಾಗಿದ್ದರು.
"ಧೋನಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬೇಕು. ಅದು ಯಾಕೆ ಪ್ರಮುಖವಾಗುತ್ತದೆ ಎಂದರೆ ನಾಯಕ ಮುಂಬಾಗದಲ್ಲಿ ನಿಂತು ತಂಡವನ್ನು ಮುನ್ನಡೆಸಬೇಕು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ನೀವು ಮುಂಬಾಗದಿಂದ ತಂಡವನ್ನು ಮುನ್ನಡೆಸಲು ಸಾಧ್ಯವಿಲ್ಲ. ನನ್ನ ಪ್ರಕಾರ ಅವರು ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು. ಅದಕ್ಕಿಂತ ಕೆಳಗೆ ಸೂಕ್ತವಲ್ಲ" ಎಂದಿದ್ದಾರೆ ಗೌತಮ್ ಗಂಭೀರ್.
ಐಪಿಎಲ್: ಕೆಟ್ಟ ದಾಖಲೆ ಮುಂದುವರೆಸಿದ ಪೃಥ್ವಿ ಶಾ
"ಹೌದು, ಚೆನ್ನೈ ತಂಡದ ಬೌಲಿಂಗ್ನಲ್ಲಿ ಸಮಸ್ಯೆಗಳು ಇದೆ. ಈಗ ಅವರು ನಾಲ್ಕು-ಐದು ವರ್ಷಗಳ ಹಿಂದಿನ ಎಂಎಸ್ ಧೋನಿ ಅಲ್ಲ. ಆಗ ಅವರು ಬೌಲರ್ಗಳ ಬಳಿ ಬಂದು "ಗೋ" ಎಂಬ ಒಂದು ಶಬ್ದದಿಂದಷ್ಟೇ ಸೂಚಿಸುತ್ತಿದ್ದರು" ಎಂದು ಗಂಭೀರ್ ಹೇಳಿದ್ದಾರೆ.
ಕಳೆದ ಬಾರಿಯ ಐಪಿಎಲ್ನಲ್ಲಿಯೂ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಟೀಕೆಗೆ ಗುರಿಯಾಗಿದ್ದರು. ಉತ್ತಮ ಸ್ಟ್ರೈಕ್ರೇಟ್ ಹೊಂದಿಲ್ಲದ ಕಾರಣ ಹಲವು ಸಂದರ್ಭಗಳಲ್ಲಿ ಧೋನಿ ತಂಡವನ್ನು ಗೆಲ್ಲಿಸಲು ವಿಫಲರಾಗಿದ್ದರು. ಇದರ ಪರಿಣಾಮವಾಗಿ ಚೆನ್ನೈ ಐಪಿಎಲ್ನಲ್ಲಿ ಮೊದಲ ಬಾರಿಗೆ ಪ್ಲೇಆಫ್ ಹಂತಕ್ಕೇರುವ ಮುನ್ನವೇ ಟೂರ್ನಿಯಿಂದ ಹೊರಬಿದ್ದಿತ್ತು.