ಚೆನ್ನೈ, ಫೆಬ್ರವರಿ 17: ಐಪಿಎಲ್ ಹರಾಜು 2021ಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಅಮೂಲ್ಯ ಸಲಹೆ ನೀಡಿದ್ದಾರೆ.
ಆಸ್ಟ್ರೇಲಿಯಾದ ನಿವೃತ್ತ ಆಲ್ರೌಂಡರ್, ಚೆನ್ನೈ ತಂಡದ ಸ್ಟಾರ್ ಆಟಗಾರರಾಗಿದ್ದ ಶೇನ್ ವಾಟ್ಸನ್ಗೆ ಬದಲಿ ಆಟಗಾರರನ್ನು ಹುಡುಕುವ ಅಗತ್ಯವಿದೆ, ಈ ಬಗ್ಗೆ ಧೋನಿ ಹಾಗೂ ಮ್ಯಾನೇಜ್ಮೆಂಟ್ ಉದಾಸೀನ ಮಾಡುವಂತಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಓಪನರ್ ಗಂಭೀರ್ ಹೇಳಿದ್ದಾರೆ. 2020 ರ ಐಪಿಎಲ್ ಆವೃತ್ತಿಯ ನಂತರ ಆಸ್ಟ್ರೇಲಿಯಾದ ಆಲ್ರೌಂಡರ್ ವಾಟ್ಸನ್ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು. ಚೆನ್ನೈ ತಂಡ ಪ್ಲೇ ಆಫ್ ತಲುಪಲು ಸಾಧ್ಯವಾಗಿರಲಿಲ್ಲ.
ರೈನಾ ಸೇರ್ಪಡೆಯಿಂದ ಹೆಚ್ಚಿನ ಬಲ
ಭಾರತದ ಆಲ್ರೌಂಡರ್ ಸುರೇಶ್ ರೈನಾ ಐಪಿಎಲ್ 2021ರಲ್ಲಿ ಧೋನಿ ನೇತೃತ್ವದ ಸಿಎಸ್ಕೆ ಪರ ಆಡುತ್ತಿರುವುದು ತಂಡಕ್ಕೆ ಹೆಚ್ಚಿನ ಬಲ ತರಲಿದೆ. ಆದರೆ, ವಾಟ್ಸನ್ ಬದಲಿ ಆಟಗಾರರನ್ನು ಗುರುತಿಸುವುದು ಧೋನಿಗೆ ಸಾಧ್ಯವಿದ್ದು, ಈ ಸೀಸನ್ ನಲ್ಲೇ ಬದಲಿ ಆಟಗಾರರನ್ನು ಕಂಡುಕೊಳ್ಳಬೇಕಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಶೋದಲ್ಲಿ ಮಾತನಾಡುತ್ತಾ ಗಂಭೀರ್ ಹೇಳಿದರು
ಚೆನ್ನೈನಲ್ಲಿ ಗುರುವಾರ (ಫೆಬ್ರವರಿ 18) ಐಪಿಎಲ್ 2021 ಹರಾಜು ನಿಗದಿಪಡಿಸಲಾಗಿದೆ ಮತ್ತು ಐಪಿಎಲ್ ಮತ್ತೊಮ್ಮೆ ಭಾರತದಲ್ಲೇ ಆಡಲಾಗುತ್ತಿದ್ದು, ಇಲ್ಲಿನ ಪಿಚ್ ಗಳಿಗೆ ತಕ್ಕಂತೆ ತಂಡವನ್ನು ಆಯ್ಕೆ ಮಾಡುವ ಜಾಣ್ಮೆ ಧೋನಿ ಅವರಿಗಿದೆ. ಹರ್ಭಜನ್ ಬಿಡುಗಡೆಗೊಂಡಿದ್ದಾರೆ. ಬ್ರಾವೋ ಇನ್ನೂ ಫಾರ್ಮ್ ಕಂಡುಕೊಂಡಿಲ್ಲ ಈ ಬಗ್ಗೆ ಧೋನಿ ಗಮನ ಹರಿಸಬೇಕಿದೆ.
ವಾಟ್ಸನ್, ಹರ್ಭಜನ್ ಬದಲಿಗೆ ಬೇರೊಬ್ಬರನ್ನು ತಕ್ಷಣಕ್ಕೆ ಹೆಸರಿಸುವುದು ಕಷ್ಟ. ಲಭ್ಯ ಆಟಗಾರರ ಪೈಕಿ ತಂಡದಲ್ಲಿ ಉಳಿಸಿ ಬೆಳೆಸುವ ಕಲೆ ಧೋನಿಗೆ ತಿಳಿದಿದೆ. ಈ ಇಬ್ಬರು ಆಟಗಾರರಿಗೆ ಸೂಕ್ತ ಬದಲಾವಣೆ ಸಿಕ್ಕರೆ ಚೆನ್ನೈ ತಂಡವನ್ನು ಕಟ್ಟಿಹಾಕುವುದು ಎದುರಾಳಿ ತಂಡಕ್ಕೆ ಕಷ್ಟವಾಗಲಿದೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.(ಪಿಟಿಐ)