— Glenn Maxwell (Gmaxi_32) October 11, 2021 |
ಟ್ರೋಲರ್ಗಳಿಗೆ ಮ್ಯಾಕ್ಸ್ವೆಲ್ ಟ್ವೀಟ್ ತಿರುಗೇಟು
ಸೋಮವಾರ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಸೋಲುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲರ್ಗಳ ಹಾವಳಿ ಶುರುವಾಗಿತ್ತು. ಆಟಗಾರರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಟ್ರೋಲ್ ಮಾಡುತ್ತಿರುವ ಕಿಡಿಗೇಡಿ ಟ್ರೋಲರ್ಗಳಿಗೆ ಮ್ಯಾಕ್ಸ್ವೆಲ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ನಿಂದನಾತ್ಮಕವಾಗಿ ಟ್ರೋಲರ್ಗಳ ವಿರುದ್ಧ ಮ್ಯಾಕ್ಸಿ ಕಿಡಿಕಾರಿ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. "ಈ ಐಪಿಎಲ್ ಸೀಸನ್ ಆರ್ಸಿಬಿ ಪಾಲಿಗೆ ಶ್ರೇಷ್ಠ ಸೀಸನ್ ಆಗಿತ್ತು. ಆದರೆ ದುರದೃಷ್ಟವಶಾತ್ ನಾವು ಸ್ವಲ್ಪದರಲ್ಲಿ ಎಡವಿದೆವು. ಇದನ್ನು ಕೆಲ ಕೊಳಕು ಮನಸ್ಸಿನವರು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತೀದಿನ ನಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ನಾವೆಲ್ಲರೂ ಮನುಷ್ಯರು. ನಿಂದನೆ ಪಸರಿಸುವುದಕ್ಕೆ ಬದಲಾಗಿ ಒಳ್ಳೆಯ ವ್ಯಕ್ತಿಗಳಾಗಲು ಪ್ರಯತ್ನಿಸಿ," ಎಂದು ಒಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದ ಮ್ಯಾಕ್ಸ್ವೆಲ್, ಮುಂದಿನ ಟ್ವೀಟ್ಗಳಲ್ಲಿ, "ನಿಜವಾದ ಆರ್ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳು. ತಮ್ಮ ಬೆಸ್ಟ್ ಪ್ರದರ್ಶನ ನೀಡಲು ಯತ್ನಿಸಿದ ಆಟಗಾರರಿಗೂ ಶ್ಲಾಘನೆ. ಕೆಲ ಭಯಾನಕ ವ್ಯಕ್ತಿಗಳು ಸಾಮಾಜಿಕ ಜಾಲತಾಣವನ್ನು ಭಯಾನಕ ತಾಣವನ್ನಾಗಿಸುತ್ತಿದ್ದಾರೆ. ಅದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಅವರಂತೆ ನೀವಾಗಬೇಡಿ," ಎಂದು ಬರೆದುಕೊಂಡಿದ್ದಾರಲ್ಲದೆ, ತನ್ನ ಟೀಮ್ಮೇಟ್ಸ್/ಫ್ರೆಂಡ್ಸ್ಗೆ ನಿಂದನಾತ್ಮಕವಾಗಿ ಪೋಸ್ಟ್, ಕಾಮೆಂಟ್ಸ್ ಹಾಕುವವರನ್ನು ಬ್ಲಾಕ್ ಮಾಡಲಾಗುತ್ತದೆ," ಎಂದೂ ಮ್ಯಾಕ್ಸಿ ಬರೆದುಕೊಂಡಿದ್ದಾರೆ.
|
ಮ್ಯಾಕ್ಸ್ವೆಲ್ ಸಿಡುಕಿಗೆ ಕಾರಣವಿದು!
ಗ್ಲೆನ್ ಮ್ಯಾಕ್ಸ್ವೆಲ್ ಕಿಡಿಕಾರಿ ಪೋಸ್ಟ್ ಹಾಕುವುದಕ್ಕೆ ಕಾರಣವಿದೆ. ಅದೇನೆಂದರೆ ಆರ್ಸಿಬಿ ಪರ ಆಡುವ ಆಸ್ಟ್ರೇಲಿಯನ್ ಆಟಗಾರ ಡ್ಯಾನಿಯಲ್ ಕ್ರಿಸ್ಚಿಯನ್ ಅವರ ಪತ್ನಿಯನ್ನು ಗುರಿಯಾಗಿಸಿ ಟ್ರೋಲರ್ಗಳು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಆರ್ಸಿಬಿ ಸೋಲಿಗೆ ಡ್ಯಾನ್ ಕ್ರಿಸ್ಚಿಯನ್ ಕಾರಣ ಎಂದು ಕ್ರಿಸ್ಚಿಯನ್ ಪತ್ನಿಯನ್ನು ಟಾರ್ಗೆಟ್ ಮಾಡಲಾಗಿತ್ತು. ಕೆಕೆಆರ್ ಆಲ್ ರೌಂಡರ್ ಸುನಿಲ್ ನರೈನ್ ಅವರು ಡ್ಯಾನ್ ಓವರ್ನಲ್ಲಿ ಮೂರು ಸಿಕ್ಸರ್ ಬಾರಿಸಿದ್ದರು. ಅಂತಿಮ ಓವರ್ ಕೂಡ ಕ್ರಿಸ್ಚಿಯನ್ ಎಸೆದಿದ್ದರು. ಹೀಗಾಗಿ ಪಂದ್ಯದ ಸೋಲಿಗೆ ಕ್ರಿಸ್ಚಿಯನ್ ಕಾರಣ ಎಂದು ಕೆಲ ಕಿಡಿಗೇಡಿಗಳು ಕ್ರಿಸ್ಚಿಯನ್ ಪತ್ನಿಯ ಇನ್ಸ್ಟಾಗ್ರಾಮ್ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಆಡಿದ್ದು ಕ್ರಿಸ್ಚಿಯನ್ ಆದರೂ ಕ್ರಿಸ್ಚಿಯನ್ ಪತ್ನಿಗೆ ನಿಂದನೆ ಮಾಡಿರುವುದು ಕಾಮೆಂಟ್ ಮಾಡಿರುವವನ ಕೆಟ್ಟ ಮನಸ್ಥಿತಿ ಹೇಳುತ್ತದೆ. ಅಷ್ಟಕ್ಕೂ ಆಟವೆಂದರೆ ಅಲ್ಲಿ ಸೋಲು-ಗೆಲುವು ಇದ್ದಿದ್ದೇ. ಆಟದಲ್ಲಿನ ಸೋಲು-ಗೆಲುವು ಗೌರವಿಸುವವನೇ ನಿಜವಾದ ಅಭಿಮಾನಿ. ಕ್ರಿಸ್ಚಿಯನ್ ಪತ್ನಿಗೆ ಬಂದಿರುವ ಕೆಟ್ಟ ಕಾಮೆಂಟ್ ಕಾರಣಕ್ಕಾಗಿಯೇ ಮ್ಯಾಕ್ಸ್ವೆಲ್ ಬೇಸರ, ಸಿಟ್ಟು ತೋರಿಕೊಂಡಿದ್ದಾರೆ ಎನ್ನಲಾಗಿದೆ.
ಆರ್ಸಿಬಿ vs ಕೆಕೆಆರ್ ಸ್ಕೋರ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ 39, ದೇವದತ್ ಪಡಿಕ್ಕಲ್ 21, ಶ್ರೀಕರ್ ಭಾರತ್ 9, ಗ್ಲೆನ್ ಮ್ಯಾಕ್ಸ್ವೆಲ್ 15, ಎಬಿ ಡಿವಿಲಿಯರ್ಸ್ 11, ಡೇನಿಯಲ್ ಕ್ರಿಶ್ಚಿಯನ್ 9, ಶಹಬಾಜ್ ಅಹ್ಮದ್ 13, ಹರ್ಷಲ್ ಪಟೇಲ್ 8 ರನ್ನೊಂದಿಗೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದು 138 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 29, ವೆಂಕಟೇಶ್ ಅಯ್ಯರ್ 26, ನಿತೀಶ್ ರಾಣಾ 23, ರಾಹುಲ್ ತ್ರಿಪಾಠಿ 6, ಇಯೋನ್ ಮಾರ್ಗನ್ 5, ದಿನೇಶ್ ಕಾರ್ತಿಕ್ 10, ಶಕೀಬ್ ಅಲ್ ಹಸನ್ 9, ಸುನಿಲ್ ನರೈನ್ 26 ರನ್ನೊಂದಿಗೆ 19.4 ಓವರ್ಗೆ 6 ವಿಕೆಟ್ ಕಳೆದು 139 ರನ್ ಗಳಿಸಿ ಗೆಲುವು ಸಂಭ್ರಮಾಚರಿಸಿತು. ಇದು ವಿರಾಟ್ ಕೊಹ್ಲಿ ನಾಯಕರಾಗಿ ಆಡಿದ ಕೊನೇ ಪಂದ್ಯವಾಗಿದ್ದರಿಂದ ಆರ್ಸಿಬಿ ಅಭಿಮಾನಿಗಳು ನಿರಾಸೆ ಅನುಭವಿಸುವಂತಾಗಿದೆ. ವೆಸ್ಟ್ ಇಂಡೀಸ್ನ ಅನುಭವಿ ಆಲ್ ರೌಂಡರ್ ನರೈನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್ನಲ್ಲಿ 4 ಓವರ್ ಎಸೆದು 21 ರನ್ ನೀಡಿ 4 ವಿಕೆಟ್ ಪಡೆದರು. ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಎಬಿ ಡಿ ವಿಲಿಯರ್ಸ್ ವಿಕೆಟ್ಗಳು ನರೈನ್ಗೆ ಲಭಿಸಿತು. ಇದೇ ಆರ್ಸಿಬಿ ಹಿನ್ನಡೆಗೆ ಕಾರಣವಾಗಿದ್ದು.