ಟೂರ್ನಿಯಲ್ಲಿ ಆತ ಒಂದೇ ಒಂದು ಬಾಲ್ ಕೂಡ ಬೌಲಿಂಗ್ ಮಾಡಲಿಲ್ಲ
ಹಾರ್ದಿಕ್ ಪಾಂಡ್ಯ ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿದ್ದು ಯಾವುದೇ ಪಂದ್ಯದಲ್ಲಿಯೂ ಸಹ ಬೌಲಿಂಗ್ ಮಾಡುವ ಪ್ರಯತ್ನ ಮಾಡಿಲ್ಲ. ಈ ವಿಷಯದ ಕುರಿತಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಹಿಂದಿನಿಂದಲೂ ಸಹ ಗೊಂದಲ ಉಂಟಾಗಿತ್ತು. ಆದರೆ ರೋಹಿತ್ ಶರ್ಮ ಮಾತ್ರ ಈ ಕುರಿತಾಗಿ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಇದೀಗ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಇರುವುದರ ಕುರಿತು ಮಾತನಾಡಿರುವ ರೋಹಿತ್ ಶರ್ಮಾ ಅದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. 'ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಒಂದೇ ಒಂದು ಬಾಲ್ ಕೂಡ ಬೌಲಿಂಗ್ ಮಾಡಿಲ್ಲ. ಸದ್ಯ ಹಾರ್ದಿಕ್ ಪಾಂಡ್ಯರ ವೈದ್ಯರು ಆತ ಬೌಲಿಂಗ್ ಮಾಡುವುದರ ಕುರಿತು ಚಿಕಿತ್ಸೆ ನೀಡುತ್ತಿದ್ದಾರೆ. ಆತ ಮುಂಬರುವ ಪಂದ್ಯವೊಂದರಲ್ಲಿ ಬೌಲಿಂಗ್ ಮಾಡಲು ಮುಂದಾದರೆ ಬೌಲಿಂಗ್ ಮಾಡುವಷ್ಟು ಚೇತರಿಸಿಕೊಂಡಿದ್ದಾರೋ ಅಥವಾ ಇಲ್ಲವೋ ಎಂಬ ವಿಷಯ ತಿಳಿಯಲಿದೆ ' ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಆತ ಬೌಲಿಂಗ್ ಮಾಡಲು ಸಮರ್ಥನಾಗಿದ್ದಾನ ಎಂಬುದನ್ನು ಆತನ ವೈದ್ಯರೇ ತಿಳಿಸಬೇಕು
ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವಷ್ಟು ಚೇತರಿಸಿಕೊಂಡಿದ್ದಾರಾ ಅಥವಾ ಇಲ್ಲವಾ ಎಂಬುದರ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಲು ನಿರಾಕರಿಸಿರುವ ರೋಹಿತ್ ಶರ್ಮಾ ಈ ಕುರಿತಾಗಿ ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡವೇ ಮಾಹಿತಿಗಳನ್ನು ನೀಡಬೇಕಾಗಿದೆ ಎಂದಿದ್ದಾರೆ. ಇನ್ನು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಹಾರ್ದಿಕ್ ಪಾಂಡ್ಯ ಸುಧಾರಿಸಿಕೊಂಡು ಬೌಲಿಂಗ್ ಮಾಡುವಷ್ಟು ಸಿದ್ಧರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಬ್ಯಾಟಿಂಗ್ ಕುರಿತು ಸ್ವತಃ ಹಾರ್ದಿಕ್ ಪಾಂಡ್ಯ ಬೇಸರಕ್ಕೊಳಗಾಗಿದ್ದಾರೆ
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿರುವ ಹಾರ್ದಿಕ್ ಪಾಂಡ್ಯ 127 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಕುರಿತಾಗಿ ಸ್ವತಃ ಹಾರ್ದಿಕ್ ಪಾಂಡ್ಯ ಅವರಿಗೇ ಬೇಸರವಿದೆ ಎಂಬ ಸಂಗತಿಯನ್ನು ರೋಹಿತ್ ಶರ್ಮಾ ಬಿಚ್ಚಿಟ್ಟಿದ್ದಾರೆ. ಆತ ಓರ್ವ ಪ್ರತಿಭಾವಂತ ಆಟಗಾರನಾಗಿದ್ದು ಕಷ್ಟದ ಸಮಯದಲ್ಲೂ ಉತ್ತಮ ಇನಿಂಗ್ಸ್ ಆಡಿದ್ದಾರೆ ಎಂದು ರೋಹಿತ್ ಶರ್ಮಾ ಹಾರ್ದಿಕ್ ಪಾಂಡ್ಯ ಪರ ಮಾತನಾಡಿದ್ದಾರೆ.