ಬಯೋಬಬಲ್ ತೊಳಲಾಟ
ಕೊರೊನಾ ಸೋಂಕು ಜಗತ್ತನ್ನು ಆವರಿಸಿದಾಗಲೇ ಜನರಿಗೆ ಕ್ವಾರಂಟೈನ್, ಬಯೋಬಬಲ್ ಪರಿಕಲ್ಪನೆಗಳ ಅರಿವಾಗಿದ್ದು. ಪಿಡುಗಿನ ಈ ದಿನಗಳಲ್ಲಿ ಕ್ರೀಡೆ ಅಥವಾ ಕ್ರಿಕೆಟ್ ಟೂರ್ನಿಗಳು ನಡೆಸಬೇಕಾದರೆ ಕ್ರೀಡಾಪಟುಗಳನ್ನು ಜೈವಿಕ ಪರದೆಯ ಒಳಗೆ ಇರಿಸಲಾಗುತ್ತದೆ. ಈ ಪರದೆಯೊಳಗೆ ಅಂದರೆ ಪ್ರದೇಶದೊಳಗೆ ಸೋಂಕಿತರಿಗೆ ಪರವೇಶವಿಲ್ಲ. ಪರದೆಯ ಒಳಗಿರುವವರಿಗೂ ಹೊರಬರಲು ನಿರ್ಬಂಧವಿರುತ್ತದೆ. ಜೈವಿಕ ಪರದೆ ಪ್ರವೇಶಿಸುವ ಕ್ರೀಡಾಪಟು ಪರದೆ ಒಳಗಿರುವವರನ್ನು ಹೊರತುಪಡಿಸಿ ಹೊರ ಜಗತ್ತಿನ ಸಂಪರ್ಕವಿಲ್ಲದೆ ದಿನಗಳನ್ನು ಕಳೆಯಬೇಕಾಗುತ್ತದೆ. ಈ ಅನಿವಾರ್ಯತೆ ಐಪಿಎಲ್ನಲ್ಲಿ ಪಾಲ್ಗೊಳ್ಳುತ್ತಿರುವ ಕ್ರಿಕೆಟಿಗರ ಮಾನಸಿಕ ತೊಳಲಾಟಕ್ಕೆ ಕಾರಣವಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳ ವೇಳೆ ಬಯೋಬಬಲ್ ಒಳಗಿದ್ದು ಬೇಸತ್ತು ಹೋಗಿರುವ ಕ್ರಿಕೆಟಿಗರು ಮತ್ತೆ ಐಪಿಎಲ್ನಲ್ಲಿ ಎರಡು ತಿಂಗಳ ಕಾಲ ಬಯೋಬಬಲ್ ಒಳಗಿರಲು ಒದ್ದಾಡುತ್ತಿದ್ದಾರೆ. ಇದೇ ಕಾರಣಕ್ಕೆ ಒಂದಿಷ್ಟು ಪ್ರಮುಖ ಆಟಗಾರರು ಐಪಿಎಲ್ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.
ಕೋವಿಡ್-19 ಭೀತಿ
ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಹಜವಾಗೇ ಇಲ್ಲಿರುವ ವಿದೇಶಿ ಕ್ರಿಕೆಟಿಗರಿಗೆ ಆತಂಕ ಶುರುವಾಗಿದೆ. ವಿದೇಶಿಗರಿಗಷ್ಟೇ ಅಲ್ಲ; ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಆಟಗಾರರೂ ತಮ್ಮ ಕುಟುಂಬಸ್ಥರ ರಕ್ಷಣೆ ವಿಚಾರದಲ್ಲಿ ಭೀತಿಗೊಳಲಾಗುತ್ತಿದ್ದಾರೆ. ಐಪಿಎಲ್ನಿಂದ ಆಟಗಾರರು ದೂರ ಉಳಿಯುವ ನಿರ್ಧಾರ ತಾಳುತ್ತಿರುವುದಕ್ಕೆ ಇದೂ ಒಂದು ಕಾರಣ. ಸೋಂಕಿತರ ಸಂಖ್ಯೆ ಹೆಚ್ಚಳ, ಕುಟುಂಬದ ಸುರಕ್ಷೆಯ ಭೀತಿ ಈ ಎಲ್ಲಾ ಕಾರಣಗಳಿಂದಾಗಿ ಕ್ರಿಕೆಟಿಗರು ಆಟದ ಕಡೆಗೆ ಗಮನಹರಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ಯಾರೆಲ್ಲಾ ಐಪಿಎಲ್ ತೊರೆದಿದ್ದಾರೆ?
ಕೊರೊನಾ ಭೀತಿ, ಬಯೋಬಬಲ್ ಆಯಾಸ ಮತ್ತು ಗಾಯದ ಕಾರಣಗಳಿಗಾಗಿ ಈಗಾಗಲೇ ಒಂದಿಷ್ಟು ಕ್ರಿಕೆಟಿಗರು ಐಪಿಎಲ್ನಿಂದ ಹೊರ ಹೋಗುವ ನಿರ್ಧಾರ ಪ್ರಕಟಿಸಿದ್ದಾರೆ/ಹೊರ ನಡೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ನ ಆ್ಯಂಡ್ರ್ಯೂ ಟೈ, ಡೆಲ್ಲಿ ಕ್ಯಾಪಿಟಲ್ಸ್ನ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಆ್ಯಡಂ ಜಂಪಾ, ವೇಗದ ಬೌಲರ್-ಆಲ್ ರೌಂಡರ್ ಕೇನ್ ರಿಚರ್ಡ್ಸನ್ ಈ ಬಾರಿಯ ಐಪಿಎಲ್ನಿಂದ ಹೊರ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಬಯೋಬಬಲ್ ಆಯಾಸದ ಕಾರಣ ನೀಡಿ ಈ ಮೊದಲೇ ರಾಜಸ್ಥಾನ್ ರಾಯಲ್ಸ್ನ ಲಿಯಾಮ್ ಲಿವಿಂಗ್ಸ್ಟೋನ್ ಐಪಿಎಲ್ನಿಂದ ಹೊರ ನಡೆದಿದ್ದರು. ಇನ್ನು ಗಾಯದ ಕಾರಣದಿಂದಾಗಿ ಡೆಲ್ಲಿಯ ಶ್ರೇಯಸ್ ಐಯ್ಯರ್, ರಾಜಸ್ಥಾನ್ನ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಕೂಡ ಐಪಿಎಲ್ ತ್ಯಜಿಸಿದ್ದಾರೆ.