ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೀಡಾಗಿರುವ ವಿಷಯವೆಂದರೆ ಐಪಿಎಲ್ ಮುಂದೂಡಿಕೆ. ಕೊರೊನಾವೈರಸ್ ಐಪಿಎಲ್ ಬಯೋಬಬಲ್ನ ಒಳಪ್ರವೇಶಿಸಿದ ಕಾರಣ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಎಷ್ಟೇ ಮುಂಜಾಗ್ರತಾ ಕ್ರಮವನ್ನು ವಹಿಸಿ ಬಯೋಬಬಲ್ ನಿರ್ಮಿಸಿದ್ದರೂ ಸಹ ಐಪಿಎಲ್ ಆಟಗಾರರಿಗೆ ಕೊರೊನಾವೈರಸ್ ಸೋಂಕು ಹೇಗೆ ತಗುಲಿತು ಎಂಬ ಪ್ರಶ್ನೆಗಳು ತಲೆ ಎತ್ತಿವೆ. ಈ ಕುರಿತು ಈಗಾಗಲೇ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಮುಂದೂಡಿಕೆಯ ಕುರಿತು ಮಾತನಾಡಿದ ಸೌರವ್ ಗಂಗೂಲಿ ಬಹುಶಃ ಆಟಗಾರರ ಪ್ರಯಾಣದಿಂದಲೇ ಐಪಿಎಲ್ ಬಯೋಬಬಲ್ನ ಒಳಗಡೆ ಕೊರೊನಾ ಸೋಂಕು ಪ್ರವೇಶಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಟೂರ್ನಿಯ ಪಂದ್ಯಗಳನ್ನು 6 ವಿವಿಧ ನಗರಗಳಲ್ಲಿ ಆಯೋಜನೆ ಮಾಡಲಾಗಿದ್ದ ಕಾರಣ ಆಟಗಾರರು ವಿಮಾನ ಪ್ರಯಾಣ ಮಾಡಲೇಬೇಕಾದ ಅಗತ್ಯತೆಯಿತ್ತು. ಕಳೆದ ಬಾರಿ ಯುಎಇಯ 3 ಸ್ಥಳಗಳಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜನೆ ಮಾಡಿದ್ದ ಕಾರಣ ವಿಮಾನ ಪ್ರಯಾಣದ ಅಗತ್ಯತೆ ಅಲ್ಲಿರಲಿಲ್ಲ, ಹೀಗಾಗಿ ಅಲ್ಲಿನ ಬಯೋಬಬಲ್ ಹೆಚ್ಚು ಸುರಕ್ಷಿತವಾಗಿತ್ತು. ಪ್ರಸ್ತುತ ಟೂರ್ನಿಯಲ್ಲಿ ಪ್ರಯಾಣ ಮಾಡಿದ ಕಾರಣದಿಂದಲೇ ಬಯೋಬಬಲ್ ಒಳಗಡೆ ಕೊರೊನಾವೈರಸ್ ನುಸುಳಿರಬಹುದು ಎಂಬುದು ಗಂಗೂಲಿ ಅಭಿಪ್ರಾಯ.
ಇನ್ನು ಅರ್ಧಕ್ಕೆ ನಿಂತಿರುವ ಐಪಿಎಲ್ ಟೂರ್ನಿ ಪುನಾರಂಭವಾಗುವುದರ ಕುರಿತು ಈಗಾಗಲೇ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು ಟಿ ಟ್ವೆಂಟಿ ವಿಶ್ವಕಪ್ಗೂ ಮುನ್ನವೇ ಸೆಪ್ಟೆಂಬರ್ ತಿಂಗಳಿನಲ್ಲಿ ಐಪಿಎಲ್ ಟೂರ್ನಿಯನ್ನು ಮುಂದುವರಿಸಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಮಾತನಾಡಿದ ಗಂಗೂಲಿ ಕೂಡ ಸೆಪ್ಟೆಂಬರ್ನಲ್ಲಿ ಐಪಿಎಲ್ ನಡೆಯುತ್ತದೆ ಎಂಬ ಸೂಚನೆಯನ್ನು ನೀಡಿದ್ದಾರೆ. 'ಐಪಿಎಲ್ ಮುಂದೂಡಲ್ಪಟ್ಟು ಕೇವಲ ಒಂದು ದಿನ ಮಾತ್ರ ಕಳೆದಿದೆ, ವಿವಿಧ ಕ್ರಿಕೆಟ್ ಬೋರ್ಡ್ಗಳ ಜೊತೆ ಮಾತುಕತೆ ನಡೆಸಿ ಟಿ ಟ್ವೆಂಟಿ ವಿಶ್ವಕಪ್ಗೂ ಮುನ್ನ ಐಪಿಎಲ್ ಮುಂದುವರಿಸಲು ಅವಕಾಶವಿದೆಯಾ ಎಂಬುದನ್ನು ಕಂಡುಕೊಳ್ಳುತ್ತೇವೆ' ಎಂದು ಸೌರವ್ ಗಂಗೂಲಿ ತಿಳಿಸಿದರು.