ಕೆಕೆಆರ್ ತಂಡ ಪ್ರತಿನಿಧಿಸುವುದು ನನ್ನ ಕನಸಾಗಿತ್ತು ಎಂದ ವೆಂಕಟೇಶ್ ಐಯ್ಯರ್
ತಮ್ಮ ಕ್ರಿಕೆಟ್ ಜೀವನದ ಕುರಿತು ಮಾತನಾಡಿರುವ ವೆಂಕಟೇಶ್ ಐಯ್ಯರ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಆಯ್ಕೆಯಾಗುವ ಮುಂಚಿನಿಂದಲೂ ತಾನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಪರ ಆಡಬೇಕೆಂಬ ಕನಸನ್ನು ಹೊಂದಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಹೌದು, 'ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ಮೊದಲ ನಾಯಕನಾಗಿದ್ದು ಸೌರವ್ ಗಂಗೂಲಿಯವರು. ಹೀಗಾಗಿ ನಾನು ಅವರ ಅಪ್ಪಟ ಅಭಿಮಾನಿಯಾದ ಕಾರಣ ಐಪಿಎಲ್ ಟೂರ್ನಿಯಲ್ಲಿ ಮೊದಲು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿಯೇ ಆಡಬೇಕು ಎಂಬ ಕನಸನ್ನು ಹಿಂದಿನಿಂದಲೂ ಹೊತ್ತುಕೊಂಡಿದ್ದೆ' ಎಂದು ವೆಂಕಟೇಶ್ ಐಯ್ಯರ್ ಹೇಳಿಕೊಂಡಿದ್ದಾರೆ.
ದಾದಾಗೋಸ್ಕರ ನನ್ನ ಬ್ಯಾಟಿಂಗ್ ವಿಧಾನವನ್ನೇ ಬದಲಿಸಿಕೊಂಡೆ
ಇನ್ನು ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ವೆಂಕಟೇಶ್ ಐಯ್ಯರ್ ತನ್ನ ನೆಚ್ಚಿನ ಕ್ರಿಕೆಟಿಗ ಸೌರವ್ ಗಂಗೂಲಿ ಎಡಗೈ ಬ್ಯಾಟ್ಸ್ಮನ್ ಎಂಬ ಒಂದೇ ಒಂದು ಕಾರಣದಿಂದಾಗಿ ತಾವೂ ಕೂಡ ಅಂದಿನಿಂದಲೇ ಎಡಗೈ ಬ್ಯಾಟಿಂಗ್ ಅಭ್ಯಾಸವನ್ನು ಬೆಳೆಸಿಕೊಂಡರಂತೆ. ಹೀಗೆ ಚಿಕ್ಕ ವಯಸ್ಸಿನಲ್ಲಿ ಬಲಗೈ ಬ್ಯಾಟ್ಸ್ಮನ್ ಆಗಿದ್ದ ವೆಂಕಟೇಶ್ ಐಯ್ಯರ್ ಈಗ ಎಡಗೈ ಬ್ಯಾಟ್ಸ್ಮನ್ ಆಗಿ ಮಿಂಚುತ್ತಿದ್ದಾರೆ.
ರಜನಿಕಾಂತ್ ನನ್ನ ನೆಚ್ಚಿನ ಹೀರೋ ಎಂದ ವೆಂಕಟೇಶ್ ಐಯ್ಯರ್
ಇನ್ನು ವೆಂಕಟೇಶ್ ಐಯ್ಯರ್ ತನ್ನ ನೆಚ್ಚಿನ ಹೀರೋ ರಜನಿಕಾಂತ್ ಎಂದು ಬಹಿರಂಗಪಡಿಸಿದ್ದಾರೆ. ವೆಂಕಟೇಶ್ ಐಯ್ಯರ್ ಇಂದೋರ್ ನಗರದಲ್ಲಿ ವಾಸಿಸುತ್ತಿದ್ದರೂ ಕೂಡ ಈ ಹಿಂದೆ ರಜನಿಕಾಂತ್ ಚಿತ್ರಗಳು ಬಿಡುಗಡೆಯಾದಾಗ ಬಿಡುಗಡೆಯ ದಿನವೇ ಅವರ ಚಿತ್ರಗಳನ್ನು ವೀಕ್ಷಿಸಲು ಇಂದೋರ್ ನಗರದಿಂದ ಚೆನ್ನೈ ನಗರಕ್ಕೆ ಪ್ರಯಾಣ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಜನಿಕಾಂತ್ ಅವರನ್ನು ಭೇಟಿ ಮಾಡುವ ದಿನ ನನ್ನ ಜೀವನದ ಅತ್ಯಂತ ದೊಡ್ಡ ದಿನವಾಗಲಿದೆ ಎಂದು ಕೂಡ ವೆಂಕಟೇಶ್ ಐಯ್ಯರ್ ಹೇಳಿಕೊಂಡಿದ್ದಾರೆ.