ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರು. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 3 ಐಪಿಎಲ್ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿರುವ ಸಾಧನೆ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 200ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ಧೋನಿಯವರು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿಯೂ ಸಹ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಓರ್ವ ಆಟಗಾರನಾಗಿ ಧೋನಿ ಈ ಹಿಂದೆ ಆಡುತ್ತಿದ್ದ ರೀತಿ ಈ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿಲ್ಲ. ಈಗಾಗಲೇ ಈ ಬಾರಿಯ ಐಪಿಎಲ್ ಟೂರ್ನಿ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಟೂರ್ನಿಯ ಆಗಲಿದೆ ಎಂಬ ಮಾತುಗಳು ಸಾಕಷ್ಟು ಕೇಳಿ ಬರುತ್ತಿವೆ.
ಕಳೆದ ಬಾರಿಯ ಟೂರ್ನಿಯಲ್ಲಿಯೂ ಸಹ ಈ ರೀತಿಯ ಮಾತುಗಳು ಕೇಳಿ ಬಂದಾಗ ಸ್ವತಃ ಮಹೇಂದ್ರ ಸಿಂಗ್ ಧೋನಿ ಅವರೇ ಖಂಡಿತವಾಗಿಯೂ ಐಪಿಎಲ್ ಆಡುವುದನ್ನು ನಿಲ್ಲಿಸುವ ಯೋಚನೆ ಇಲ್ಲ ಎಂದು ಹೇಳಿ ಮತ್ತಷ್ಟು ಐಪಿಎಲ್ ಟೂರ್ನಿಗಳಲ್ಲಿ ಆಡುವುದಾಗಿ ತಿಳಿಸಿದ್ದರು. ಸದ್ಯ ಮಹೇಂದ್ರ ಸಿಂಗ್ ಧೋನಿ ಅವರು ಒಂದುವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಹೋದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕನಾಗಿ ಯಾರು ಮುನ್ನಡೆಸಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾದ ಸುರೇಶ್ ರೈನಾ ಹಾಗೂ ಜಡೇಜಾ ಅವರ ಹೆಸರುಗಳೂ ಸಹ ಈ ಚರ್ಚೆಯಲ್ಲಿ ಕೇಳಿಬಂದಿದ್ದು ಭಾರತದ ಮಾಜಿ ಆಟಗಾರ ಪ್ರಗ್ಯಾನ್ ಓಝಾ ಮಾತ್ರ ಚೆನ್ನೈ ತಂಡದ ಮುಂದಿನ ನಾಯಕ ಯಾರು ಎಂಬ ಚರ್ಚೆಯಲ್ಲಿ ವಿಭಿನ್ನವಾದ ಆಟಗಾರನ ಹೆಸರನ್ನು ಸೂಚಿಸಿದ್ದಾರೆ.
ಪ್ರಗ್ಯಾನ್ ಓಝಾ ಪ್ರಕಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರನಾಗಿರುವ ಕೇನ್ ವಿಲಿಯಮ್ಸನ್ ಎಂಎಸ್ ಧೋನಿ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಸರಿಯಾದ ಆಯ್ಕೆ ಎಂದಿದ್ದಾರೆ. ಪ್ರಸ್ತುತ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಕೇನ್ ವಿಲಿಯಮ್ಸನ್ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ, ಒಂದುವೇಳೆ ಎಂಎಸ್ ಧೋನಿ ಮುಂದಿನ ದಿನಗಳಲ್ಲಿ ಚೆನ್ನೈ ತಂಡವನ್ನು ತೊರೆದರೆ ಆ ಜಾಗಕ್ಕೆ ಕೇನ್ ವಿಲಿಯಮ್ಸನ್ ಅವರನ್ನು ಕರೆತರಬೇಕು ಎಂದು ಓಝಾ ತಿಳಿಸಿದರು. ಕೇನ್ ವಿಲಿಯಮ್ಸನ್ ಚೆನ್ನೈ ತಂಡದ ನಾಯಕತ್ವವನ್ನು ವಹಿಸಿಕೊಂಡರೆ ರವೀಂದ್ರ ಜಡೇಜಾ ಉಪನಾಯಕ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಓಝಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.