ಶುಕ್ರವಾರ ( ಏಪ್ರಿಲ್ 16 ) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್ಗಳ ಭರ್ಜರಿ ಗೆಲುವನ್ನು ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಆರಂಭದಲ್ಲಿಯೇ ಆಘಾತಕ್ಕೊಳಗಾಯಿತು. ಬಹುಬೇಗನೆ ಪ್ರಮುಖ ಆಟಗಾರರ ವಿಕೆಟ್ಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ಗಳು ಪಡೆದು ಪಂಜಾಬ್ ತಂಡವನ್ನು ಶುರುವಿನಿಂದಲೇ ಒತ್ತಡದತ್ತ ತಳ್ಳಿಬಿಟ್ಟರು.
ಪಂಜಾಬ್ ಕಿಂಗ್ಸ್ ತಂಡದ ಬಹುತೇಕ ಎಲ್ಲಾ ಬ್ಯಾಟ್ಸ್ಮನ್ಗಳು ಪವರ್ ಪ್ಲೇ ಒಳಗಡೆ ಪೆವಿಲಿಯನ್ ಸೇರಿಬಿಟ್ಟರು. ಆರನೇ ಕ್ರಮಾಂಕದಲ್ಲಿ ಇಳಿದ ಪಂಜಾಬ್ ತಂಡದ ಶಾರುಖ್ ಖಾನ್ ಮಾತ್ರ 36 ಎಸೆತಗಳಲ್ಲಿ 47 ರನ್ ಗಳಿಸಿ ಸ್ಯಾಮ್ ಕರನ್ ಗೆ ವಿಕೆಟ್ ಒಪ್ಪಿಸಿದರು. ಶಾರುಖ್ ಖಾನ್ ಬಿಟ್ಟರೆ ಪಂಜಾಬ್ ಕಿಂಗ್ಸ್ ತಂಡದ ಬೇರೆ ಯಾವುದೇ ಆಟಗಾರನೂ ಸಹ 15ಕ್ಕಿಂತ ಹೆಚ್ಚಿನ ರನ್ ಗಳಿಸಲಾಗಲಿಲ್ಲ. ಹೀಗಾಗಿ 20 ಓವರ್ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ 8 ವಿಕೆಟ್ ನಷ್ಟಕ್ಕೆ ಕೇವಲ 106 ರನ್. ಪಂಜಾಬ್ ತಂಡ ನೀಡಿದ್ದ 107 ರನ್ಗಳ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ನಷ್ಟಕ್ಕೆ ಕೇವಲ 15.4 ಓವರ್ಗಳಲ್ಲಿಯೇ ಪಂದ್ಯವನ್ನು ಗೆದ್ದು ಬೀಗಿತು.
ಪಂಜಾಬ್ ತಂಡ ಹೀನಾಯವಾಗಿ ಸೋಲನ್ನು ಕಂಡ ನಂತರ ಪಂದ್ಯದ ಕುರಿತು ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಮಾತನಾಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ವೈಫಲ್ಯದ ಕುರಿತು ಮಾತನಾಡಿದ ಕೆಎಲ್ ರಾಹುಲ್ ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲನ್ನನುಭವಿಸಿದೆವು ಎಂದು ಹೇಳಿಕೊಂಡಿದ್ದಾರೆ.
ಹೇಳುವುದಕ್ಕೆ ಹೆಚ್ಚೇನೂ ಇಲ್ಲ, ಮೊದಲ 7 ಅಥವಾ 8 ಓವರ್ ಒಳಗಡೆ ತಂಡವೊಂದರ 5 ವಿಕೆಟ್ಗಳು ಬಿದ್ದರೆ ಆ ತಂಡ ಸೋಲುವುದು ಖಚಿತ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ಗಳು ಉತ್ತಮ ಬೌಲಿಂಗ್ ನಡೆಸಿದರು ಹಾಗೂ ನಮ್ಮ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಾವು ಆಡಿದ ಮೊದಲ ಪಂದ್ಯದಲ್ಲಿಯೇ 221 ರನ್ ಗಳಿಸಿದ್ದೆವು, ಆದರೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಗಳಿಸಿದ್ದ ಅರ್ಧದಷ್ಟು ಮೊತ್ತವನ್ನೂ ಕೂಡ ಗಳಿಸಲಿಲ್ಲ ಎಂದು ಕೆ ಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದರು.