ಈ ರೀತಿಯ ಆಟದ ಅನುಭವ ನಮಗೆ ಮೊದಲೇ ಇತ್ತು
ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಸುಲಭವಾಗಿ ಗೆಲ್ಲಲಿದೆ, ಇನ್ನೂ ಒಂದೆರಡು ಓವರ್ ಬಾಕಿ ಇರುವಾಗಲೇ ಪಂಜಾಬ್ ಕಿಂಗ್ಸ್ ತಂಡ ಗೆಲುವು ಸಾಧಿಸಲಿದೆ ಎಂದೆಲ್ಲಾ ಊಹೆಗಳನ್ನು ಮಾಡಲಾಗುತ್ತಿತ್ತು ಆದರೆ ಕೊನೆಯ ಹಂತದಲ್ಲಿ ಎಡವಿದ ಪಂಜಾಬ್ ಕಿಂಗ್ಸ್ ಸೋಲುಂಡಿತು. ಈ ಕುರಿತು ಮಾತನಾಡಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಈ ರೀತಿಯ ಪಂದ್ಯಗಳ ಅನುಭವ ನಮಗೆ ಈ ಹಿಂದೆಯೇ ಆಗಿದೆ, 18ನೇ ಓವರ್ನಲ್ಲಿ ಪಂದ್ಯವನ್ನು ಮುಗಿಸುವ ಯೋಜನೆಯಲ್ಲಿದ್ದೆವು ಆದರೆ ಎಷ್ಟೇ ಪ್ರಯತ್ನಿಸಿದರೂ ಪಂದ್ಯ ಕೊನೆಯ ಹಂತದಲ್ಲಿ ನಮ್ಮ ಕೈತಪ್ಪಿತು. ನಮಗೆ ಈ ಹಿಂದಿನ ಪಂದ್ಯಗಳಲ್ಲಿ ಇಂತಹ ಅನುಭವ ಇದ್ದರೂ ಸಹ ಪಾಠವನ್ನು ಕಲಿತಿಲ್ಲ ಎಂದು ಹೇಳುವ ಮೂಲಕ ತಂಡದ ಎಲ್ಲಾ ಆಟಗಾರರೂ ಈ ಸೋಲಿಗೆ ಹೊಣೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
ಮುಂದಿನ ಪಂದ್ಯಗಳನ್ನು ಗೆಲ್ಲುವ ಭರವಸೆ ವ್ಯಕ್ತಪಡಿಸಿದ ರಾಹುಲ್
ಹೀಗೆ ಪಂದ್ಯದ ಸೋಲಿಗೆ ತಂಡದ ಎಲ್ಲ ಆಟಗಾರರು ಹೊಣೆ ಎಂಬರ್ಥದಲ್ಲಿ ಮಾತನಾಡಿದ ಕೆಎಲ್ ರಾಹುಲ್ ಉಳಿದಿರುವ 5 ಪಂದ್ಯಗಳನ್ನು ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದರು. ಹೌದು, ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಗೆಲುವು ಸಾಧಿಸಿ ಮತ್ತೆ ಯಶಸ್ಸಿನ ಹಾದಿಗೆ ಮರಳುತ್ತೇವೆ ಎಂಬ ವಿಶ್ವಾಸವನ್ನು ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ವ್ಯಕ್ತಪಡಿಸಿದರು.
ಸುಲಭವಾಗಿ ಗೆಲ್ಲುವ ಪಂದ್ಯ ಕೈಚೆಲ್ಲಿದ ಪಂಜಾಬ್
ಹೌದು ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡ ಸುಲಭವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. 120 ರನ್ಗಳವರೆಗೂ ಯಾವುದೇ ವಿಕೆಟ್ ಕಳೆದುಕೊಳ್ಳದೆ ಉತ್ತಮ ಹಂತದಲ್ಲಿದ್ದ ಪಂಜಾಬ್ ಕಿಂಗ್ಸ್ 18 ಅಥವಾ 19 ಓವರ್ಗಳಲ್ಲಿ ಗೆಲುವಿನ ಗುರಿ ಮುಟ್ಟಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಂತಿಮ 3 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ಗಳ ಅದ್ಬುತ ಪ್ರದರ್ಶನದಿಂದ ಪಂದ್ಯ ಕೊನೆಯ ಓವರ್ಗೆ ತಲುಪಿತು, 6 ಎಸೆತಗಳಿಗೆ 4 ರನ್ಗಳ ಅಗತ್ಯತೆ ಇತ್ತು. ಆದರೆ ಕೊನೆಯ ಓವರ್ ಬೌಲಿಂಗ್ ಮಾಡಿದ ರಾಜಸ್ಥಾನ್ ತಂಡದ ಬೌಲರ್ ಕಾರ್ತಿಕ್ ತ್ಯಾಗಿ ಕೊನೆ ಓವರ್ನಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆದು ಪಂಜಾಬ್ ತಂಡವನ್ನು ಸೋಲಿನೆಡೆಗೆ ತಳ್ಳಿದರು. ಹೀಗೆ ಅಂತಿಮ ಹಂತದವರೆಗೂ ಸುಲಭವಾಗಿ ಗೆಲ್ಲುವ ಅವಕಾಶವನ್ನು ಹೊಂದಿದ್ದ ಪಂಜಾಬ್ ಕಿಂಗ್ಸ್ ತಂಡ ಕೊನೆಯ ಹಂತದಲ್ಲಿ ಪಂದ್ಯವನ್ನು ಕೈಚೆಲ್ಲಿತು.