ಬೆಂಗಳೂರು, ಆಗಸ್ಟ್, 26: ಈ ಬಾರಿಯ ಐಪಿಎಲ್ ಆವೃತ್ತಿಯ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ತಿಂಗಳು ದುಬೈನಲ್ಲಿ ನಡೆಯಲಿರುವ ಈ ಟೂರ್ನಿಯ ಪಂದ್ಯಗಳಿಗೆ ಕೆಲ ಪ್ರಮುಖ ಆಟಗಾರರು ಭಾಗಿಯಾಗುತ್ತಿಲ್ಲ. ಅದರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಪ್ಯಾಟ್ ಕಮ್ಮಿನ್ಸ್ ಕೂಡ ಪ್ರಮುಖರು. ಹೀಗಾಗಿ ಕಮ್ಮಿನ್ಸ್ ಸ್ಥಾನಕ್ಕೆ ಕೆಕೆಆರ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ನ ಸ್ಟಾರ್ ವೇಗಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಈ ಬಾರಿಯ ಐಪಿಎಲ್ನ ಉಳಿದ ಪಂದ್ಯಗಳಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಯಾಟ್ ಕಮ್ಮಿನ್ಸ್ ಅವರ ಬದಲಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಟಿಮ್ ಸೌಥಿ ಅವರನ್ನು ಆಯ್ಕೆ ಮಾಡಿಕೊಂಡಿದೆ. ಪ್ಯಾಟ್ ಕಮ್ಮಿನ್ಸ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣದಿಮದಾಗಿ ಈ ಬಾರಿಯ ಐಪಿಎಲ್ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ.
ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್
ಟಿಮ್ ಸೌಥಿ ಐಪಿಎಲ್ನೊಂದಿಗೆ ಈ ಒಪ್ಪಂದವನ್ನು ಮಾಡಿಕೊಂಡಿರುವ ಕಾರಣದಿಂದಾಗಿ ನ್ಯೂಜಿಲೆಂಡ್ ತಂಡದ ಎರಡು ಪ್ರವಾಸಗಳಿಂದ ಹೊರಗುಳಿಯುವುದು ಖಚಿತವಾಗಿದೆ. ಐಪಿಎಲ್ ಆಯೋಜನೆಯಾಗಿರುವ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡದ ವಿರುದ್ಧ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಭಾಗಿಯಾಗಲಿದೆ. ಐಪಿಎಲ್ನಲ್ಲಿ ಭಾಗಿಯಾಗಲಿರುವ ಆಟಗಾರರನ್ನು ಹೊರತುಪಡಿಸಿ ಉಳಿದ ಆಟಗಾರರ ತಂಡ ಈ ಪ್ರವಾಸಕ್ಕೆ ತೆರಳಲಿದೆ. ಈಗ ಈ ತಂಡದಿಂದ ಟಿಮ್ ಸೌಥಿ ಕೂಡ ಹೊರಗುಳಿಯುವುದು ಸ್ಪಷ್ಟವಾಗಿದೆ.
33ರ ಹರೆಯದ ನ್ಯೂಜಿಲೆಂಡ್ನ ಈ ವೇಗದ ಬೌಲರ್ ಇದಕ್ಕೂ ಮುನ್ನ ಐಪಿಎಲ್ನಲ್ಲಿ ಭಾಗಿಯಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಪ್ಯಾಟ್ ಕಮ್ಮಿನ್ಸ್ ಕಣಕ್ಕಿಳಿದಿದ್ದಾರೆ. ಈಗ ಕೆಕೆಆರ್ ತಂಡದ ಪರವಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಸೇರ್ಪಡೆ ಕೆಕೆಆರ್ ಪಾಲಿಗೆ ಮಹತ್ವದ್ದಾಗಿದೆ.
ಆದರೆ ಟಿಮ್ ಸೌಥಿ ಐಪಿಎಲ್ನಲ್ಲಿ ಈವರೆಗೆ ಆಡಿದ ಪಂದ್ಯಗಳ ಅಂಕಿಅಂಶಗಳನ್ನು ಗಮನಿಸಿದರೆ ಉತ್ತಮ ದಾಖಲೆಯನ್ನು ಹೊಂದಿಲ್ಲ. ಐಪಿಎಲ್ನಲ್ಲಿ ಈವರೆಗೆ ಒಟ್ಟು 40 ಪಂದ್ಯಗಳಲ್ಲಿ ಸೌಥಿ ಆಡಲು ಇಳಿದಿದ್ದಾರೆ. ಆದರೆ 46.18ರ ಸರಾಸರಿಯಲ್ಲಿ ಕೇವಲ 28 ವಿಕೆಟ್ಗಳನ್ನು ಮಾತ್ರವೇ ಕಬಳಿಸಿದ್ದಾರೆ. 8.74ರಷ್ಟು ಎಕಾನಮಿ ಹೊಂದಿರುವ ಕಿವೀಸ್ ತಂಡದ ಈ ವೇಗಿ 2019ರ ಬಳಿಕ ಐಪಿಎಲ್ನಲ್ಲಿ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ಆದರೆ ಈಗ ಬದಲಿ ಆಟಗಾರನಾಗಿ ಸೌಥಿ ಸೇರ್ಪಡೆಯಾಗಿದ್ದು ಈ ಬಾರಿಯ ಐಪಿಎಲ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇನ್ನು ಈ ಬಾರಿಯ ಆವೃತ್ತಿಯ ಮೊದಲ ಚರಣದ ಪಂದ್ಯಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕಳಪೆ ಪ್ರದರ್ಶನ ನೀಡಿದ್ದು ಅಂಕಪಟ್ಟಿಯಲ್ಲಿ ತಳ ಕಂಡಿದೆ. ಆಡಿದ ಏಳು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿರುವ ಕೆಕೆಆರ್ ಐದರಲ್ಲಿ ಸೋಲು ಕಂಡಿದೆ. ಇದರ ಪರಿಣಾಮವಾಗಿ ಅಂಕಪಟ್ಟಿಯಲ್ಲಿ ಈಗ ಏಳನೇ ಸ್ಥಾನದಲ್ಲಿದೆ. ಟಿಮ್ ಸೌಥಿ ಸೇರ್ಪಡೆಯಿಂದ ತಂಡದಲ್ಲಿ ಸಕಾರಾತ್ಮಕ ಬದಲಾವಣೆಯಾಗಲಿದ್ದು ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಹೊಂದಿದೆ.
ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ಎರಡನೇ ದಿನದ ಹವಾಮಾನ ವರದಿ
ಸ್ವತಃ ನಾಯಕ ಇಯಾನ್ ಮಾರ್ಗನ್ ಬ್ಯಾಟಿಂಗ್ನಲ್ಲಿ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ರಣತಂತ್ರದಲ್ಲಿಯೂ ಸಾಕಷ್ಟು ಎಡವಟ್ಟುಗಳು ನಡೆಯುತ್ತಿರುವುದು ತಂಡದ ಈ ಸ್ಥಿತಿಗೆ ಕಾರಣವಾಗಿದೆ. ಇದರ ಜೊತೆಗೆ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ವೃಗವಾಗಿ ರನ್ಗಳಿಸಲು ವಿಫಲವಾಗುತ್ತಿರುವುದು ಕೂಡ ತಂಡ ಹೆಚ್ಚಿನ ಪಂದ್ಯಗಳಲ್ಲಿ ಸೋಲನ್ನು ಕಾಣಲು ಕಾರಣವಾಗಿದೆ. 2018ರ ಐಪಿಎಲ್ ಆವೃತ್ತಿಯಿಂದ ಪ್ಲೇಆಫ್ಗೆ ಏರಲು ವಿಫಲವಾಗುತ್ತಿರುವ ಕೆಕೆಆರ್ ಈ ಬಾರಿಯ ಆವೃತ್ತಿಯಲ್ಲಿ ಅದನ್ನು ಸಾಧಿಸಲು ಹರಸಾಹಸ ಪಡುತ್ತಿದೆ. 2020ರ ಆವೃತ್ತಿಯ ಮಧ್ಯ ಭಾಗದಲ್ಲಿ ದಿನೇಶ್ ಕಾರ್ತಿಕ್ ಹೆಗಲ ಮೇಲಿದ್ದ ನಾಯಕತ್ವದ ಜವಾಬ್ಧಾರಿಯನ್ನು ಇಯಾನ್ ಮಾರ್ಗನ್ಗೆ ನೀಡಲಾಗಿತ್ತು. ಆದರೆ ನಾಯಕತ್ವ ಬದಲಾವಣೆ ಮಾತ್ರದಿಂದ ತಂಡದಲ್ಲಿ ದೊಡ್ಡ ಬದಲಾವಣೆಗಳು ಸಾಧ್ಯವಾಗುವುದಿಲ್ಲ ಎಂದು ಸಾಬೀತಾಗಿದೆ. ತಂಡದ ಆಟಗಾರರು ಮುಂದೆ ಬಂದು ಪ್ರದರ್ಶನ ನೀಡುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.